ಬೆಂಗಳೂರು : ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸುವ ಕುರಿತು ಶಿಕ್ಷಣ ಇಲಾಖೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಈಗಾಗಲೇ ಶಿಕ್ಷಣ ಇಲಾಖೆಯ ಆಯುಕ್ತರು ಸರಣಿ ಸಭೆಗಳನ್ನು ನಡೆಸಿದ್ದು, ನಾಳೆ ಅಂತಿಮ ವರದಿ ರಾಜ್ಯ ಸರಕಾರದ ಕೈ ಸೇರುವ ಸಾಧ್ಯತೆಯಿದೆ.

ಕೊರೊನ ವೈರಸ್ ಸೋಂಕಿನ ತೀವ್ರತೆ ಕೊಂಚ ಕಡಿಮೆಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಶಿಕ್ಷಣ ಇಲಾಖೆ ಮುಂದಾಗಿದೆ. ಈ ಹಿನ್ನೆಲೆಯಲ್ಲೀಗ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬು ಕುಮಾರ್ ಈಗಾಗಲೇ ಡಿಡಿಪಿಐ, ಎಸ್ ಡಿಎಂಸಿ ಅಧ್ಯಕ್ಷರು, ಶಿಕ್ಷಕರು, ಶಿಕ್ಷಕರ ಸಂಘ, ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಹಾಗೂ ಪೋಷಕರ ಜೊತೆಗೆ ಸಭೆಯನ್ನು ನಡೆಸಲಾಗಿದೆ. ಎಲ್ಲರ ಅಭಿಪ್ರಾಯವನ್ನು ಕ್ರೂಢೀಕರಿಸಿ ಸಿದ್ದ ಪಡಿಸಿದ ವರದಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲ್ಲಿಕೆ ಮಾಡುವ ಸಾಧ್ಯತೆಯಿದೆ.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಶಾಲಾರಂಭದ ಕುರಿತು ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ. ವಸತಿ ಶಾಲೆಗಳ ಮುಖ್ಯಸ್ಥರು ಶಾಲಾರಂಭದ ಕುರಿತು ಒಪ್ಪಿಗೆಯನ್ನು ಸೂಚಿಸಿದ್ದಾರೆ. ಆದರೆ ಪೋಷಕರು ಶಾಲಾರಂಭ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಖಾಸಗಿ ಶಾಲೆಗಳ ಒಕ್ಕೂಟ ಕೂಡ ಶಾಲೆಗಳ ಹೊಣೆಯನ್ನು ರಾಜ್ಯ ಸರಕಾರವೇ ಹೊತ್ತುಕೊಳ್ಳುವುದಾರೇ ಶಾಲಾರಂಭ ಮಾಡಬಹುದು ಎಂದಿದ್ದಾರೆ.
ಆದರೆ ಬಹುತೇಕ ಖಾಸಗಿ ಶಾಲೆಗಳ ಮುಖ್ಯಸ್ಥರು ಕೊರೊನಾ ಭೀತಿಯ ನಡುವಲ್ಲೇ ಶಾಲಾರಂಭ ಮಾಡುವುದು ಬೇಡಾ. ಬದಲಾಗಿ ಆನ್ ಲೈನ್ ಶಿಕ್ಷಣವನ್ನೇ ಮುಂದುವರಿಸಿ, ಮೂರು ಹಾಗೂ ನಾಲ್ಕನೇ ಹಂತದ ಶುಲ್ಕ ಪಡೆಯಲು ಅವಕಾಶ ಕಲ್ಪಿಸುವಂತೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.

ಶಾಲಾರಂಭದ ಕುರಿತು ರಾಜ್ಯದಲ್ಲಿ ಅಪಸ್ವರ ಕೇಳಿಬಂದಿದೆ. ಇನ್ನೊಂದೆಡೆ ಆಂಧ್ರಪ್ರದೇಶದಲ್ಲಿ ಶಾಲಾರಂಭದ ಬೆನ್ನಲ್ಲೇ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು. ಈ ಹಿನ್ನೆಲೆಯಲ್ಲೀಗ ರಾಜ್ಯದಲ್ಲಿಯೂ ಶಾಲಾರಂಭ ಮಾಡಬೇಕೇ ಬೇಡವೇ ಅನ್ನೋ ಗೊಂದಲ ಇದೀಗ ಏರ್ಪಟ್ಟಿದೆ.