ದಕ್ಷಿಣ ಕನ್ನಡ : Project Cheetah team : ಏಳು ದಶಕದ ಬಳಿಕ ಆಫ್ರಿಕಾದಿಂದ ಭಾರತಕ್ಕೆ ಚೀತಾ ಮರು ಪ್ರವೇಶ ಪಡೆದಿದೆ. ಸುಮಾರು ಎಂಟು ಸಾವಿರ ಕಿ.ಮೀ ದೂರದಿಂದ ವಿಮಾನದ ಮೂಲಕ ಚೀತಾಗಳನ್ನು ಯಶಸ್ವಿಯಾಗಿ ಕರೆ ತರಲಾಗಿದೆ. ಆದ್ರೆ ಈ ಎಂಟು ಚೀತಾಗಳ ಐತಿಹಾಸಿಕ ಪಯಣದ ಹಿಂದೆ ಕನ್ನಡಿರೊಬ್ಬರು ಪ್ರಮುಖ ಪಾತ್ರ ವಹಿಸಿದ್ದು ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ.
ಹೌದು..ಎಪ್ಪತ್ತು ವರ್ಷದ ಬಳಿಕ ಚೀತಾ ಭಾರತಕ್ಕೆ ಮರುಪ್ರವೇಶ ಪಡೆದಿದೆ. ನಮೀಬಿಯಾದಿಂದ ರವಾನಿಸಲಾದ ಈ ಎಂಟು ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿಯೆ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆಗೊಳಿಸಿದ್ದಾರೆ. ವಿಶೇಷ ಬೋಯಿಂಗ್-747 ವಿಮಾನದಲ್ಲಿ ಎಂಟು ಸಾವಿರ ಕಿ.ಮೀ ದೂರದಿಂದ ಇದನ್ನು ತರಲಾಗಿದೆ. ಈ ಚೀತಾ ಶಿಫ್ಟ್ ಮಾಡುವ ತಂಡದಲ್ಲಿ ಕರ್ನಾಟಕದ ವ್ಯಕ್ತಿಯೊಬ್ಬರು ಸಹ ಇದ್ದಾರೆ. ಅವರೇ ಈ ಫೋಟೋದಲ್ಲಿರುವ ಡಾ ಸನತ್ ಕೃಷ್ಣ ಮುಳಿಯ. ಮೂಲತ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಯುವ ವನ್ಯಜೀವಿ ತಜ್ಞ ಡಾ ಸನತ್ ಕೃಷ್ಣ ತಮ್ಮ ಗಣನೀಯ ಸಾಧನೆಯಿಂದಾಗಿ ಈ ಪ್ರಾಜೆಕ್ಟ್ ಚೀತಾ ತಂಡಕ್ಕೆ ಆಯ್ಕೆಯಾಗಿದ್ದರು.
ವನ್ಯ ಜೀವಿ ಮತ್ತು ಅರಿವಳಿಕೆ ಕ್ಷೇತ್ರದಲ್ಲಿ ತಜ್ಞರಾಗಿರುವ ಇವರು ವೈಲ್ಡ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡಿದ್ದರು. ಆಫ್ರಿಕಾದ ಬೋರ್ಸ್ವಾನದಲ್ಲಿ ಒಂದೂವರೆ ವರ್ಷಗಳ ಕಾಲ ವನ್ಯಜೀವಿಗಳ ಬಗ್ಗೆ ಅಧ್ಯಯನ, ಸಂಶೋಧನೆ, ವ್ಯಾಸಾಂಗ ಮಾಡಿದ್ದರು. ಈ ಅನುಭವದಿಂದಲೇ ಪ್ರಾಜೆಕ್ಟ್ ಚೀತಾಕ್ಕೆ ಆಯ್ಕೆಯಾಗಿದ್ದರು. ಎಲ್ಲಾ ಚೀತಾಗಳನ್ನು ಗ್ವಾಲಿಯರ್ಗೆ ಕರೆದೊಯ್ಯುವ ಮುನ್ನ ವೈದ್ಯಕೀಯ ತಪಾಸಣೆಗೆ ಒಳಪಡಿಸುವ ಜವಬ್ಧಾರಿ ಇವರ ತಂಡದ್ದಾಗಿತ್ತು. ನಮೀಬಿಯಾದಿಂದ ಗ್ವಾಲಿಯರ್ಗೆ ವಿಮಾನದಲ್ಲಿ ಹತ್ತು ಗಂಟೆಗಳ ಪ್ರಯಾಣದ ಮೂಲಕ ಸುರಕ್ಷಿತವಾಗಿ ಕರೆ ತರಲಾಯಿತು. ಇಳಿಸಿದ ಬಳಿಕವೂ ಮತ್ತೊಮ್ಮೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಈ ರೀತಿ ಪ್ರಾಜೆಕ್ಟ್ ಚೀತಾ ತಂಡದಲ್ಲಿ ಅರಿವಳಿಕೆ ತಜ್ಞರಾಗಿ ಸನತ್ ಕೃಷ್ಣ ಅಮೋಘ ಸೇವೆ ಸಲ್ಲಿಸಿದ್ದಾರೆ.
ಸದ್ಯ ಡಾ ಸನತ್ ಕೃಷ್ಣ ಕೇಂದ್ರ ಪರಿಸರ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಜಿಯಾಲಜಿಕಲ್ ಪಾರ್ಕ್ನಲ್ಲಿ ಡೆಪ್ಯುಟಿ ಸೆಕ್ರೆಟರಿ ಆಗಿ ಕಳೆದ ಆರು ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ಹೆಬ್ಬಾಳದಲ್ಲಿ ಪಶುವೈದ್ಯಕೀಯ ಕಲಿತ ಇವರು ಆರು ತಿಂಗಳು ಬನ್ನೇರುಘಟ್ಟದಲ್ಲಿಯೂ ಕೆಲಸ ಮಾಡಿದ್ದಾರೆ. ಒಟ್ಟಿನಲ್ಲಿ ಪ್ರಧಾನಿ ಅವರಿಂದಲೇ ಶಹಬ್ಬಾಸ್ ಪಡೆದ ಪ್ರಾಜೆಕ್ಟ್ ಚೀತಾ ತಂಡದಲ್ಲಿ ಕನ್ನಡಿಗರು ಇದ್ದರು ಎಂಬುದೇ ನಮಗೆಲ್ಲರಿಗೂ ಹೆಮ್ಮೆ.
ಇದನ್ನು ಓದಿ : Team India New Jersey : ಟಿ20 ವಿಶ್ವಕಪ್: ಟೀಮ್ ಇಂಡಿಯಾದ ಹೊಸ ಜರ್ಸಿ ಅನಾವರಣ; ಹೊಸ ಲುಕ್ ಸೂಪರ್
Dr. Sanath Krishna from Puttur in the Project Cheetah team