ಬೆಳ್ತಂಗಡಿ : ಹೊರ ರಾಜ್ಯ, ವಿದೇಶಗಳಿಂದ ಬರುವವರನ್ನು ರಾಜ್ಯ ಸರಕಾರ ಕ್ವಾರಂಟೈನ್ ಗೆ ಒಳಪಡಿಸುತ್ತಿದೆ. ಆದರೆ ವ್ಯವಸ್ಥೆಗಳೇ ಇಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ಆರಂಭಿಸುವ ಮೂಲಕ ಸರಕಾರ ಮತ್ತೊಂದು ಎಡವಟ್ಟು ಮಾಡುತ್ತಿದೆಯಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಇದಕ್ಕೆ ತಾಜಾ ಉದಾಹರಣೆಯಾಗಿ ನಿಂತಿದೆ ಬೆಳ್ತಂಗಡಿಯ ಅರಂಬೋಡಿ ಕ್ವಾರಂಟೈನ್ ಕೇಂದ್ರ.

ಹೌದು, ದಕ್ಷಿಣ ಕನ್ನಡ ಜಿಲ್ಲಾಡಳಿತ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ಆರಂಭಿಸಿದೆ. ಅದ್ರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅರಂಬೋಡಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕ್ವಾರಂಟೈನ್ ಕೇಂದ್ರ ಆರಂಭಿಸಿದೆ. ಇಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ಮುಂಬೈನಿಂದ ಆಗಮಿಸಿದ್ದ ಸುಮಾರು 15 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಆದರೆ ಕ್ವಾರಂಟೈನ್ ಕೇಂದ್ರದಲ್ಲಿರುವ ಇಬ್ಬರಿಗೆ ಈಗಾಗಲೇ ಕೊರೊನಾ ಸೋಂಕು ದೃಢಪಟ್ಟಿದೆ. ಆದರೆ ಕ್ವಾರಂಟೈನ್ ಕೇಂದ್ರದಲ್ಲಿರುವ ಎಲ್ಲರೂ ಕೂಡ ಇಲ್ಲಿರುವ ಒಂದೇ ಶೌಚಾಲಯವನ್ನು ಬಳಕೆ ಮಾಡುತ್ತಿದ್ದಾರೆ.

ಮಾತ್ರವಲ್ಲ ಕ್ವಾರಂಟೈನ್ ಗೆ ಒಳಪಟ್ಟಿರುವವರ ಮನೆಯಿಂದಲೇ ನಿತ್ಯವೂ ಊಟ ಸರಬರಾಜು ಆಗುತ್ತಿದೆ. ಅಲ್ಲದೇ ಕ್ವಾರಂಟೈನ್ ನಲ್ಲಿದ್ದವರನ್ನು ಮಾತನಾಡಿಸೋದಕ್ಕೆ ಹಲವರು ಹೋಗಿ ಬರುತ್ತಲೇ ಇದ್ದಾರೆ. ಕ್ವಾರಂಟೈನ್ ಕೇಂದ್ರದಲ್ಲಿನ ಅವ್ಯವಸ್ಥೆ ಇದೀಗ ಗ್ರಾಮಸ್ಥರ ನಿದ್ದೆಗೆಡಿಸಿದೆ. ಹುಮ್ಮಸ್ಸಿನಿಂದಲೇ ಕ್ವಾರಂಟೈನ್ ಕೇಂದ್ರವನ್ನು ಆರಂಭಿಸಿದ್ದ ಗ್ರಾಮ ಪಂಚಾಯತ್ ಈ ಬಗ್ಗೆ ಗಮನಹರಿಸುತ್ತಿಲ್ಲವೆಂಬ ಆರೋಪವೂ ಕೇಳಿಬರುತ್ತಿದೆ. ಅರಂಬೋಡಿಯ ಕ್ವಾರಂಟೈನ್ ಕೇಂದ್ರ ಕೇವಲ ಉದಾಹರಣೆಯಷ್ಟೇ. ಜಿಲ್ಲೆಯಲ್ಲಿರುವ ಸಾಕಷ್ಟು ಕ್ವಾರಂಟೈನ್ ಕೇಂದ್ರಗಳಲ್ಲಿ ಇಂತಹದ್ದೇ ಸಮಸ್ಯೆಗಳಿವೆ ಎಂಬ ಆರೋಪವಿದೆ.

ಕ್ವಾರಂಟೈನ್ ಕೇಂದ್ರಗಳ ಸುತ್ತಲೂ ಬಿಗಿ ಭದ್ರತೆಯನ್ನು ಒದಗಿಸಬೇಕು. ಕ್ವಾರಂಟೈನ್ ಕೇಂದ್ರಕ್ಕೆ ಯಾರು ಕೂಡ ಹೋಗಬಾರದೆಂಬ ನಿಯಮವಿದೆ. ಆದರೆ ಹಲವು ಕ್ವಾರಂಟೈನ್ ಕೇಂದ್ರಗಳಲ್ಲಿ ಯಾವುದೇ ಭದ್ರತೆಯಿಲ್ಲ. ಹೀಗಾಗಿ ಸ್ಥಳೀಯರು ಕ್ವಾರಂಟೈನ್ ಕೇಂದ್ರದಲ್ಲಿರುವವರ ಜೊತೆ ಸಂಪರ್ಕ ಬೆಳೆಸುತ್ತಿದ್ದಾರೆ. ಇನ್ನು ರಾಜಕಾರಣಿಗಳು ಕ್ವಾರಂಟೈನ್ ಕೇಂದ್ರಗಳ ವೀಕ್ಷಣೆ ನೆಪದಲ್ಲಿ ಆಗಾಗ ತಮ್ಮ ಸಹಚರರ ಜೊತೆಗೆ ಹೋಗಿ ಬರುತ್ತಿವುದು ಕೂಡ ಆತಂಕವನ್ನೂ ಮೂಡಿಸುತ್ತಿದೆ.

ಕ್ವಾರಂಟೈನ್ ಕೇಂದ್ರಗಳಲ್ಲಿ ಸೋಂಕಿತರರಿದ್ರೆ ಜೊತೆಗಿರುವವರಿಗೆ ಹಬ್ಬುವುದು ಮಾತ್ರವಲ್ಲದೇ, ಆಗಾಗ ಭೇಟಿ ಕೊಡುವವರಿಂದ ಊರವರಿಗೆಲ್ಲಾ ಹರಡುವ ಸಾಧ್ಯತೆಯಿದೆ. ನೆರೆಯ ಕೇರಳ ರಾಜ್ಯದಲ್ಲಿ ಕ್ವಾರಂಟೈನ್ ಕೇಂದ್ರಗಳ ಸುತ್ತಲೂ ಭಾರೀ ಭದ್ರತೆಯನ್ನು ಒದಗಿಸಲಾಗಿದೆ. ಇದರಿಂದಾಗಿ ಕೇರಳ ರಾಜ್ಯದಲ್ಲಿ ಕ್ವಾರಂಟೈನ್ ಕೇಂದ್ರಗಳಲ್ಲಿದ್ದವರಿನಿಂದ ಹೊರಗಿನವರಿಗೆ ಸೋಂಕು ಹರಡಿಲ್ಲ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ವಾರಂಟೈನ್ ಕೇಂದ್ರಗಳಲ್ಲಿ ಕಾವಲಿಗಿದ್ದ ಪೊಲೀಸರಿಗೆ ಈಗಾಗಲೇ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.

ಅಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದ್ದು, ಈಗಾಗಲೇ 5ಕ್ಕೂ ಅಧಿಕ ಮಂದಿಯನ್ನು ಮಹಾಮಾರಿ ಬಲಿ ಪಡೆದಿದೆ. ವ್ಯವಸ್ಥೆಯಿಲ್ಲದ ಗ್ರಾಮೀಣ ಭಾಗಗಳಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ತೆರೆಯುವ ಮೊದಲು ಕನಿಷ್ಠ ವ್ಯವಸ್ಥೆಗಳನ್ನು ಪರಿಶೀಲಿಸಬೇಕಿದೆ. ಅಲ್ಲದೇ ಅವ್ಯವಸ್ಥೆಯ ಆಗರವಾಗಿರುವ ಕ್ವಾರಂಟೈನ್ ಕೇಂದ್ರಗಳನ್ನು ಸರಿಪಡಿಸಬೇಕಾದ ಅನಿವಾರ್ಯತೆಯಿದೆ. ಇನ್ನಾದ್ರೂ ಜಿಲ್ಲಾಡಳಿತ ಕ್ವಾರಂಟೈನ್ ಕೇಂದ್ರಗಳ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಿದೆ.