ಉಡುಪಿ : ಕೊರೊನಾ ವೈರಸ್ ಸೋಂಕಿನ ನಡುವಲ್ಲೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ದಾಖಲೆ ನಿರ್ಮಿಸಿರುವ ಉಡುಪಿ ಜಿಲ್ಲೆ ಇದೀಗ ಮತ್ತೊಂದು ಸಾಧನೆಗೆ ಸಜ್ಜಾಗಿದೆ. ತೀರಾ ಬಡತನ ದಲ್ಲಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಡಿಡಿಪಿಐ ಎನ್.ಎಚ್.ನಾಗೂರ ಅವರು ಉಚಿತವಾಗಿ ಸೋಲಾರ್ ಲ್ಯಾಂಪ್ ವಿತರಣೆಗೆ ಮಾಡುತ್ತಿದ್ದು, ಆನ್ಲೈನ್ ತರಗತಿಗಾಗಿ ಹಳೆ ಮೊಬೈಲ್ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಎಸ್ಎಸ್ಎಲ್ಸಿ ವಿದ್ಯಾಭ್ಯಾಸ ಪಡೆಯುತ್ತಿರುವ ಹಲವು ವಿದ್ಯಾರ್ಥಿಗಳು ಬಡತನದಿಂದ ಬಳಲುತ್ತಿದ್ದಾರೆ. ಅದ್ರಲ್ಲೂ ಗುಡಿಸಲು ಹಾಗೂ ಪತ್ರಾಸ್ ಮನೆಯಲ್ಲಿ ವಾಸಿಸುತ್ತಿದ್ದು ವಿದ್ಯಾಭ್ಯಾಸಕ್ಕೆ ವಿದ್ಯುತ್ ಬೆಳಕಿನ ಸಮಸ್ಯೆಯಿರುವ ವಿದ್ಯಾರ್ಥಿಗಳ ನೆರವಿಗೆ ಡಿಡಿಪಿಐ ಧಾವಿಸಿದ್ದಾರೆ. ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ ತಮ್ಮ ಸ್ವತಃ ಖರ್ಚಿನಿಂದ ಹಾಗೂ ದಾನಿಗಳ ನೆರವಿನಿಂದ ಈಗಾಗಲೇ ಸೋಲಾರ್ ಲ್ಯಾಂಪ್ ವಿತರಣೆ ಮಾಡುತ್ತಿದ್ದಾರೆ.

ಜಿಲ್ಲೆಯ ಯಾವುದೇ ಶಾಲೆಗಳಲ್ಲಿ ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು ಇದ್ದರೆ ಕೂಡಲೇ ಅಂತಹ ವಿದ್ಯಾರ್ಥಿಗಳು ಶಾಲೆಯ ಮೂಲಕ ಡಿಡಿಪಿಐ ಎನ್.ಎಚ್. ನಾಗೂರ ಅವರನ್ನು ಸಂಪರ್ಕಿಸಬಹುದಾಗಿದೆ. ಅಂತಹ ವಿದ್ಯಾರ್ಥಿಗಳ ಮನೆಗೆ ಉಚಿತವಾಗಿ ಸೋಲಾರ್ ಲ್ಯಾಂಪ್ ವಿತರಣೆ ಮಾಡಲಾಗುತ್ತೇವೆ ಎಂದು ನಾಗೂರ ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ದ್ವೀಪದಿಂದ ಮಕ್ಕಳನ್ನು ದೋಣಿಯಲ್ಲಿ SSLC ಪರೀಕ್ಷಾ ಕೇಂದ್ರಕ್ಕೆ ಕರೆತಂದ ಡಿಡಿಪಿಐ : ಎನ್.ಎಚ್.ನಾಗೂರ ಕಾರ್ಯಕ್ಕೆ ಭಾರಿ ಮೆಚ್ಚುಗೆ
ಬಳಕೆ ಮಾಡದ ಸ್ಮಾರ್ಟ್ ಪೋನ್ ದಾನ ಮಾಡಿ ..!
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಪೋನ್ ಬಳಕೆ ಹೆಚ್ಚಾಗುತ್ತಿದೆ. ಹೊಸ ಮಾದರಿಯ ಸ್ಮಾರ್ಟ್ ಪೋನ್ ಮಾರುಕಟ್ಟೆಗೆ ಬಂದ್ರೆ ಹಳೆಯ ಸ್ಮಾರ್ಟ್ ಪೋನ್ ಮೂಲೆ ಸೇರುತ್ತಿದೆ. ಹೀಗಾಗಿ ಬಳಕೆ ಮಾಡಿ ಪ್ರಸ್ತುವ ಮನೆಯಲ್ಲಿಯೇ ಇಟ್ಟಿರುವ ಸ್ಮಾರ್ಟ್ ಪೋನ್ ಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಡಿಡಿಪಿಐ ಅವರು ಮುಂದಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಅಂದಾಜು 1.65ಲಕ್ಷ ಮಕ್ಕಳು 1-10 ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಜುಲೈ 1 ರಿಂದ ಆನ್ ಲೈನ್ ತರಗತಿ ಆರಂಭಿಸಲಾಗಿದೆ. ಆದರೆ ಜಿಲ್ಲೆಯಲ್ಲಿನ 2688 ವಿದ್ಯಾರ್ಥಿಗಳ ಬಳಿಯಲ್ಲಿ ಮೊಬೈಲ್, ಟಿವಿ ಹಾಗೂ ಯಾವುದೇ ತಾಂತ್ರಿಕ ಸೌಲಭ್ಯಗಳು ಇಲ್ಲವೆಂದು ಇಲಾಖೆ ಗುರುತಿಸಿದೆ. ಇಂತಹ ಮಕ್ಕಳಿಗೆ ಆನ್ಲೈನ್ ತರಗತಿಗಳು ತಲುಪುತ್ತಿಲ್ಲ. ಇದೇ ಕಾರಣಕ್ಕೆ ಮನೆಯಲ್ಲಿ ಬಳಕೆ ಮಾಡದೆ ಇಟ್ಟಿರುವ ಸ್ಮಾರ್ಟ್ ಪೋನ್ಗಳನ್ನು ಮಕ್ಕಳಿಗೆ ಸಹಕಾರಿ ಯಾಗಲಿದೆ.

ಸ್ಮಾರ್ಟ್ ಪೋನ್ ಉಚಿತವಾಗಿ ನೀಡಲು ಬಯಸುವವರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ತಲುಪಿಸಬಹುದಾಗಿದೆ. ಮೊಬೈಲ್ ಖಜಾನೆ ಕಾರ್ಯಕ್ರಮ ಅಗಸ್ಟ್ 1 ರಿಂದ ಪ್ರತೀ ಹಳ್ಳಿಯಲ್ಲಿಯೂ ನಡೆಯಲಿದೆ. ನಮ್ಮ ಶಾಲಾ ಶಿಕ್ಷಕರು ಜಾಥಾದ ಮೂಲಕ ತೆರಳಿ ಮೊಬೈಲ್ ಸಂಗ್ರಹದ ಕಾರ್ಯವನ್ನು ಮಾಡಲಿದ್ದಾರೆ. ಸಾರ್ವಜನಿಕರು ತಮ್ಮ ಬಳಿಯಲ್ಲಿ ಇರುವ ಹಳೆಯ ಮೊಬೈಲ್ ( ದುರಸ್ತಿ ಇರುವ ಮೊಬೈಲ್ ನೀಡಬೇಡಿರಿ, ವರ್ಕಿಂಗ್ ಮೊಬೈಲ್ ) ನೀಡಬಹುದಾಗಿದೆ. ದಾನಿಗಳು ಯಾರಾದರೂ ಸ್ಮಾರ್ಟ ಫೋನ್ ಕೊಡಿಸುವವರು ಇದ್ದರೆ ತಮ್ಮ ಸಹಕಾರವನ್ನು ನೀಡಬಹುದಾಗಿ ಎಂದು ಡಿಡಿಪಿಐ ಎನ್ ಎಚ್.ನಾಗೂರ ಅವರು ಮನವಿ ಮಾಡಿಕೊಂಡಿದ್ದಾರೆ.