ಬಂಟ್ವಾಳ : ರೌಡಿಶೀಟರ್ ಚಿನ್ನಾ ಫಾರೂಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರು ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದಾರೆ. ಓರ್ವ ಆರೋಪಿಯ ಕಾಲಿಗೆ ಗುಂಡೇಟು ತಗುಲಿದ್ದು, ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಮೆಲ್ಕಾರ್ ನಲ್ಲಿ ರೌಡಿಶೀಟರ್ ಚಿನ್ನಾ ಫಾರೂಕ್ ನನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಎಸ್ ಪಿ ಲಕ್ಷ್ಮೀ ಪ್ರಸಾದ್ ಅವರು ಪೊಲೀಸರ ಮೂರು ವಿಶೇಷ ತಂಡವನ್ನು ರಚಿಸಿದ್ದರು. ಚಿನ್ನಾ ಫಾರೂಕ್ ಹತ್ಯೆಯ ಆರೋಪಿಗಳಾದ ಖಲೀಲ್ ಹಾಗೂ ಇಬ್ಬರು ಆರೋಪಿಗಳು ಬೆಂಗಳೂರಿಗೆ ತೆರಳುತ್ತಿರುವ ಮಾಹಿತಿಯನ್ನು ಆಧರಿಸಿದ ಪೊಲೀಸರ ತಂಡ ಬೆನ್ನಟ್ಟಿದೆ.

ಗುಂಡ್ಯ ತಲುಪುತ್ತಿದ್ದಂತೆಯೇ ಆರೋಪಿ ಖಲೀಲ್ ಪೊಲೀಸರ ಮೇಲೆ ತಲವಾರು ದಾಳಿ ನಡೆಸಿದ್ದಾನೆ. ಈ ವೇಳೆಯಲ್ಲಿ ಎಸ್ಐ ಅವಿವಾಶ್ ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಆರೋಪಿ ಖಲೀಲ್ ಗೆ ಗಾಯವಾಗಿದೆ.

ಆರೋಪಿಗಳ ದಾಳಿಯಿಂದಾಗಿ ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ ಐ ಪ್ರಸನ್ನ ಅವರಿಗೂ ಗಾಯವಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಫೀಜ್ ಸೇರಿದಂತೆ ಇನ್ನೋರ್ವ ಆರೋಪಿ ತಪ್ಪಿಸಿಕೊಂಡಿದ್ದಾರೆ. ರೌಡಿಶೀಟರ್ ಖಲೀಲ್ ಮತ್ತವನ ಗ್ಯಾಂಗ್ ಜಿಲ್ಲೆಯಲ್ಲಿ ನಡೆದಿರುವ ಹಲವು ಕೋಮು ಗಲಭೆ ಸೇರಿದಂತೆ ಹಲವು ಗಲಭೆಗಳಲ್ಲಿ ಭಾಗಿಯಾಗಿದ್ದಾನೆ. ಇತ್ತೀಚೆಗೆ ಕಲ್ಲಡ್ಕ ದಲ್ಲಿ ನಡೆದಿದ್ದ ರತ್ನಾಕರ ಶೆಟ್ಟಿ ಮೇಲಿನ ಹತ್ಯೆ ಪ್ರಕರಣದಲ್ಲಿಯೂ ಆರೋಪಿಯಾಗಿದ್ದ ಖಲೀಲ್ ನನ್ನು ಗಡಿಪಾರು ಮಾಡಲಾಗಿತ್ತು.

ಚಿನ್ನಾ ಫಾರೂಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಯಿಸಿಕೊಂಡಿರುವ ಹಫೀಜ್ ಹಾಗೂ ಇನ್ನೋರ್ವ ಆರೋಪಿಯ ಪತ್ತೆಗಾಗಿ ಉಪ್ಪಿನಂಗಡಿ ಎಸ್ ಐ ಈರಯ್ಯ ಮತ್ತವರ ತಂಡ ಹುಡುಕಾಟವನ್ನು ನಡೆಸುತ್ತಿದೆ.