ಉಡುಪಿ : ಮದುವೆ, ಮೆಹಂದಿ ಕಾರ್ಯಗಳಲ್ಲಿ ಭಾಗಿಯಾದವರಲ್ಲಿಯೇ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದೆ. ಹೀಗಾಗಿ ಮದುವೆ ಸಮಾರಂಭ ಗಳನ್ನು ಮುಂದೂಡಿಕೆ ಮಾಡುವುದರ ಮೂಲಕ ಹಿರಿಯರನ್ನು ಉಳಿಸಿಕೊಳ್ಳಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮನವಿ ಮಾಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಕೊಂಚ ಮಟ್ಟಿಗೆ ಇಳಿಕೆಯನ್ನು ಕಾಣುತ್ತಿದೆ. ಆದ್ರೆ ಜಿಲ್ಲೆಯಲ್ಲಿ ಮದುವೆ ಹಾಗೂ ಮೆಹಂದಿ ಕಾರ್ಯಕ್ರಮ ಗಳಿಂದಲೇ ಸೋಂಕು ಹರಡುತ್ತಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾದವರೇ ಹೆಚ್ಚಾಗಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಅಲ್ಲದೇ ಅಗತ್ಯ ವಸ್ತುಗಳ ಖರೀದಿಯ ನೆಪದಲ್ಲಿ ಅಂಗಡಿಗಳಿಗೆ ಬರುತ್ತಿರುವವರಲ್ಲಿಯೇ ಸೋಂಕು ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿ ಐಸೋಲೇಷನ್ ಗೆ ಒಳಗಾದ ವರಲ್ಲಿ ಮಾಹಿತಿಯನ್ನು ಕಲೆ ಹಾಕಿದಾಗ ಜಿಲ್ಲೆಯಲ್ಲಿ ಹೆಚ್ಚಾಗಿ ಮದುವೆ, ಮೆಹಂದಿ ಹಾಗೂ ಅಗತ್ಯ ವಸ್ತುಗಳ ಖರೀದಿಗೆ ತೆರಳಿದವರಲ್ಲಿಯೇ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಮದುವೆ ಕಾರ್ಯಕ್ರಮವನ್ನು ಮುಂದೂಡಿಕೆ ಮಾಡುವುದು ಒಳಿತು ಎಂದಿದ್ದಾರೆ.
ಮೆಹಂದಿ ಕಾರ್ಯಕ್ರಮ ಆಯೋಜನೆ ಮಾಡುವವರ ವಿರುದ್ದ ಈಗಾಗಲೇ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುತ್ತಿದೆ.ಇನ್ಮುಂದೆ ಮೆಹಂದಿ ಕಾರ್ಯಕ್ರಮ ದಲ್ಲಿ ಭಾಗಿಯಾಗುವವರ ವಿರುದ್ದವೂ ಪ್ರಕರಣ ದಾಖಲು ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನ ನಿಯಂತ್ರಣಕ್ಕಾಗಿ ಜಿಲ್ಲೆಯ ಜನತೆ ಉತ್ತಮ ಸಹಕಾರ ಮಾಡುತ್ತಿದ್ದಾರೆ. ಇದಕ್ಕೆ ಜನತೆಗೆ ಧನ್ಯವಾದ ಸಮರ್ಪಿಸಿದ್ದಾರೆ. ಉಳಿದ 15 ದಿನಗಳ ಕಾಲವೂ ಜನತೆಗೆ ಸಹಕಾರ ನೀಡಬೇಕು. ಯಾವುದೇ ಕಾರಣಕ್ಕೂ ಮತ್ತೊಂದು ಲಾಕ್ ಡೌನ್ ವಿಸ್ತರಣೆಯ ಸ್ಥಿತಿಗೆ ಹೋಗುವುದು ಬೇಡ ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.