Vishala Ganiga murder case : ವಿಶಾಲ ಗಾಣಿಗ ಕೊಲೆ ಪ್ರಕರಣ : ಸುಪಾರಿ ಕಿಲ್ಲರ್‌ ಕೊನೆಗೂ ಅರೆಸ್ಟ್‌, ಆರೋಪಿ ಬಂಧನದ ಹಿಂದಿದೆ ರೋಚಕ ಸ್ಟೋರಿ

ಬ್ರಹ್ಮಾವರ : ಕರಾವಳಿಯಾದ್ಯಂತ ಸಂಚಲನ ಮೂಡಿಸಿದ್ದ ಬ್ರಹ್ಮಾವರ ತಾಲೂಕಿನ ಕುಮ್ರಗೋಡು ಗ್ರಾಮದಲ್ಲಿರುವ ಮಿಲನ್‌ ರೆಸಿಡೆನ್ಸಿಯಲ್ಲಿ ನಡೆದಿದ್ದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ (Vishala Ganiga murder case) ಸಂಬಂಧಿಸಿದಂತೆ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಅನಂತ ಪದ್ಮನಾಭ ಅವರ ನೇತೃತ್ವದ ಪೊಲೀಸರ ತಂಡ ಕೊನೆಗೂ ಸುಪಾರಿ ಕಿಲ್ಲರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

2021ರ ಜುಲೈ 2 ರಂದು ಉಪ್ಪಿನಕೋಟೆ ಬಳಿಯಲ್ಲಿರುವ ಮಿಲನ ರೆಸಿಡೆನ್ಶಿಯಲ್ಲಿ ವಿಶಾಲಾ ಗಾಣಿಗ ಅವರು ಒಬ್ಬಂಟಿಯಾಗಿದ್ದ ವೇಳೆಯಲ್ಲಿ ಭೀಕರವಾಗಿ ಕೊಲೆ ಮಾಡಿ ಕುತ್ತಿಗೆಯಲ್ಲಿದ್ದ ಮಂಗಳ ಸೂತ್ರ, ಹಾಗೂ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಕಳವು ಮಾಡಲಾಗಿತ್ತು. ಆದ್ರೆ ಈ ಪ್ರಕರಣ ಪೊಲೀಸರಿಗೆ ತಲೆನೋವು ತರಿಸಿತ್ತು. ಆದ್ರೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಬ್ರಹ್ಮಾವರದ ವೃತ್ತ ನಿರೀಕ್ಷರಾದ ಅನಂತ ಪದ್ಮನಾಭ ಅವರ ನೇತೃತ್ವದ ತಂಡ ಕೊಲೆ ಪ್ರಕರಣದ ಪ್ರಮುಖ ಆರೋಪಿ ವಿಶಾಲ ಗಾಣಿಗ ಅವರ ಪತಿ ರಾಮಕೃಷ್ಣ ಗಾಣಿಗ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಪಾರಿ ಹಂತಕ ಉತ್ತರ ಪ್ರದೇಶದ ಗೋರಕ್‌ಪುರದ ಸುಪಾರಿ ಹಂತಕ ಸ್ವಾಮಿನಾಥ ನಿಶಾದನನ್ನು ಕೂಡ ಅರೆಸ್ಟ ಮಾಡಿದ್ದರು. ಆದ್ರೆ ಒಂದು ವರ್ಷಗಳಿಂದಲೂ ಪೊಲೀಸರಿಂದ ತಲೆ ಮರೆಯಿಸಿಕೊಂಡಿದ್ದ ಇನ್ನೋರ್ವ ಸುಪಾರಿ ಹಂತಕ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಶಾಲ ಗಾಣಿಗ ಅವರ ಪತಿ ರಾಮಕೃಷ್ಣ ಗಾಣಿಗ ವಿದೇಶದಲ್ಲಿ ಇದ್ದು ಕೊಂಡೆ ತನ್ನ ಪತ್ನಿಯ ಕೊಲೆಗೆ ಸುಫಾರಿ ನೀಡಿದ್ದ. ತನಗೆ ಪರಿಚಿತನಾಗಿರುವ ಉತ್ತರ ಪ್ರದೇಶದ ಮೂಲದ ಸುಫಾರಿ ಹಂತಕರಾದ ಸ್ವಾಮೀನಾಥ ನಿಶಾದ ಹಾಗೂ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು ಎಂಬವರಿಗೆ ಕೊಲೆ ಮಾಡಲು ಸುಪಾರಿ ನೀಡಿದ್ದ. ವಿಶಾಲ ಗಾಣಿಗ ಮನೆಯಲ್ಲಿ ಒಬ್ಬಂಟಿಯಾಗಿರುವ ಮಾಹಿತಿಯನ್ನು ನೀಡಿದ್ದ ರಾಮಕೃಷ್ಣ ಗಾಣಿಗ ಪಾರ್ಸೆಲ್‌ ನೆಪದಲ್ಲಿ ಸುಪಾರಿ ಕಿಲ್ಲರ್‌ಗಳನ್ನು ಮನೆಗೆ ಕಳುಹಿಸಿ ಕೊಲೆ ಮಾಡಿಸಿದ್ದಾನೆ.

ಬ್ರಹ್ಮಾವರ ಪೊಲೀಸರು ಈಗಾಗಲೇ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇಬ್ಬರ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆದರೆ ಮತ್ತೋರ್ವ ಆರೋಪಿ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು ಎಂಬಾತ ಕಳೆದ ಒಂದು ವರ್ಷದಿಂದಲೂ ತಲೆ ಮರೆಯಿಸಿಕೊಂಡಿದ್ದ. ಆದರೆ ಈತ ಕಾಣೆಯಾಗಿರುವ ಕುರಿತು ಪೋಷಕರು ಮುಂಬೈನ ಗಾಮ್‌ ದೇವಿ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು. ಈ ಕುರಿತು ಮಾಹಿತಿಯನ್ನು ಪಡೆದ ಪ್ರಕರಣದ ತನಿಖಾಧಿಕಾರಿಯಾದ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಅನಂತಪದ್ಮನಾಭ ಅವರ ನೇತೃತ್ವದಲ್ಲಿ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರಾದ ಗುರುನಾಥ ಹಾದಿಮನಿ, ಸಿಬ್ಬಂದಿಯವರಾದ ವೆಂಕಟರಮಣ ದೇವಾಡಿಗ, ರಾಘವೇಂದ್ರ, ಪ್ರವೀಣ್ ಶೆಟ್ಟಿಗಾರ್ ರವರನ್ನು ಒಳಗೊಂಡ ವಿಶೇಷ ತಂಡವು ಸುಫಾರಿ ಹಂತಕ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು ಎಂಬಾತನನ್ನು ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಲೆ ಮರೆಯಿಸಿಕೊಂಡಿದ್ದ ಸುಪಾರಿ ಹಂತಕನನ್ನು ಸೆರೆ ಹಿಡಿಯಲು ಕಳೆದ ಒಂದು ವರ್ಷದಿಂದ ಬ್ರಹ್ಮಾವರ ವೃತ್ತದ ಕೋಟ, ಬ್ರಹ್ಮಾವರ, ಹಿರಿಯಡ್ಕ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಮಹಾರಾಷ್ಟ್ರ, ಗೋವಾ ಹಾಗೂ ಉತ್ತರ ಪ್ರದೇಶ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿ ಪತ್ತೆಗೆ ಪ್ರಯತ್ನಿಸಿರುತ್ತಾರೆ. ಈತನು ವಿಶಾಲ ಗಾಣಿಗ ಕೊಲೆಯ ನಂತರ ತನ್ನ ಸ್ವಂತ ಮನೆ ಮಹಾರಾಷ್ಟ್ರವನ್ನು ಬಿಟ್ಟು ನೇಪಾಳ ಗಡಿಯಲ್ಲಿನ ಮಹಾರಾಜ ಗಂಜ್ ಪರಿಸರದಲ್ಲಿ ತಲೆ ಮರೆಸಿಕೊಂಡು ಓಡಾಡುತ್ತಿದ್ದನು. ಈ ಆರೋಪಿಯಿಂದ ಕೊಲೆಯ ಬಗ್ಗೆ ಹಚ್ಚಿನ ತನಿಖೆ ನಡೆಸಲು ಪೊಲೀಸ್ ಕಸ್ಟಡಿಗೆ ಪಡೆಯುವ ಬಗ್ಗೆ ನ್ಯಾಯಾಲಯದಲ್ಲಿ ಪ್ರಕ್ರಿಯೆ ನಡೆಯುತ್ತಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ ಎನ್, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್ .ಟಿ ಸಿದ್ದಲಿಂಗಪ್ಪರವರ ಮಾರ್ಗದರ್ಶನದಂತೆ, ಸುಧಾಕರ ಎಸ್ ನಾಯ್ಕ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪ ವಿಭಾಗರವರ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಅನಂತ ಪದ್ಮನಾಭ, ಸಿ.ಪಿ.ಐ ಬ್ರಹ್ಮಾವರ ವೃತ್ತ, ಬ್ರಹ್ಮಾವರ ಠಾಣಾ ಪಿ.ಎಸ್.ಐ ಗುರುನಾಥ ಹಾದಿಮನಿ, ಕೋಟ ಠಾಣೆಯ ಪಿ.ಎಸ್.ಐ ಮಧು ಬಿ.ಇ, ಬ್ರಹ್ಮಾವರ ಠಾಣೆಯ ಸಿಬ್ಬಂದಿಯವರಾದ ವೆಂಕಟರಮಣ ದೇವಾಡಿಗ, ರಾಘವೇಂದ್ರ, ಪ್ರವೀಣ್ ಶೆಟ್ಟಿಗಾರ್, ಕೋಟ ಠಾಣೆಯ ಸಿಬ್ಬಂದಿಯವರಾದ ರಾಘವೇಂದ್ರ, ವಿಜಯೇಂದ್ರ ಹಾಗೂ ಬ್ರಹ್ಮಾವರ ವೃತ್ತ ಕಛೇರಿಯ ಸಿಬ್ಬಂದಿಯವರಾದ ಕೃಷ್ಣಪ್ಪ, ವಾಸುದೇವ ಪೂಜಾರಿ, ಪ್ರದೀಪ್ ನಾಯಕ್, ಕೃಷ್ಣ ಶೇರುಗಾರ್, ಶೇಖರ ಶೇರುಗಾರ್, ಶ್ರೀಮತಿ ಜ್ಯೋತಿ ಎಂ, ನಾಗಶ್ರೀ ಹೆಚ್‌.ಪಿ. ರವರು ಪ್ರಕರಣವನ್ನು ಭೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಪ್ರಕರಣವನ್ನು ಭೇದಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ.ಎನ್, ಐ.ಪಿ.ಎಸ್ ರವರು ತಂಡವನ್ನು ಅಭಿನಂದಿಸಿರುತ್ತಾರೆ

ಇದನ್ನೂ ಓದಿ : Vishala Ganiga Murder Case : ವಿಶಾಲ ಗಾಣಿಗ ಕೊಲೆ ಪತಿ, ಸೇರಿ ಸುಫಾರಿ ಕಿಲ್ಲರ್‌ ಬಂಧನ : ದುಬೈನಲ್ಲೇ ಕುಳಿತು ಕೊಲೆಗೆ ಸ್ಕೆಚ್‌

ಇದನ್ನೂ ಓದಿ : Vishala Ganiga : ಡಾರ್ಲಿಂಗ್..‌ ಡಾರ್ಲಿಂಗ್‌ ಅನ್ನುತ್ತಲೇ ಕೊಲೆಗೈದ : ಅಕ್ರಮ ಸಂಬಂಧಕ್ಕೆ ವಿಶಾಲಾ ಗಾಣಿಗ ಹತ್ಯೆ ..!!!

Vishala Ganiga murder case, Supari killer finally arrested, the interesting story behind the arrest of the accused

Comments are closed.