ಗುರುಗ್ರಾಮ್: (Road accident-men death) ಯುವಕನೋರ್ವ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಆತನನ್ನು ಗೋರಕ್ಷಕರು ಗೋವು ಕಳ್ಳಸಾಗಣೆದಾರ ಎಂದು ಹೇಳಿ ಥಳಿಸಿ ಕೊಂದಿದ್ದಾರೆ ಎಂದು ಕುಟುಂಬದವರು ಆರೋಪಿಸಿದ ಘಟನೆ ನಡೆದಿದೆ. ವೇರಿಸ್ (22 ವರ್ಷ) ಸಾವನ್ನಪ್ಪಿದ ವ್ಯಕ್ತಿ. ಸಾವಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತೌರು-ಭಿವಾಡಿ ರಸ್ತೆಯ ಖೋರಿ ಕಲನ್ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ವೇರಿಸ್ ಮತ್ತು ಇತರ ಇಬ್ಬರು ಶೋಕೀನ್ ಮತ್ತು ನಫೀಸ್ ಅವರಿದ್ದ ಸ್ಯಾಂಟ್ರೋ ಕಾರು ಟೆಂಪೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ವೇರಿಸ್ ಮೃತಪಟ್ಟಿದ್ದರು. ಎರಡೂ ವಾಹನಗಳಿಗೆ ತೀವ್ರ ಹಾನಿಯಾಗಿದ್ದು, ಶೋಕೀನ್ ಮತ್ತು ನಫೀಸ್ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅಲ್ಲದೇ ಅಪಘಾತವಾದ ವಾಹನದಲ್ಲಿ ಒಂದು ಹಸು ಕೂಡ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತಕ್ಕೀಡಾದ ಟೆಂಪೋ ಚಾಲಕ ಅಬ್ದುಲ್ ಕರೀಂ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣದ ಕುರಿತು ಎಫ್ಐಆರ್ ದಾಖಲಿಸಲಾಗಿದ್ದು, ಅಜಾಗರೂಕ ಚಾಲನೆ ಮತ್ತು ನಿರ್ಲಕ್ಷ್ಯದಿಂದಾದ ಸಾವಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ದೂರಿನನ್ವಯ ಮೂವರ ವಿರುದ್ಧ ಶನಿವಾರ ತೌರು ಸದರ್ ಪೊಲೀಸ್ ಠಾಣೆಯಲ್ಲಿ ಹರ್ಯಾಣ ಗೋವಂಶ್ ಸಂರಕ್ಷಣಾ ಮತ್ತು ಗೋಸಂವರ್ಧನ್ ಕಾಯ್ದೆ 2014 ರ ಸೆಕ್ಷನ್ 11 (ಪ್ರಾಣಿಗಳ ಕ್ರೌರ್ಯ ತಡೆ) ಮತ್ತು ಸೆಕ್ಷನ್ 13 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನೂ ವೇರಿಸ್ ಸಾವಿನ ಕುರಿತು ಕುಟುಂಬಸ್ಥರು ಆರೋಪಿಸಿದ್ದು, ಘಟನಾ ಸ್ಥಳಕ್ಕೆ ಬಂದ ಬಜರಂಗದಳದ ಕಾರ್ಯಕರ್ತರು ವೇರಿಸ್ಗೆ ಥಳಿಸಿ ಆತನ ನಂತರ ಸಾವಿಗೆ ಕಾರಣರಾದರು ಎಂದು ಗೋರಕ್ಷಕರ ವಿರುದ್ದ ದೂರು ದಾಖಲಿಸಿದ್ದಾರೆ. ಆದರೆ ಅಪಘಾತದಲ್ಲಿ ವೇರಿಸ್ನ ಯಕೃತ್ತು ಛಿದ್ರಗೊಂಡ ಕಾರಣ ಕಿಬ್ಬೊಟ್ಟೆಯ ಕುಳಿಯಲ್ಲಿ ಆಂತರಿಕ ರಕ್ತಸ್ರಾವವಾಗಿ ಸಾವನ್ನಪ್ಪಿರುವುದಾಗಿ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.
ಮೃತ ವೇರಿಸ್ ಹಿರಿಯ ಸಹೋದರ ಇಮ್ರಾನ್ ಸಹೋದರನ ಸಾವಿನ ಕುರಿತು ಹೇಳಿಕೆ ನೀಡಿದ್ದು,” ವಾರಿಸ್ ಕಾರ್ ಮೆಕ್ಯಾನಿಕ್ ಆಗಿದ್ದು, ಜಾನುವಾರು ಕಳ್ಳಸಾಗಣೆಯಲ್ಲಿ ಭಾಗಿಯಾಗಿಲ್ಲ. ವಾರಿಸ್ ತನ್ನ ಇಬ್ಬರು ಸ್ನೇಹಿತರಿಗೆ ಸೆಕೆಂಡ್ ಹ್ಯಾಂಡ್ ಕಾರನ್ನು ಪರಿಶೀಲಿಸಲು ಶನಿವಾರ ರಾತ್ರಿ ಭಿವಾಡಿಗೆ ಹೋಗಿದ್ದರು. ಹಿಂತಿರುಗುತ್ತಿದ್ದಾಗ ಘಟನೆ ನಡೆದಿದೆ” ಎಂದು ಇಮ್ರಾನ್ ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : Geyser gas leak : ಗೀಸರ್ ಗ್ಯಾಸ್ ಸೋರಿಕೆ : ನವವಿವಾಹಿತೆ ಸಾವು
‘ಗೋರಕ್ಷಕರು’ ವ್ಯಾನ್ನಲ್ಲಿದ್ದ ಮೂವರು ಪ್ರಯಾಣಿಕರಿಗೆ ಚಿತ್ರಹಿಂಸೆ ನೀಡುತ್ತಿರುವ ವೀಡಿಯೊವನ್ನು ಸಹ ಬಿಡುಗಡೆ ಮಾಡಿದ್ದಾರೆ ಎಂದು ಇತರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಕುಟುಂಬದವರ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋರಕ್ಷಕ ಮತ್ತು ಬಜರಂಗದಳದ ಸದಸ್ಯ ಮೋನು ಮಾನೇಸರ್ ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಮಾಹಿತಿ ಪಡೆದ ನಂತರ ನಾನು ಅಲ್ಲಿಗೆ ಬಂದು ಅವರ ಕಾರಿನಿಂದ ಹಸುವನ್ನು ರಕ್ಷಿಸಿದೆ. ನಾನು ಫೇಸ್ಬುಕ್ನಲ್ಲಿ ಲೈವ್ಗೆ ಹೋಗಿದ್ದೆ ಮತ್ತು ಗಾಯಗೊಂಡವರಲ್ಲಿ ಒಬ್ಬನ ಹೆಸರನ್ನು ಕೇಳಿದೆ, ಆದರೆ ನಾವು ಯಾರನ್ನೂ ನೋಯಿಸಲಿಲ್ಲ.” ಅಲ್ಲದೇ ಗೋರಕ್ಷಕ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Road accident-men death: Youth dies in road accident: Family alleges against cow vigilantes