ವಿಶಾಖಪಟ್ಟಣ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಐಪಿಎಲ್ ವಿಕ್ರಮದ ಹಿಂದಿನ ರೂವಾರಿಗಳಲ್ಲಿ ಒಬ್ಬರಾಗಿರುವ ಕ್ರಿಕೆಟಿಗ ಅಂಬಾಟಿ ರಾಯುಡು (Ambati Rayudu) ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. 37 ವರ್ಷದ ಅಂಬಾಟಿ ರಾಯುಡು ಕಳೆದ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 5ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ ಬೆನ್ನಲ್ಲೇ ಎಲ್ಲಾ ಮಾದರಿಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದರು. ಕ್ರಿಕೆಟ್’ನಿಂದ ನಿವೃತ್ತಿಯಾಗಿರುವ ಅಂಬಟಿ ರಾಯುಡು ರಾಜಕೀಯದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ಜನನ್ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರನ್ನು ಭೇಟಿ ಮಾಡಿರುವ ಬಗ್ಗೆ ಮಾತಾಡಿರುವ ಅಂಬಾಟಿ ರಾಯುಡು “ಸಿಎಂ ಜಗನ್ ಅವರು ರಾಜಕೀಯಕ್ಕೆ ಕಾಲಿಡುವ ಎಲ್ಲಾ ಯುವಕರಿಗೆ ದೊಡ್ಡ ಸ್ಫೂರ್ತಿ. ಅವರು ಇಡೀ ರಾಜ್ಯದಲ್ಲಿ ಅಭಿವೃದ್ಧಿ ಪರ್ವವನ್ನೇ ಮಾಡಿದ್ದಾರೆ. ನನ್ನ ವಿಚಾರದಲ್ಲಿ ರಾಜಕೀಯವಾಗಿ ಅವರು ಏನೇ ತೀರ್ಮಾನ ತೆಗೆದುಕೊಂಡರೂ ನಾನು ಅದಕ್ಕೆ ಬದ್ಧ” ಎಂದಿದ್ದಾರೆ. ಅಂಬಾಟಿ ರಾಯುಡು ಸದ್ಯದಲ್ಲೇ ಜಗನ್ ಅವರ ವೈಎಸ್’ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದೆ ಎನ್ನಲಾಗ್ತಿದೆ. ಆಂಧ್ರಪ್ರದೇಶದ ಗುಂಟೂರಿನವರು ಆಗಿರುವ ಅಂಬಾಟಿ ರಾಯುಡು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿವೆ.
ಅಂಬಾಟಿ ರಾಯುಡು ಅವರನ್ನು ಚುನಾವಣಾ ಕಣಕ್ಕೆ ಇಳಿಸಲು ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರೂ ಆಸಕ್ತರಾಗಿದ್ದಾರೆ. ಆದರೆ ಲೋಕಸಭೆಯಲ್ಲಿ ಕಣಕ್ಕೆ ಇಳಿಸುವುದೋ ಇಲ್ಲಾ, ವಿಧಾನಸಭಾ ಚುನಾವಣೆಯಲ್ಲಿ ಅವಕಾಶ ನೀಡುವುದೋ ಎಂಬ ಬಗ್ಗೆ ಸಿಎಂ ಜಗನ್ ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. 37 ವರ್ಷದ ಬಲಗೈ ಬ್ಯಾಟ್ಸ್’ಮನ್ ಅಂಬಾಟಿ ರಾಯುಡು ಭಾರತ ಪರ 55 ಏಕದಿನ ಪಂದ್ಯಗಳನ್ನಾಡಿದ್ದು, 47.05ರ ಸರಾಸರಿಯಲ್ಲಿ 3 ಶತಕ ಹಾಗೂ 10 ಅರ್ಧಶತಕಗಳ ಸಹಿತ 1694 ರನ್ ಕಲೆ ಹಾಕಿದ್ದಾರೆ. ಭಾರತ ಪರ ರಾಯುಡು 6 ಟಿ20 ಪಂದ್ಯಗಳನ್ನೂ ಆಡಿದ್ದಾರೆ.
ಇದನ್ನೂ ಓದಿ : ಏಕಕಾಲದಲ್ಲಿ NCAನಲ್ಲಿ ಪಂಚ ಪಾಂಡವರು.. ಇದು ಪುನಶ್ಚೇತನ ಶಿಬಿರವೋ, ಗಾಯಾಳುಗಳ ಆಸ್ಪತ್ರೆಯೋ ?
ಇದನ್ನೂ ಓದಿ : Asia Cup 2023 : ಬಿಸಿಸಿಐ ಹಠದ ಮುಂದೆ ನಡೆಯಲಿಲ್ಲ ಪಾಕ್ ಆಟ, ಶ್ರೀಲಂಕಾದಲ್ಲಿ ಭಾರತ Vs ಪಾಕ್ ಮ್ಯಾಚ್