Registration mandatory borewell drilling lorries : ಚಿಕ್ಕಮಗಳೂರು: ಅಂತರ್ಜಲದ ಮಟ್ಟ ಕುಸಿತದ ಭೀತಿಯ ನಡುವಲ್ಲೇ ಕೊಳವೆ ಬಾವಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಆದರೆ ಇನ್ಮುಂದೆ ಕೊಳವೆ ಬಾವಿಗಳನ್ನು ಕೊರೆಯುವ ಲಾರಿಗಳು ಇನ್ಮುಂದೆ ಕಡ್ಡಾಯವಾಗಿ ಅಂತರ್ಜಲ ಇಲಾಖೆಯಿಂದ 7 (ಎ) ಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಆದೇಶಿಸಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕೊಳವೆಬಾವಿ ಕೊರೆಯುವ ಲಾರಿ ಮಾಲೀಕರು ಹಾಗೂ ಏಜೆಂಟರು ಹಾಗೂ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 7(ಎ) ರಂತೆ ನೋಂದಾಯಿಸಿಕೊಂಡಿರುವ ಲಾರಿ ಮಾಲೀಕರು ಕೊಳವೆಬಾವಿ ಯನ್ನು ಕೊರೆಯತಕ್ಕದ್ದು ನೊಂದಾಯಿಸಿಕೊಳ್ಳದೆ ಇರುವ ಕೊಳವೆಬಾವಿ ಕೊರೆಯುವ ಲಾರಿ ಮಾಲೀಕರು ಒಂದು ವಾರದೊಳಗೆ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು ಎಂದಿದ್ದಾರೆ.

ಒಂದು ವಾರದೊಳಗೆ ನೋಂದಾಯಿಸಿಕೊಳ್ಳದೆ ಇರುವ ಮಾಲೀಕರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದಲ್ಲದೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದ ಅವರು ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಸರ್ಕಾರದಿಂದ ಮಂಜೂರಾಗಿರುವ ಕೊಳವೆಬಾವಿಗಳನ್ನು ಅತಿ ಶೀಘ್ರವಾಗಿ ಕೊರೆದು ಪೂರ್ಣಗೊಳಿಸಬೇಕು ಎಂದಿದ್ದಾರೆ.
ಇದನ್ನೂ ಓದಿ : ಕಾರ್ಮಿಕರಿಗೆ ಸಿಹಿಸುದ್ದಿ: ಏಪ್ರಿಲ್ 1ರಿಂದ ನರೇಗಾ ಕೂಲಿ ದರ ಏರಿಕೆ
ಕೊಳವೆಬಾವಿ ಕೊರೆದು ವಿಫಲವಾದ ಕೊಳವೆ ಬಾವಿಗಳನ್ನು ಸುರಕ್ಷಿತವಾಗಿ ಮುಚ್ಚಿ ಯಾವುದೇ ಅವಗಡಗಳು ಸಂಭವಿಸದಂತೆ ಕ್ರಮ ವಹಿಸಬೇಕು ತಪ್ಪಿದಲ್ಲಿ ಸಂಬಂಧಿಸಿದ ನಿವೇಶನ ಮಾಲೀಕರು, ಕೊಳವೆಬಾವಿ ಕೊರಸುವ ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೊಳವೆ ಬಾವಿಗಳನ್ನು ಸರ್ಕಾರ ನಿಗದಿಪಡಿಸಿರುವ ದರದಂತೆ ಕೊರಿಯಬೇಕು ಒಂದು ವೇಳೆ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ದರ ಪಡೆದರೆ ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ ಕೊಳವೆ ಬಾವಿ ಕೊರೆಯುವ ಯಂತ್ರಗಳ ಮಾಲೀಕರು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.

ಈಗಾಗಲೇ ಜಿಲ್ಲೆಯ ಕಡೂರು, ತರೀಕೆರೆ ತಾಲ್ಲೂಕುಗಳನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಉಳಿದ ತಾಲ್ಲೂಕುಗಳಲ್ಲೂ ಕೂಡ ಕುಡಿಯುವ ನೀರಿಗೆ ಅಭಾವ ಕಂಡು ಬರುತ್ತಿದೆ. ಸರ್ಕಾರದಿಂದ ಮಂಜೂರಾಗಿರುವ ಕೊಳವೆ ಬಾವಿಗಳನ್ನು ಶೀಘ್ರವಾಗಿ ಕೊರೆಯಬೇಕು, 2 ವರ್ಷಗಳಿಂದ ಮಂಜೂರಾಗಿರುವ ಕೊಳವೆ ಬಾವಿಗಳನ್ನು ಇದುವರೆವಿಗೂ ಕೊರೆದಿರುವುದಿಲ್ಲ.
ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ 8 ನೇ ಕಂತಿನ ಹಣ ಪಡೆಯಲು ಸರಕಾರದಿಂದ ಹೊಸ ರೂಲ್ಸ್
ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕೊಳವೆಬಾವಿ ಕೊರೆದಿರುವ ಹಣವನ್ನು ಮಂಜೂರು ಮಾಡುವಂತೆ ತಿಳಿಸಿದ ಅವರು ಸರ್ಕಾರ ನಿಗಧಿತ ಪಡಿಸುವ ದರದಲ್ಲಿಯೇ ಕೊಳವೆಬಾವಿ ಕೊರೆಯಬೇಕು. ರೈತರಿಗೆ ತೊಂದರೆ ಕೊಡಬಾರದೆಂದು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯ ಪಾಲಕ ಅಭಿಯಂತರರಾದ ವಿನಾಯಕ ಉಲ್ಲೂರು, ಜಿಲ್ಲಾ ಅಂತರ್ಜಲ ಕಚೇರಿ ಹಿರಿಯ ಭೂ ವಿಜ್ಞಾನಿ ನಂದಿನಿ ಎನ್ ಆರ್ ಹಾಗೂ ಜಿಲ್ಲೆಯ ಎಲ್ಲಾ ಕೊಳವೆಬಾವಿ ಯಂತ್ರದ ಮಾಲೀಕರು ಹಾಗೂ ಏಜೆಂಟರಗಳು ಉಪಸ್ಥಿತರಿದ್ದರು.
Registration is mandatory for borewell drilling lorries Chikkamgalore District Collector Meena Nagaraj orders