ಕನ್ನಡ ಸಿನಿರಂಗದ ಅನಭಿಷಿಕ್ತ ದೊರೆ ಡಾ. ರಾಜ್ಕುಮಾರ್. ಸ್ಯಾಂಡಲ್ವುಡ್ಗೆ ಎಷ್ಟೇ ಜನ ನಟರು ಬಂದರು ಹೋದರೂ ಅಣ್ಣಾವ್ರ ಸಮಕ್ಕೆ ಯಾರು ಬರಲು ಸಾಧ್ಯವಿಲ್ಲ. 200ಕ್ಕೂ ಅಧಿಕ ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ ನಾಯಕ ಡಾ. ರಾಜ್ಕುಮಾರ್. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಭಕ್ತಿ ಪ್ರಧಾನ, ಬಾಂಡ್ ಯಾವುದೇ ಶೈಲಿ ಆದರೂ ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ. ನಿರ್ದೇಶಕ ಮಂಸೋರೆ (Director Mansore) ನಟನೆಯಲ್ಲಿ ನನಗೆ ಡಾ. ರಾಜ್ಕುಮಾರ್, ನಿರ್ದೇಶನದಲ್ಲಿ ಸ್ಪಿಲ್ ಬರ್ಗ್ ಸ್ಫೂರ್ತಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡ ಪೋಸ್ಟ್ ವೈರಲ್ ಆಗಿದೆ.
ನಿರ್ದೇಶಕ ಮಂಸೋರೆ ತಮ್ಮ ಟ್ವಿಟರ್ನಲ್ಲಿ, “ಇಷ್ಟು ವರ್ಷಗಳ ಕನ್ನಡ ಸಿನಿರಂಗದಲ್ಲಿ ಜನಪ್ರಿಯ ಸ್ಟಾರ್, ಲೆಜೆಂಡ್ ಅಂದರೆ ಅದು ಕೇವಲ ಡಾ.ರಾಜ್ಕುಮಾರ್, ಅಣ್ಣಾವ್ರು ಒಬ್ಬರೇ. ಸ್ಟಾರ್ ನಟರು ಯಾವುದೋ ಒಂದು ಮಾದರಿಯ ಪಾತ್ರವನ್ನು ಮಾಡಿದರೆ ಮಾತ್ರ ಅವರ ಸಿನಿಮಾ ಪ್ರೇಕ್ಷಕರು ನೋಡುತ್ತಾರೆ ಎಂಬ ಇಂದಿನ ಕಾಲದಲ್ಲಿ ನಾವಿದ್ದೇವೆ. ಆದರೆ ಅಣ್ಣಾವ್ರು ಆ ಬಿಗ್ ಮಿಥ್ನ ಒಡೆದಿದ್ದವರು. ಅವರು ಯಾವ ಪಾತ್ರ ಮಾಡಿದರೂ ಪ್ರೇಕ್ಷಕರು ಅವರ ಸಿನಿಮಾ ನೋಡುತ್ತಿದ್ದರು. ಬಹುಶಃ ಭವಿಷ್ಯದಲ್ಲಿ ಯಾವ ಸ್ಟಾರ್ ನಟರು ಬಂದರೂ ಅಣ್ಣಾವರಷ್ಟು ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಲು ಸಾಧ್ಯವೇ ಇಲ್ಲಾ.
ಈಗಿನ ಸ್ಟಾರ್ ನಟರಿಗೆ ಸ್ಟಾರ್ಗಿರಿ ಉಳಿಯಬೇಕೆಂದರೆ ನಿರ್ದಿಷ್ಟ ಪಾತ್ರ ಮಾಡಿದರೆ ಮಾತ್ರ ಗೆಲುವು, ಭವಿಷ್ಯ. ಆದರೆ ಅಣ್ಣಾವ್ರು ಮಾಡಿದ ಪಾತ್ರಗಳಿಗೆಲ್ಲಾ ಗೆಲುವು ಸಿಕ್ಕಿತ್ತು. ‘ಸನಾದಿ ಅಪ್ಪಣ್ಣ’ ಮಾಡಿದವರೇ ‘ಆಪರೇಷನ್ ಡೈಮಂಡ್ ರಾಕೆಟ್’ ಮಾಡಿದರು. ‘ಒಂದು ಮುತ್ತಿನ ಕತೆ’ ಮಾಡಿವರೇ ‘ಜೀವನಚೈತ್ರ’ ಕೂಡ ಮಾಡಿದರು. ‘ಭೂದಾನ’ದಲ್ಲಿ ಕಲ್ಯಾಣ್ಕುಮಾರ್, ಉದಯ್ಕುಮಾರ್ ಅವರ ತಂದೆಯ ಪಾತ್ರ ಮಾಡಿದವರೇ ‘ಮಯೂರ ವರ್ಮ’ನಾಗಿಯೂ ತೆರೆಯ ಮೇಲೆ ಮೆರೆದರು. ನಿರ್ದಿಷ್ಟ ಪ್ರಕಾರಕ್ಕೆ ಸಿಲುಕದ ನಿರ್ದೇಶಕ ಸ್ಪಿಲ್ಬರ್ಗ್ ರವರಷ್ಟೇ ನಟನೆಯಲ್ಲಿ ಯಾವುದೇ ನಿರ್ದಿಷ್ಟ ಪ್ರಕಾರ ಸಿಲುಕದ ಏಕೈಕ ನಟ ನಮ್ ಅಣ್ಣಾವ್ರು. ಸಿನಿಮಾರಂಗದಲ್ಲಿ ಇವರಿಬ್ಬರೂ ಎಂದೆಂದಿಗೂ ನನಗೆ ಸ್ಫೂರ್ತಿ” ಎಂದು ಬರೆದುಕೊಂಡಿದ್ದಾರೆ.
#ಅಣ್ಣಾವ್ರು ❤❤❤ pic.twitter.com/1mPD1QBJo9
— ಮಂಸೋರೆ/ManSoRe (@mansore25) February 9, 2023
ಇದನ್ನೂ ಓದಿ : ವಾಲ್ಮೀಕಿ ಜಾತ್ರೆಗೆ ಸುದೀಪ್ ಬಾರದ್ದಕ್ಕೆ ಫ್ಯಾನ್ಸ್ ಆಕ್ರೋಶ : ಕರೆದಿದ್ದರೆ ಖಂಡಿತ ಬರುತ್ತಿದ್ದೆ ಎಂದ ಸುದೀಪ್!
ಇದನ್ನೂ ಓದಿ : ಭಾರತೀಯ ಬಳಕೆದಾರರಿಗೆ ಎಚ್ಚರಿಕೆ : ಈ 4 ದೇಶಗಳಲ್ಲಿ ಪಾಸ್ವರ್ಡ್ ಹಂಚಿಕೆ ಕೊನೆಗೊಳಿಸಿದ ನೆಟ್ಫ್ಲಿಕ್ಸ್
ಇದನ್ನೂ ಓದಿ : ಜೈಲು ಶಿಕ್ಷೆಗೆ ಗುರಿಯಾಗಿರುವ ನಟಿ ಅಭಿನಯ ನಾಪತ್ತೆ : ಖ್ಯಾತ ನಟಿಗಾಗಿ ಪೊಲೀಸರ ಶೋಧ
ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಸಿನಿರಂಗದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ಮಂಸೋರೆ. ‘ಅರಿವು’, ‘ನಾತಿಚರಾಮಿ’ ಹಾಗೂ ‘ಆಕ್ಟ್ 1978’ ರೀತಿಯ ಸಿನಿಮಾಗಳಿಂದ ಕನ್ನಡ ಸಿನಿರಂಗದಲ್ಲಿ ಭರವಸೆ ಮೂಡಿಸಿದ್ದಾರೆ. ಸದ್ಯ ‘19.20.21’ ಎನ್ನುವ ವಿಭಿನ್ನ ಟೈಟಲ್ ಸಿನಿಮಾಕ್ಕೆ ಮಂಸೋರೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಸದ್ಯ ಮಂಸೋರೆ ಮಾಡಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
The post written by director Mansore about Dr.Rajkumar went viral.