ಬೆಂಗಳೂರು: ಪೀಣ್ಯ ಎಕ್ಸ್ಪ್ರೆಸ್ ಖ್ಯಾತಿಯ ವೇಗದ ಬೌಲರ್ ಅಭಿಮನ್ಯು ಮಿಥುನ್ (Abhimanyu Mithun) ಕರ್ನಾಟಕ ಕ್ರಿಕೆಟ್ ಕಂಡ ದಿಗ್ಗಜ ಆಟಗಾರರಲ್ಲೊಬ್ಬರು. ರಾಜ್ಯ ತಂಡ 2013-14 ಹಾಗೂ 2014-15ರಲ್ಲಿ ಸತತ 2 ಬಾರಿ ರಣಜಿ ಟ್ರೋಫಿ, ಇರಾನಿ ಕಪ್ ಹಾಗೂ ವಿಜಯ್ ಹಜಾರೆ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಾಗ ಆ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದವರು ಪೀಣ್ಯ ಪೀಣ್ಯ ಎಕ್ಸ್ಪ್ರೆಸ್ ಮಿಥುನ್.
ಕಳೆದ ವರ್ಷದ ಅಕ್ಟೋಬರ್’ನಲ್ಲಿ ಪ್ರಥಮದರ್ಜೆ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದ ಮಿಥುನ್, ರಣಜಿ ಟ್ರೋಫಿಯಲ್ಲಿ ಯುವ ವೇಗದ ಬೌಲರ್’ಗಳಿಗೆ ದಾರಿ ಮಾಡಿಕೊಟ್ಟಿದ್ದರು. ಕಳೆದೊಂದು ವರ್ಷದಿಂದ ಮಿಥುನ್ ಬೌಲಿಂಗ್ ನೋಡುವ ಅವಕಾಶದಿಂದ ವಂಚಿತರಾಗಿರುವ ಕನ್ನಡಿಗರಿಗೆ ಇದೊಂದು ಶುಭ ಸುದ್ದಿ. ಆಗಸ್ಟ್ 7ರಿಂದ 26ರವರೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಆಶ್ರಯದಲ್ಲಿ ನಡೆಯಲಿರುವ KSCA ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ವೇಗಿ ಅಭಿಮನ್ಯು ಮಿಥುನ್ ಆಡಲಿದ್ದಾರೆ.
ಕರ್ನಾಟಕ ಪರ 103 ಪ್ರಥಮದರ್ಜೆ ಪಂದ್ಯಗಳನ್ನಾಡಿರುವ ಬಲಗೈ ವೇಗಿ ಮಿಥುನ್, 338 ವಿಕೆಟ್ ಪಡೆದಿದ್ದಾರೆ. ಅಲ್ಲದೆ 96 ಲಿಸ್ಟ್ ‘ಎ’ ಪಂದ್ಯಗಳಿಂದ 136 ವಿಕೆಟ್ ಮತ್ತು 74 ಟಿ20 ಪಂದ್ಯಗಳಿಂದ 69 ವಿಕೆಟ್ ಕಬಳಿಸಿದ್ದಾರೆ. ಭಾರತ ಪರ 4 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದು, ಒಟ್ಟು 12 ವಿಕೆಟ್ ಪಡೆದಿದ್ದಾರೆ. 2009ರಲ್ಲಿ ಕರ್ನಾಟಕ ಪರ ಪ್ರಥಮದರ್ಜೆ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಮಿಥುನ್, ಉತ್ತರ ಪ್ರದೇಶ ವಿರುದ್ಧ ಮೀರತ್”ನಲ್ಲಿ ಆಡಿದ್ದ ಚೊಚ್ಚಲ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು. ಅದೇ ವರ್ಷ ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಮಿಥುನ್, ಬಹುಬೇಗ ಭಾರತ ತಂಡಕ್ಕೂ ಆಯ್ಕೆಯಾಗಿದ್ದರು. ಕರ್ನಾಟಕ ಪರ 11 ವರ್ಷಗಳ ಕಾಲ ಆಡಿದ್ದ ಮಿಥುನ್, ಪ್ರಥಮದರ್ಜೆ ಕ್ರಿಕೆಟ್”ಗೆ ನಿವೃತ್ತಿ ಘೋಷಿಸಿದ ನಂತರ, ದುಬೈನಲ್ಲಿ ಅಬುಧಾಬಿ ಟಿ20 ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ KSCA ಮಹಾರಾಜ ಟಿ20 ಟೂರ್ನಿಯೊಂದಿಗೆ ಮತ್ತೆ ರಾಜ್ಯ ಕ್ರಿಕೆಟ್’ಗೆ ಮಿಥುನ್ ವಾಪಸ್ಸಾಗಲಿದ್ದಾರೆ.
ಮ್ಯಾಚ್ ಫಿಕ್ಸಿಂಗ್-ಸ್ಪಾಟ್ ಫಿಕ್ಸಿಂಗ್ ಆರೋಪಗಳ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಕರ್ನಾಟಕ ಪ್ರೀಮಿಯರ್ ಲೀಗ್-ಕೆಪಿಎಲ್ ಟೂರ್ನಿ ಹೊಸ ರೂಪದಲ್ಲಿ ಮತ್ತೆ ಬಂದಿದೆ. KSCA ಮಹಾರಾಜ ಟ್ರೋಫಿ ಟಿ20 ಹೆಸರಲ್ಲಿ ಟೂರ್ನಿ ನಡೆಯಲಿದ್ದು, ಕರ್ನಾಟಕದ ಸ್ಟಾರ್ ಆಟಗಾರರಾದ ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್, ಶ್ರೇಯಸ್ ಗೋಪಾಲ್, ಕರುಣ್ ನಾಯರ್, ಜೆ.ಸುಚಿತ್, ಕೆ.ಗೌತಮ್, ಕೆ.ಸಿ ಕಾರಿಯಪ್ಪ, ಪ್ರವೀಣ್ ದುಬೆ, ದೇವದತ್ ಪಡಿಕ್ಕಲ್ ಟೂರ್ನಿಯಲ್ಲಿ ಆಡಲಿದ್ದಾರೆ. KSCA ಮಹಾರಾಜ ಟಿ20 ಟೂರ್ನಿ ಆಗಸ್ಟ್ 7ರಿಂದ 26ರವರೆಗೆ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿದ್ದು, ಮಂಗಳೂರು, ಹುಬ್ಬಳ್ಳಿ, ಮೈಸೂರು, ರಾಯಚೂರು, ಶಿವಮೊಗ್ಗ ಮತ್ತು ಬೆಂಗಳೂರು ತಂಡಗಳು ಆಡಲಿವೆ.
ಇದನ್ನೂ ಓದಿ : Sanju Samson Replace Rahul : ಕೆ.ಎಲ್ ರಾಹುಲ್ ಬದಲು ಸಂಜು ಸ್ಯಾಮ್ಸನ್’ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ
ಇದನ್ನೂ ಓದಿ : Mayank Agarwal shares Childhood Photo: ಬಾಲ್ಯದ ಮುದ್ದಾದ ಫೋಟೋ ಹಂಚಿಕೊಂಡ ಕರ್ನಾಟಕ ಕ್ರಿಕೆಟರ್ ಮಯಾಂಕ್ ಅಗರ್ವಾಲ್
Abhimanyu Mithun to play KSCA Maharaja T20