Rishabh Shetty with Bommai : ನಟ ಸುದೀಪ್‌ ಬಳಿಕ ಬಿಜೆಪಿಗೆ ಮತ್ತೊಂದು ಸ್ಟಾರ್‌ ಬಲ : ಬಿಜೆಪಿ ಪರ ಪ್ರಚಾರ ಮಾಡ್ತಾರಾ ರಿಷಬ್‌ ಶೆಟ್ಟಿ

ಕೊಲ್ಲೂರು : (Rishabh Shetty with Bommai) ವಿಧಾನಸಭೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಈ ಮಧ್ಯೆ ಬಿಜೆಪಿ ಎರಡು ಹಂತದ ಪಟ್ಟಿ ಕೂಡ ಬಿಡುಗಡೆಗೊಂಡಿದೆ. ಸಿಎಂ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದ ಮೂಲಕ ಸ್ಪರ್ಧೆ ಮಾಡಲಿದ್ದು, ಚುನಾವಣೆಗೂ ಮುನ್ನವೇ ದೇವಾಲಯಗಳ ಭೇಟಿ ನಡೆಸಿದ್ದಾರೆ. ನಿನ್ನೆಯ ದಿನ ಪುಣ್ಯಕ್ಷೇತ್ರವಾದ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದ್ದು, ಇಂದು ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಬೊಮ್ಮಾಯಿ ಕೊಲ್ಲೂರಿಗೆ ಭೇಟಿ ನೀಡಿದ್ದು, ಇವರ ಜೊತೆ ಕನ್ನಡ ಚಿತ್ರರಂಗದ ಖ್ಯಾತ ನಟ ಕಾಂತಾರದ ರಿಷಬ್‌ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ. ಹಾಗಿದ್ದರೆ ಈ ಬಾರಿ ವಿಧಾನಸಭೆ ಚುನಾವಣೆಗೆ ಬೆಜೆಪಿ ಪರ ರಿಷಬ್‌ ಶೆಟ್ಟಿ ಕೂಡ ಪ್ರಚಾರ ಕಾರ್ಯ ನಡೆಸುತ್ತಾರೆ ಎಂಬ ಕುತೂಹಲ ಮೂಡಿದೆ.

ಇಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ ಬೆನ್ನಲ್ಲೇ ರಿಷಬ್‌ ಶೆಟ್ಟಿ ಕೂಡ ಇವರ ಜೊತೆ ಕಾಣಿಸಿಕೊಂಡಿದ್ದಾರೆ. ಕಳೆದ ವಾರವಷ್ಟೇ ನಟ ಸುದೀಪ್‌ ಸಿಎಂ ಬೊಮ್ಮಾಯಿಗೆ ನನ್ನ ಬೆಂಬಲ ಎಂದು ಹೇಳಿದ್ದರು. ಎಲ್ಲೆಲ್ಲಿ ಅವಶ್ಯಕಥೆ ಇದೆಯೋ ಅಲ್ಲಿ ನಾನು ಪ್ರಚಾರ ಮಾಡುತ್ತೇನೆ ಎಂದಿದ್ದರು. ಈಗ ಇದರ ಬೆನ್ನಲ್ಲೇ ಮತ್ತೋರ್ವ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಕೂಡ ಬೊಮ್ಮಾಯಿ ಅವರೊಂದಿಗೆ ಕಾಣಿಸಿಕೊಂಡಿದ್ದು, ಆಕಸ್ಮಿಕ ಭೇಟಿಯಾಗಿದ್ದರೂ ಕೂಡ, ರಿಷಬ್‌ ಶೆಟ್ಟಿ ಅವರು ಬಿಜೆಪಿ ಪರ ಪ್ರಚಾರಕ್ಕಿಳಿತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.

ಸಿಎಂ ಬೊಮ್ಮಾಯಿ ಹಾಗೂ ನಟ ರಿಷಬ್‌ ಶೆಟ್ಟಿ ದೇವಾಲಯದಲ್ಲಿ ಮುಖಾಮುಖಿಯಾಗಿದ್ದು, ಬಹಳ ಕುತೂಹಲಕ್ಕೆ ಕಾರಣವಾಗಿದೆ. ಜೊತೆಗೆ ಎಲ್ಲರ ಗಮನ ಕೂಡ ಸೆಳೆಯುತ್ತಿದೆ. ಸಿಎಂ ಬೊಮ್ಮಾಯಿ ಅವರು ಕೊಲ್ಲೂರಿಗೆ ಬರುವುದು ನಿನ್ನೆಯ ದಿನ ನಿಗಧಿಯಾಗಿದ್ದು, ಕೊಲ್ಲೂರು ಸಮೀಪದ ನಿವಾಸಿಯಾಗಿದ್ದ ರಿಷಬ್‌ ಶೆಟ್ಟಿ ಅವರು ದೇವರ ದರ್ಶನ ಕಾರಣವಾಗಿ ದೇವಸ್ಥಾನಕ್ಕೆ ಬಂದಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ಈ ಬಗ್ಗೆ ಬೊಮ್ಮಾಯಿ ಅವರು ಕೂಡ ತೀರಾ ಆಕಸ್ಮಿಕ ಭೇಟಿ ಎಂದು ಹೇಳಿದ್ದು, ” ನಮ್ಮ ಮತ್ತು ಅವರ ಸಿದ್ದಾಂತ ಒಂದೇ ಆಗಿದ್ದು, ನಮ್ಮ ಸಿದ್ದಾಂತವನ್ನು ಬಳಸಿ ಅನೇಕ ಹೇಳಿಕೆಗಳನ್ನು ನೀಡಿದ್ದು ನಾವು ನೋಡಿದ್ದೇವೆ. ಹಾಗಾಗಿ ಮುಂದಿನ ದಿನಗಳಲ್ಲಿ ಮೂಕಾಂಬಿಕೆ ಏನು ನಡೆಸಿಕೊಡುತ್ತಾಳೋ ಗೊತ್ತಿಲ್ಲ ” ಎಂಬುದಾಗಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ನಟ ರಿಷಬ್ ಭೇಟಿ ಬಗ್ಗೆ ಸಿಎಂ ಸ್ಪಷ್ಟನೆ

ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದ ವೇಳೆಯೇ ನಟ ರಿಷಬ್ ಶೆಟ್ಟಿ ಕೂಡ ಕುಟುಂಬ ಸಮೇತ ದೇವಿಯ ದರ್ಶನ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಹಾಗೂ ನಟ ರಿಷಬ್ ಒಟ್ಟಿಗೆ ತಾಯಿ ದರ್ಶನ ಮಾಡಿದ್ದು ಬಿಜೆಪಿ ಪರ ನಟ ರಿಷಬ್​ ಶೆಟ್ಟಿ ಪ್ರಚಾರ ಮಾಡ್ತಾರೆಂದು ಹೇಳಲಾಗುತ್ತಿತ್ತು. ಆದ್ರೆ ಈ ಬಗ್ಗೆ ಸಿಎಂ ಸ್ಪಷ್ಟನೆ ನೀಡಿದ್ದಾರೆ. ಈವರೆಗೆ ನಟ ರಿಷಬ್​​ ಶೆಟ್ಟಿ ಜತೆ ಯಾವುದೇ ಮಾತುಕತೆ ನಡೆದಿಲ್ಲ. ಮೂಕಾಂಬಿಕೆ ಏನು ಎಂಬ ಆಶೀರ್ವಾದ ಕೊಡುತ್ತಾಳೆ ನೋಡೋಣ. ನಮ್ಮ ಸಿದ್ಧಾಂತಕ್ಕೂ ಅವರ ಸಿದ್ಧಾಂತಕ್ಕೂ ಬಹಳ ಸಾಮ್ಯತೆ ಇದೆ. ಆಕಸ್ಮಿಕವಾಗಿ ದೇವಸ್ಥಾನದಲ್ಲಿ ನನಗೆ ನಟ ರಿಷಬ್​ ಶೆಟ್ಟಿ ಸಿಕ್ಕಿದ್ದಾರೆ. ನಾನು ಬರುವ ಮೊದಲೇ ರಿಷಬ್​ ಶೆಟ್ಟಿ ದೇವಸ್ಥಾನದಲ್ಲಿ ಇದ್ದರು. ಈ ಹಿಂದೆ ಕೂಡ ನಮ್ಮ ಸಿದ್ಧಾಂತವನ್ನು ಪ್ರತಿಪಾದನೆ ಮಾಡಿದ್ದಾರೆ. ಬಿಜೆಪಿ, ನಾಯಕತ್ವ ಬಗ್ಗೆ ರಿಷಬ್​​ ಒಲವಿರುವ ಮಾತಾಡಿದ್ದಾರೆ ಎಂದು ಕೊಲ್ಲೂರು ಮೂಕಾಂಬಿಕಾ ದೇಗುಲ ಬಳಿ ಸಿಎಂ ಬೊಮ್ಮಾಯಿ ತಿಳಿಸಿದರು

ಇದನ್ನೂ ಓದಿ : ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಂಡಾಯ : ಮೂಡಿಗೆರೆ ಶಾಸಕ ಕುಮಾರಸ್ವಾಮಿ ಬಿಜೆಪಿಗೆ ರಾಜೀನಾಮೆ

ಇದೀಗ ಬೊಮ್ಮಾಯಿ ಅವರು ಮಾತು ಹಲವು ಕುತೂಹಲಕ್ಕೆ ಕೂಡ ಕಾರಣವಾಗುತ್ತಿದ್ದು, ರಿಷಬ್‌ ಶೆಟ್ಟಿ ಅವರು ಬಿಜೆಪಿ ಪರ ಪ್ರಚಾರ ಮಾಡುವ ಸುಳಿವನ್ನು ಕೊಟ್ಟರಾ ಎಂಬ ಪ್ರಶ್ನೆ ಮೂಡುತ್ತಿದೆ. ಇನ್ನೂ ಕಿಚ್ಚ ಸುದೀಪ್‌ ಕೂಡ ತಾನು ಬಹಿರಂಗ ಪ್ರಚಾರಕ್ಕೆ ಬರುವುದಾಗಿ ಹೇಳಿದ್ದರು. ಇದೀಗ ಮತ್ತೊಬ್ಬ ಜನಪ್ರಿಯ ನಟ, ಕಾಂತಾರ ಸಿನಿಮಾ ಮೂಲಕ ರಾಷ್ಟ್ರವ್ಯಾಪಿ ಹೆಸರು ಮಾಡಿದ ಓರ್ವ ನಟ, ಕರಾವಳಿಯ ಸಂಸ್ಕೃತಿಯನ್ನು ಇಡೀ ಪ್ರಪಂಚಕ್ಕೆ ತೋರಿಸಿದ ನಟ ಇದೀಗ ಸಿಎಂ ಜೊತೆಯಲ್ಲಿ ಕೊಲ್ಲೂರು ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದು, ಸಾಕಷ್ಟು ಕುತೂಹಲವನ್ನು ಕೆರಳಿಸುತ್ತಿದೆ. ಹಾಗಿದ್ದರೆ ಬಿಜೆಪಿ ಸಿದ್ದಾಂತಕ್ಕೆ ಹತ್ತಿರವಾಗಿರುವ ರಿಷಬ್‌ ಶೆಟ್ಟಿ ಕರಾವಳಿ ಭಾಗದಲ್ಲಿ ಬಿಜೆಪಿ ಪರ ಪ್ರಚಾರ ಮಾಡುತ್ತಾರಾ ? ರಿಷಬ್‌ ಶೆಟ್ಟಿ ಅವರ ಮುಂದಿನ ನಿಲುವೇನು ? ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಈ ಕುತೂಹಲಕ್ಕೆ ರಿಷಬ್‌ ಶೆಟ್ಟಿಯವರೇ ತೆರೆ ಎಳೆಯಬೇಕಾಗಿದೆ.

Rishabh Shetty with Bommai: After actor Sudeep, another star force for BJP: Will Rishabh Shetty campaign for BJP?

Comments are closed.