ನನ್ನ ಬೆಳವಣಿಗೆ ಸಹಿಸದೇ ಇಡಿಗೆ ದೂರು ನೀಡಿದ್ರು….! ಹೆಸರೆತ್ತದೇ ಜೆಡಿಎಸ್ ನಾಯಕನತ್ತ ಬೊಟ್ಟು ಮಾಡಿದ ಜಮೀರ್….!!

ತಮ್ಮ ಮೇಲಿನ ಇಡಿ ದಾಳಿ ವಿರುದ್ಧ ಕೊನೆಗೂ ಮೌನ ಮುರಿದ ಶಾಸಕ ಜಮೀರ್ ಅಹ್ಮದ್ ಖಾನ್ ಇದು ಜೆಡಿಎಸ್ ನಾಯಕರ ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ನನ್ನ ರಾಜಕೀಯ ಏಳಿಗೆ  ಸಹಿಸದೇ ದಾಳಿ ನಡೆಸಲು ದೂರು ನೀಡಿದ್ದಾರೆ ಎಂದು ಜಮೀರ್ ಕಿಡಿಕಾರಿದ್ದಾರೆ.

ನಾನು ಇಷ್ಟು ಎತ್ತರಕ್ಕೆ ಬೆಳೆಯುತ್ತೇನೆ ಎಂದು ಅವರು ಭಾವಿಸಿರಲಿಲ್ಲ. ನನ್ನ ಬೆಳವಣಿಗೆ ಅವರ ಹೊಟ್ಟೆ ಉರಿಗೆ ಕಾರಣವಾಗಿದೆ. ಹೀಗಾಗಿ ನನ್ನ ಏಳಿಗೆ ಸಹಿಸಲಾಗದ ಜೆಡಿಎಸ್ ನಾಯಕರೇ ಇಡಿಗೆ ದೂರು ನೀಡಿದ್ದಾರೆ ಎಂದು ಹೆಸರು ಹೇಳದೇ ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿಯತ್ತ ಜಮೀರ್ ಅಹ್ಮದ್ ಬೊಟ್ಟು ಮಾಡಿದ್ದಾರೆ.

ನಾನು ಒಂದು ಒಳ್ಳೆಯ ಮನೆ ಕಟ್ಟಿರೋದನ್ನೇ ಅವರಿಂದ ಸಹಿಸಲು ಸಾಧ್ಯವಾಗಲಿಲ್ಲ. ತಮ್ಮನ್ನು ಬಿಟ್ಟು ಇನ್ಯಾರೂ ಒಳ್ಳೆಯ ಮನೆ ಕಟ್ಟಬಾರದು ಅನ್ನೋದು ಅವರ ಚಿಂತನೆ ಎಂದು ಜಮೀರ್ ಕಿಡಿಕಾರಿದ್ದಾರೆ.

ಇಂತಹ ದಾಳಿಗಳಿಂದ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ. ನನ್ನ ರಾಜಕೀಯ ಭವಿಷ್ಯ ದುರ್ಬಲಗೊಳಿಸಲು ಸಾಧ್ಯವಿಲ್ಲ. ನಾನು ಯಾರಿಗೂ ಹೆದರುವುದಿಲ್ಲ. ಐಎಂಎ ಹಗರಣಕ್ಕೂ ನನ್ನ ಮೇಲಿನ ಇಡಿ ದಾಳಿಗೂ ಸಂಬಂಧವಿಲ್ಲ ಎಂದು ಜಮೀರ್ ಸ್ಪಷ್ಟನೆ ನೀಡಿದ್ದಾರೆ.

Comments are closed.