ಹಾವೇರಿ : ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಹಣದ ಬೇಡಿಕೆಯಿಟ್ಟ ಬಿಇಒ ಕಚೇರಿಯ ಮ್ಯಾನೇಜರ್ ಎಸಿಬಿ ಅಧಿಕಾರಿಗಳ ಬಲೆ ಬಿದ್ದಿದ್ದ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆದಿದೆ.
ಶಿಗ್ಗಾವಿ ಪಟ್ಟಣದ ಬಿಇಒ ಕಚೇರಿಯ ಮ್ಯಾನೇಜರ್ ಸುರೇಶ್ ಗಿರೀಪ್ಪ ರೊಡ್ಡಣ್ಣವರ ಎಂಬವರೇ ಎಸಿಬಿ ಬಲೆಗೆ ಬಿದ್ದ ಮ್ಯಾನೇಜರ್. ವರ್ಗಾವಣೆಗಾಗಿ ಗಾಂಧಿನಗರ ಶಾಲೆಯ ಶಿಕ್ಷಕ ಹನುಮಂತ ಹಳ್ಳೆಪ್ಪನವರ ಎಂಬವರಿಗೆ ಸುರೇಶ್ ಗೀರಪ್ಪ ರೊಡ್ಡಣ್ಣವರ ನಾಲ್ಕು ಸಾವಿರ ರೂಪಾಯಿ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು. ಈ ಕುರಿತು ಒಂದು ಸಾವಿರ ರೂಪಾಯಿ ಹಣವನ್ನು ಮುಂಗಡವಾಗಿ ಪಡೆದುಕೊಂಡಿದ್ದರು. ಆದ್ರೀಗ ಬಾಕಿ ಮೂರು ಸಾವಿರ ರೂಪಾಯಿ ಹಣ ಲಂಚ ಪಡೆಯುವ ವೇಳೆಯಲ್ಲಿ ಎಸಿಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಬಿಇಒ ಕಚೇರಿಯ ಮ್ಯಾನೇಜರ್ ಸುರೇಶ್ ಗಿರೀಪ್ಪ ರೊಡ್ಡಣ್ಣವರ ವರ್ಗಾವಣೆಗಾಗಿ ಲಂಚಕ್ಕೆ ಬೇಡಿಕೆಯಿಟ್ಟಿರುವ ಹಿನ್ನೆಲೆಯಲ್ಲಿ ಶಿಕ್ಷಕರು ದಾವಣಗೆರೆಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಬಿಇಒ ಕಚೇರಿಯ ಮ್ಯಾನೇಜರ್ನನ್ನು ಬಂಧಿಸಿದ್ದಾರೆ.
ಎಸಿಬಿ ದಾವಣಗೆರೆಯ ಎಸ್ಪಿ ಜಯಪ್ರಕಾಶ್ ನೇತೃತ್ವದಲ್ಲಿ ಡಿವೈಎಸ್ಪಿ ಮಹಾಂತೇಶ ಜಿದ್ದಿ, ಪಿಎಸ್ಐ ಎಸ್.ಕೆ.ಪಟ್ಟಣಕೊಡಿ, ಪ್ರಭಾವತಿ ಶೇಖವಡಿ ಸೇರಿದಂತೆ ಹಲವು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.