ಬೆಂಗಳೂರು : ಕೊರೋನಾ ಹಾಗೂ ಬೆಲೆ ಏರಿಕೆಯ ಸಂಘರ್ಷದ ನಡುವೆ ಉದ್ಯೋಗವಿದ್ದರೂ ಬದುಕೋದು ಕಷ್ಟ ಎಂಬ ಸ್ಥಿತಿ ಇದೆ. ಅಂತಹದರಲ್ಲಿ ಕೆಲಸವಿಲ್ಲದೇ ಹೋದರಂತೂ ಬದುಕೋದು ಸಾಧ್ಯವೇ ಇಲ್ಲ. ಅಂತಹುದೇ ಸ್ಥಿತಿಯಲ್ಲಿರೋ ಬಿಎಂಟಿಸಿ (BMTC Driver ) ಚಾಲಕನೊಬ್ಬ ನನಗೆ ಉದ್ಯೋಗ ಕೊಡಿ ಇಲ್ಲವೇ ದಯಾಮರಣ (Mercy Death ) ನೀಡಿ ಎಂದು ರಾಷ್ಟ್ರಪತಿ, ಪ್ರಧಾನಿ ಮೋದಿಗೆ ಪತ್ರ ಬರೆದು ತಮ್ಮ ದುಃಖತೋಡಿಕೊಂಡಿದ್ದಾರೆ.
ಬಿಎಂಟಿಸಿಯ ಚಾಲಕರಾಗಿರೋ ಶಂಭುಲಿಂಗಯ್ಯ ಚಿಕ್ಕಮಠ್ ಹೀಗೆ ದಯಾಮರಣ ಕೋರಿ ಪತ್ರ ಬರೆದಿರೋ ಚಾಲಕ. ಕಳೆದ ಡಿಸೆಂಬರ್ ನಲ್ಲಿ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಸಿಬ್ಬಂದಿಗಳು ಮುಷ್ಕರ ನಡೆಸಿದ್ದರು. ಈ ವೇಳೆ ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ಜಗ್ಗದ ಸರ್ಕಾರ ಮುಷ್ಕರ ನಡೆಸಿದ ಹಲವು ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಿತ್ತು. ಈ ವೇಳೆ ಮುಷ್ಕರದಲ್ಲಿ ಭಾಗಿಯಾಗದ ಹಲವರನ್ನು ವಜಾಗೊಳಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಶಂಭುಲಿಂಗಯ್ಯ ಚಿಕ್ಕಮಠ್ ಕೂಡ ಹೀಗೆ ಮುಷ್ಕರದಲ್ಲಿ ಭಾಗಿಯಾಗದೇ ವಜಾಗೊಂಡ ನೌಕರರಾಗಿದ್ದು, ನ್ಯಾಯಕ್ಕಾಗಿ ಅಲೆದು ಅಲೆದು ಬೇಸರಗೊಂಡು ಈಗ ದಯಾಮರಣ ಕೋರಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಕೋವಿಂದ್, ಸಿಎಂ ಬೊಮ್ಮಾಯಿ ಹಾಗೂ ಸಾರಿಗೆ ಸಚಿವರಿಗೆ ಪತ್ರ ಬರೆದಿರೋ ಶಂಭುಲಿಂಗಯ್ಯ, ತಿನ್ನಲು ಅನ್ನವಿಲ್ಲ ನಮ್ಮ ಕುಟುಂಬ ಬೀದಿಗೆ ಬಿದ್ದಿದೆ ಮನೆ ಬಾಡಿಗೆ ಕಟ್ಟಲು ಆಗ್ತಿಲ್ಲ.

ನಾನು ಮುಷ್ಕರದಲ್ಲಿ ಭಾಗಿಯಾಗಿರಲಿಲ್ಲ ಆದರೂ ಬಿಎಂಟಿಸಿ ಅಧಿಕಾರಿಗಳು ನನ್ನನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಒಂದು ವರ್ಷದಿಂದ ಮಾಡಲು ಕೆಲಸವಿಲ್ಲ, ಬದುಕಲು ದಿಕ್ಕೇ ಇಲ್ಲ.ಈ ಬಗ್ಗೆ ಸಾಕಷ್ಟು ಬಾರಿ ಸಾರಿಗೆ ಸಚಿವರಿಗೆ ಮನವಿ ಮಾಡಿದ್ರು ನನಗೆ ನ್ಯಾಯ ಕೊಡಿಸಲಿಲ್ಲ ಹಾಗಾಗಿ ನಾನು ಮತ್ತು ನನ್ನ ಹೆಂಡತಿ ಮಕ್ಕಳಿಗೆ ದಯಾಮರಣ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಈಗಾಗಲೇ ವಜಾಗೊಂಡ ನೌಕರರ ಪೈಕಿ ಐದರಿಂದ ಹತ್ತು ನೌಕರರು ಬದುಕು ನಡೆಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೂ ಸರ್ಕಾರ ವಜಾಗೊಂಡ ನೌಕರರಿಗೆ ಮತ್ತೆ ಕೆಲಸ ನೀಡುತ್ತಿಲ್ಲ. ಪ್ರತಿಭಟನೆಗೆ ಕರೆ ಕೊಟ್ಟವರನ್ನು ಮತ್ತು ಭಾಗಿಯಾದವರಿಗೆ ಮಾತ್ರ ಪುನಃ ಕೆಲಸಕ್ಕೆ ಕರೆಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮಂಥ ಅಮಾಯಕ ಉದ್ಯೋಗಿಗಳು ಸಂಕಷ್ಟದಲ್ಲಿ ಇದ್ದೇವೆ. ಹೀಗಾಗಿ ನನಗೆ ಅನ್ಯಾಯವಾಗಿದೆ.ಬದುಕಲಂತೂ ಅವಕಾಶವಿಲ್ಲ. ಕನಿಷ್ಠ ಗೌರವದ ಸಾವನ್ನಾದರೂ ದಯಾಮರಣದ ರೀತಿಯಲ್ಲಿ ಕೊಡಿ ಎಂದು BMTC ನೌಕರ ಶಂಬುಲಿಂಗಯ್ಯ ಚಿಕ್ಕಮಠ ಅಂಗಲಾಚಿದ್ದಾರೆ. ರಾಜ್ಯದಾದ್ಯಂತ ಹಲವು ಬಿಎಂಟಿಸಿ ನೌಕರರು ಇದೇ ಸಮಸ್ಯೆಯಿಂದ ಬಳಲುತ್ತಿದ್ದು, ಮುಷ್ಕರದಲ್ಲಿ ಪಾಲ್ಗೊಳ್ಳದಿದ್ದರೂ ಶಿಸ್ತುಕ್ರಮಕ್ಕೆ ಒಳಗಾಗಿ ಪರದಾಡುತ್ತಿದ್ದಾರೆ.
ಇದನ್ನೂ ಓದಿ : ಕಾಡಿನಲ್ಲಿ ಮಜಾ ಮಾಡುತ್ತಿದ್ದ ಪ್ರೇಮಿಗಳ ಮೇಲೆ ಹುಲಿ ಅಟ್ಯಾಕ್ : ಯುವಕ ಸಾವು, ಯುವತಿ ಸ್ಥಿತಿ ಗಂಭೀರ
ಇದನ್ನೂ ಓದಿ : ವಿದ್ಯುತ್ ಮೀಟರ್ ಭದ್ರತಾ ಶುಲ್ಕ ಹೆಚ್ಚಳ : ಬೆಸ್ಕಾಂ ನಿರ್ಧಾರಕ್ಕೆ ಬೆಂಗಳೂರಿಗರ ಆಕ್ರೋಶ
Petition for mercy death bmtc driver