ಬೆಂಗಳೂರು : ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಕಂಗಾಲಾಗಿರುವ ಬಿಜೆಪಿ ಗೆ ಆಯ್ಕೆಯಾಗದ ಅಧ್ಯಕ್ಷಸ್ಥಾನ ಹಾಗೂ ವಿರೋಧ ಪಕ್ಷದ ನಾಯಕರ ಸ್ಥಾನವೂ ತಲೆನೋವಾಗಿ ಪರಿಣಮಿಸಿದೆ. ಈ ಮಧ್ಯೆ ಇತ್ತೀಚಿಗೆ ಕೇಳಿ ಬರ್ತಿರೋ ಲಿಂಗಾಯತ್ ರ ಕಡೆಗಣನೆ ಆರೋಪವೂ ಇನ್ನಷ್ಟು ಆತಂಕಕ್ಕೆ ದೂಡಿದೆ. ಹೀಗಾಗಿ ಪಕ್ಷದ ಇಮೇಜ್ ಹಾಗೂ ಶಕ್ತಿ ಕಾಪಾಡುವ ನಿಟ್ಟಿನಲ್ಲಿ ಕಮಲ ಪಾಳಯ ಮತ್ತೆ ರಾಜಾಹುಲಿ (BS Yeddyurappa) ಮೊರೆ ಹೋಗಿದೆ. ಹೀಗಾಗಿ ಬಿ.ಎಸ್.ಯಡಿಯೂರಪ್ಪ ಮತ್ತೆ ಪುಟಿದೆದ್ದಿದ್ದು ಪಕ್ಷವನ್ನು ಲಿಂಗಾಯತ್ ಅಸ್ತ್ರದಿಂದ ರಕ್ಷಿಸಲು ರಾಜ್ಯಾದ್ಯಂತ ಯಾತ್ರೆ ಆರಂಭಿಸಲು ಮುಂದಾಗಿದ್ದಾರೆ.
ರಾಜ್ಯ ಬಿಜೆಪಿ ಗೆ ಬಿಎಸ್ ಯಡಿಯೂರಪ್ಪ ಅನಿವಾರ್ಯ ಎಂಬ ಮಾತೊಂದಿತ್ತು. ಈ ಅಭಿಪ್ರಾಯ ಬದಲಾಹಿಸಲು ರಾಜ್ಯ ಬಿಜೆಪಿಯ ನಾಯಕರು ಇನ್ನಿಲ್ಲದ ಕಸರತ್ತು ಕೂಡ ನಡೆಸಿದರು. ಆದರೆ ಬಿಎಸ್ವೈ ಅನುಭವ ಹಾಗೂ ಪಕ್ಷವನ್ನು ಸಂಘಟಿಸುವ ಸಾಮರ್ಥ್ಯದ ಮುಂದೇ ಬಿಜೆಪಿಯ ಉಳಿದ ನಾಯಕರ ಅನುಭವ ಯಶಸ್ವಿಯಾಗಲಿಲ್ಲ. ಹೀಗಾಗಿ ಬಿಎಸ್ವೈ ಕಡೆಗಣಿಸುವ ಬಿಜೆಪಿಯ ಲೆಕ್ಕಾಚಾರ ಕಮಲಪಾಳಯಕ್ಕೆ ಭಾರಿ ಬೆಲೆ ತೆರುವಂತೆ ಮಾಡಿತು.

ಕಳೆದ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಇದನ್ನು ಅರಿತ ಬಿಜೆಪಿ, ಈಗ ಮತ್ತೆ ಬಿಎಸ್ವೈ ಪಾದಕ್ಕೆ ಮೊರೆ ಹೋಗುವಂತ ಸ್ಥಿತಿ ಎದುರಾಗಿದೆ. ಒಂದೆಡೆ ಸರ್ಕಾರ ಟೇಕಾಫ್ ಆಗಿ ವರ್ಷವಾಗುತ್ತ ಬಂದರೂ ಸಮರ್ಥ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡುವಲ್ಲಿ ಬಿಜೆಪಿ ವಿಫಲವಾಗಿದೆ. ಇದರೊಂದಿಗೆ ರಾಜ್ಯಾಧ್ಯಕ್ಷರ ಬದಲಾವಣೆ ಕೂಡ ಸಾಧ್ಯವಾಗಿಲ್ಲ. ಈ ಮಧ್ಯೆ ಚುನಾವಣೆ ವೇಳೆಗೆ ಲಕ್ಷ್ಮಣ ಸವದಿ ಹಾಗೂ ಜಗದೀಶ್ ಶೆಟ್ಟರ್ ಸ್ಥಾನಮಾನ ಹಾಗೂ ಚುನಾವಣೆ ಟಿಕೇಟ್ ಕಾರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಗೆ ಹಾರಿದ್ದು ಬಿಜೆಪಿ ಗೆ ಮತ್ತಷ್ಟು ನಷ್ಟ ಉಂಟುಮಾಡಿತು.
ಮಾತ್ರವಲ್ಲ ಬಿಜೆಪಿಯಲ್ಲಿ ಲಿಂಗಾಯತ್ ರಿಗೆ ಬೆಲೆ ಇಲ್ಲ. ಸ್ಥಾನಮಾನವಿಲ್ಲ ಎಂಬ ಸಂದೇಹದ ಕಿಡಿಯೊಂದನ್ನು ಹೊತ್ತಿಸಿತು. ಬಿಎಸ್ವೈ ರನ್ನು ಸಿಎಂ ಸ್ಥಾನದಿಂದ ಕೆಳಕ್ಕಿಳಿಸಿದ್ದನ್ನು ಸೇರಿಸಿ ಬಿಜೆಪಿ ಪಾಳಯದ ಎಲ್ಲ ನಿರ್ಧಾರಗಳಿಗೂ ಲಿಂಗಾಯತ್ ವಿರೋಧಿ ತಲೆ ಪಟ್ಟಿ ಕಟ್ಟುವ ವ್ಯವಸ್ಥಿತ ಸಂಚು ಆರಂಭವಾಗಿದೆ.

ಹೀಗಾಗಿ ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಕೈಸುಟ್ಟುಕೊಂಡಿರುವ ಬಿಜೆಪಿ, ಲೋಕಸಭೆ ಚುನಾವಣೆಯಲ್ಲಿ ಇದೇ ತಪ್ಪನ್ನು ಪುನರಾವರ್ತಿಸದಿರಲು ನಿರ್ಧರಿಸಿದೆ. ಹೀಗಾಗಿ ಹೈಕಮಾಂಡ್ ಮತ್ತೆ ಬಿಎಸ್ವೈ ಮೊರೆ ಹೋಗಿದ್ದು, ಬಿಜೆಪಿಯ ಬಗ್ಗೆ ಸೃಷ್ಟಿಯಾಗಿರುವ ತಪ್ಪು ಕಲ್ಪನೆಗಳಿಗೆ ತೆರೆ ಎಳೆಯಲು ನೆರವಾಗುವಂತೆ ಮನವಿ ಮಾಡಿದೆ ಎನ್ನಲಾಗ್ತಿದೆ
ಹೀಗಾಗಿ ತಮ್ಮ ಚಿಕ್ಕ ಪುಟ್ಟ ಮುನಿಸು ಗಳನ್ನು ಬದಿಗಿಟ್ಟ ರಾಜಾ ಹುಲಿ ಬಿಎಸ್ವೈ ಈಗ ರಾಜ್ಯದಾದ್ಯಂತ ಪ್ರವಾಸಕ್ಕೆ ಮುಂದಾಗಿದ್ದಾರೆ. ವೇಳಾಪಟ್ಟಿಯೊಂದಿಗೆ ರಾಜ್ಯದಾದ್ಯಂತ ಸಂಚರಿಸಲಿರುವ ಬಿಜೆಪಿಯ ನಾಯಕ ಬಿಎಸ್ ಯಡಿಯೂರಪ್ಪ ಅಸಮಧಾನಿತರು, ಪಕ್ಷದಿಂದ ಹೊರಹೋಗಲು ಸಿದ್ಧವಾದವರು, ಪಕ್ಷದಿಂದ ಮುಜುಗರಕ್ಕೊಳಗಾಗಿ ಮುನಿಸಿಕೊಂಡವರು ಎಲ್ಲರನ್ನು ಭೇಟಿ ಮಾಡಿ ಮನವೊಲಿಸಿ ಪಕ್ಷ ಸಂಘಟಿಸಲು ಹಾಗೂ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಬೇಸರ ಮರೆತು ದುಡಿಯಲು ಉತ್ಸಾಹ ತುಂಬಲಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ : ಅನ್ನಭಾಗ್ಯ ಯೋಜನೆಯಲ್ಲಿ ಭಾರೀ ಬದಲಾವಣೆ : ಈ ಕುಟುಂಬಗಳಿಗಿಲ್ಲ ಹೆಚ್ಚುವರಿ ಅಕ್ಕಿಯ ಹಣ
ಲಿಂಗಾಯತ್ ರು ಎಂಬ ಕಾರಣಕ್ಕೆ ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಲಾಯಿತು ಎಂಬ ಆರೋಪ ಈಗಾಗಲೇ ಹಲವು ಭಾರಿ ಕೇಳಿಬಂದಿದೆ. ಆ ಸಂದರ್ಭದಲ್ಲೆಲ್ಲ ಬಿಎಸ್ವೈ ಆ ರೀತಿಯ ಆರೋಪಗಳು ಸುಳ್ಳು. ಬಿಜೆಪಿ ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ ಎಂಬ ಮಾತನ್ನು ಹೇಳುತ್ತಲೇ ಬಂದಿದ್ದಾರೆ.
ಇದನ್ನೂ ಓದಿ : ಬಿಜೆಪಿಯ ನಿರ್ಲಕ್ಷ್ಯ ಕ್ಕೆ ಬೇಸತ್ತ ದಿ.ಅನಂತಕುಮಾರ್ ಕುಟುಂಬ ಕೈಪಾಳಯ ಸೇರ್ತಾರಾ ತೇಜಸ್ವಿನಿ
ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಬಿಜೆಪಿಯ ನಾಯಕರನ್ನು ಮತ್ತಷ್ಟು ಕೆರಳಿಸಲು ಹಾಗೂ ಬಿಜೆಪಿಯ ನಾಯಕರನ್ನು, ಎಂ ಎಲ್ ಎಗಳನ್ನು ಸೆಳೆಯಲು ಮತ್ತೆ ಮತ್ತೆ ಲಿಂಗಾಯತ್ ಅಸ್ತ್ರ ಬಳಕೆಮಾಡುತ್ತಲೇ ಇದೆ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಲೇ ಬಂದಿರೋ ಲಿಂಗಾಯತ್ ರು ಸಂಪೂರ್ಣವಾಗಿ ಬಿಜೆಪಿಯಿಂದ ದೂರಾಗುವ ಮುನ್ನ ಬಿಜೆಪಿ ಎದ್ದು ನಿಂತಿದ್ದು, ಪ್ರಬಲ ಲಿಂಗಾಯತ್ ನಾಯಕರಾದ ಬಿಎಸ್ ಯಡಿಯೂರಪ್ಪ ರನ್ನು ತನ್ನ ಮಂತ್ರದಂಡವಾಗಿ ಬಳಸಲು ಸಿದ್ಧವಾಗಿದೆ.
BS Yeddyurappa came to the arena to appease Lingayats: BJP finally woke up