ಬೆಂಗಳೂರು : ಕರ್ನಾಟಕ ವಿಧಾನ ಮಂಡಲ ಮುಂಗಾರು ಅಧಿವೇಶನ ಆರಂಭಗೊಂಡಿದೆ. ಸಾಮಾನ್ಯವಾಗಿ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ವಿಧಾನಸೌಧ ಗಿಜುಗಿಡುತ್ತಿತ್ತು. ಆದರೆ, ಈ ಬಾರಿ ಬರೋಬ್ಬರಿ 70ಕ್ಕೂ ಅಧಿಕ ಶಾಸಕರು ಅಧಿವೇಶನಕ್ಕೆ ಗೈರು ಹಾಜರಾಗಿದ್ದಾರೆ.

ಡಿಸಿಎಂ ಅಶ್ವಥ್ ನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಗೋಪಾಲಯ್ಯ, ಬೈರತಿ ಬಸವರಾಜು, ಉಮಾನಾಥ್ ಕೋಟ್ಯಾನ್, ಎಂ.ಪಿ.ಕುಮಾರಸ್ವಾಮಿ, ಎಸ್.ಆರ್. ವಿಶ್ವನಾಥ್, ಪ್ರಭು ಚವ್ಹಾಣ್, ಶಶಿಕಲಾ ಜೊಲ್ಲೆ, ಎಚ್.ಪಿ. ಮಂಜುನಾಥ, ಬಿ. ನಾರಾಯಣ ರಾವ್, ಡಿ.ಎಸ್. ಹುಲಗೇರಿ, ಬಸನಗೌಡ ದದ್ದಲ್, ಪ್ರಿಯಾಂಕ ಖರ್ಗೆ, ಕುಸುಮಾ ಶಿವಳ್ಳಿ, ಬಿ.ಕೆ. ಸಂಗಮೇಶ, ವೆಂಕಟ ರಾವ್ ನಾಡಗೌಡ, ಡಿ.ಸಿ.ಗೌರಿಶಂಕರ್, ಕೆ.ಮಹದೇವ್ ಕೊರೊನಾ ಸೋಂಕಿಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಸುಮಾರು 50ಕ್ಕೂ ಹೆಚ್ಚು ಶಾಸಕರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಐಸೋಲೇಷನ್ನಲ್ಲಿದ್ದಾರೆ. ಇನ್ನು ಸೋಂಕಿನ ಭೀತಿ ಹಿನ್ನೆಲೆ ಯಲ್ಲಿ 70 ವರ್ಷ ಮೇಲ್ಪಟ್ಟ ಶಾಸಕರು ಸದನಕ್ಕೆ ಗೈರಾಗಿದ್ದಾರೆ. ಸಾರ್ವಜನಿಕರು, ಶಾಸಕರ ಪಿಎ ಮತ್ತು ಗನ್ ಮ್ಯಾನ್ಗಳಿಗೆ ವಿಧಾನಸಭಾ ಅಧಿವೇಶನಕ್ಕೆ ಪ್ರವೇಶ ಇಲ್ಲ. ಹಾಗಾಗಿ ಈ ಬಾರಿಯ ಸದನ ಖಾಲಿ ಖಾಲಿ ಎನಿಸುತ್ತಿದೆ.

ಕಲಾಪ ಆರಂಭಕ್ಕೂ ಮುನ್ನ ಇತ್ತೀಚಿಗೆ ಅಗಲಿದ ಗಣ್ಯರಿಗೆ ಸದನದಲ್ಲಿ ಸಂತಾಪ ಸೂಚಿಸಲಾಯಿತು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಸಂಸದ ಅಶೋಕ್ ಗಸ್ತಿ, ಶಾಸಕ ಸತ್ಯನಾರಾಯಣ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ವಿಧಾನ ಮಂಡಳ ಕಲಾಪ ಆರಂಭವಾದ ನಂತರವೂ ಶಾಸಕರು ವಿಧಾನ ಸೌಧಕ್ಕೆ ಆಗಮಿಸದೇ ಇರೋದ್ರಿಂದಾಗಿ ಆಡಳಿತ ಮತ್ತು ವಿಪಕ್ಷ ಕುರ್ಚಿಗಳು ಖಾಲಿ ಖಾಲಿ ಕಾಣಿಸುತ್ತಿದ್ದವು.