ಕರ್ನಾಟಕದ ಮುಂದಿನ ಸಿಎಂ ಯಾರು ..? ಫೇಸ್ ಬುಕ್ ನಲ್ಲಿ ಕೇಳಿಬಂದಿದೆ ಬೆಲ್ಲದ ಹೆಸರು

ಧಾರವಾಡ : ರಾಜ್ಯದಲ್ಲಿ ಸಿಎಂ ಬದಲಾವಣೆಯ ಮಾತು ಕೇಳಿಬರುತ್ತಿದೆ. ಮುಂದಿನ ಸಿಎಂ ಯಾರು ಅನ್ನೋ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ನಡುವಲ್ಲೇ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಮುಂದಿನ ಸಿಎಂ ಅನ್ನೋ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸುತ್ತಿದೆ.

ಒಂದೆಡೆ ಸಿಎಂ ಯಡಿಯೂರಪ್ಪನವರೇ ಅವಧಿ ಪೂರ್ಣ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರಾ ಅನ್ನೋ ಮಾತು ಕೇಳಿಬರುತ್ತಿದೆ. ಅಲ್ಲದೇ ಹಲವು ಬೆಂಬಲಿಗರು ಕೂಡ ಯಡಿಯೂರಪ್ಪನವರಿಗೆ ಬೆಂಬಲ ಸೂಚಿಸಿದ್ದಾರೆ. ಇನ್ನೊಂದೆಡೆ ಯಡಿಯೂರಪ್ಪ ವಿರೋಧಿ ಪಾಳಯ ಸಿಎಂ ಬದಲಾವಣೆಗೆ ಪಟ್ಟು ಹಿಡಿದಿದೆ. ಅದ್ರಲ್ಲೂ 20ಕ್ಕೂ ಅಧಿಕ ಶಾಸಕರು ದೆಹಲಿಗೆ ಭೇಟಿ ನೀಡಿ ಸಿಎಂ ಬದಲಾವಣೆಗೆ ವರಿಷ್ಠರ ಮುಂದೆ ಪಟ್ಟು ಹಿಡಿದಿದ್ದಾರೆನ್ನುವ ಮಾತು ಕೇಳಿಬಂದಿತ್ತು. ಆ ವೇಳೆಯಲ್ಲಿಯೇ ಅರವಿಂದ್ ಬೆಲ್ಲದ್ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತು.

ಇದೀಗ ರಾಜ್ಯದ ಮುಂದಿನ ಸಿಎಂ ಅರವಿಂದ ಬೆಲ್ಲದ್ ಅನ್ನೋ ಸುದ್ದಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಬೆಲ್ಲದ್ ಅವರ ಅಭಿಮಾನಿಗಳು ಈ ಕುರಿತು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಉತ್ತರ ಕರ್ನಾಟಕದ ಲಿಂಗಾಯಿತ ಸಿಎಂ ಎಂದು ಕೂಡ ಬರೆದುಕೊಂಡಿದ್ದಾರೆ.

ಒಂದೆಡೆ ಸಿಎಂ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಸದ್ದು ಮಾಡುತ್ತಿದೆ. ಶಾಸಕರ ಬೆಂಬಲಿಗರು ತಮ್ಮ ನಾಯಕನೇ ಮುಂದಿನ ಸಿಎಂ ಅಂತಾನೂ ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ಬೆಲ್ಲದ್ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿದೆ. ಹೈಕಮಾಂಡ್ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲಾ ಅನ್ನುತ್ತಿದ್ರೂ ಕೂಡ ರಾಜ್ಯದ ಬಿಜೆಪಿ ಪಾಳಯದಲ್ಲಿಯೇ ಸಿಎಂ ಬದಲಾಗುತ್ತಾರೆ ಅನ್ನೋ ಮಾತು ಹರಿದಾಡುತ್ತಿದೆ.

Comments are closed.