ಮಂಗಳವಾರ, ಮೇ 13, 2025
HomeSportsCricketKarnataka vs Uttarkhand : ಮೂರೂವರೆ ದಿನಗಳಲ್ಲೇ ಉತ್ತರಾಖಂಡ್ ಉಡೀಸ್, ರಣಜಿ ಟ್ರೋಫಿ ಸೆಮಿಫೈನಲ್‌ಗೆ ಲಗ್ಗೆ...

Karnataka vs Uttarkhand : ಮೂರೂವರೆ ದಿನಗಳಲ್ಲೇ ಉತ್ತರಾಖಂಡ್ ಉಡೀಸ್, ರಣಜಿ ಟ್ರೋಫಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

- Advertisement -

ಬೆಂಗಳೂರು: 8 ಬಾರಿಯ ಚಾಂಪಿಯನ್ಸ್ ಕರ್ನಾಟಕ ತಂಡ (Karnataka Ranji Team) ಪ್ರಸಕ್ತ ಸಾಲಿನ ರಣಜಿ ಟ್ರೋಫಿ (Ranji Trophy 2022-23) ಟೂರ್ನಿಯಲ್ಲಿ ಮೊದಲ ತಂಡವಾಗಿ ಸೆಮಿಫೈನಲ್’ಗೆ ಲಗ್ಗೆ ಇಟ್ಟಿದೆ.ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಅಂತ್ಯಗೊಂಡ ಉತ್ತರಾಖಂಡ್ (Karnataka vs Uttarkhand) ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಇನ್ನಿಂಗ್ಸ್ ಹಾಗೂ 281 ರನ್’ಗಳ ಭರ್ಜರಿ ಗೆಲುವು ದಾಖಲಿಸಿತು. ಕೇವಲ ಮೂರೂವರೆ ದಿನಗಳಲ್ಲಿ ಉತ್ತರಾಖಂಡ್ ತಂಡವನ್ನು ಬಗ್ಗು ಬಡಿದ ಮಯಾಂಕ್ ಅಗರ್ವಾಲ್ ಸಾರಥ್ಯದ ಕರ್ನಾಟಕ ಮತ್ತೊಮ್ಮೆ ರಣಜಿ ಸೆಮಿಫೈನಲ್ ಪ್ರವೇಶಿಸಿತು.

ಪ್ರಥಮ ಇನ್ನಿಂಗ್ಸ್’ನಲ್ಲಿ 490 ರನ್’ಗಳ ಭಾರೀ ಹಿನ್ನಡೆಯೊಂದಿಗೆ ಗುರುವಾರ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ್ದ ಉತ್ತರಾಖಂಡ್, 3 ವಿಕೆಟ್ ನಷ್ಟಕ್ಕೆ 106 ರನ್’ಗಳಿಂದ 4ನೇ ದಿನ ಆಟ ಮುಂದುವರಿಸಿತು. ಪಂದ್ಯದ ನಾಲ್ಕನೇ ದಿನ ಕರ್ನಾಟಕದ ಯುವ ಬಲಗೈ ವೇಗಿ ವೈಶಾಖ್ ವಿಜಯ್ ಕುಮಾರ್, ಡೆಬ್ಯುಟೆಂಟ್ ಎಂ.ವೆಂಕಟೇಶ್ ಮತ್ತು ಆಲ್ರೌಂಡರ್ ಶ್ರೇಯಸ್ ಗೋಪಾಲ್ ಅವರ ಮಾರಕ ದಾಳಿಗೆ ತತ್ತರಿಸಿದ ಉತ್ತರಾಖಂಡ್, ಕೇವಲ 89 ರನ್’ಗಳ ಅಂತರದಲ್ಲಿ ಕೊನೆಯ 7 ವಿಕೆಟ್’ಗಳನ್ನು ಕಳೆದುಕೊಂಡಿತು. ತವರು ನೆಲದಲ್ಲಿ ಮತ್ತೊಮ್ಮೆ ಅಮೋಘ ಬೌಲಿಂಗ್ ದಾಳಿ ಸಂಘಟಿಸಿದ ವೈಶಾಖ್ ವಿಜಯ್ ಕುಮಾರ್ 55 ರನ್ನಿಗೆ 3 ವಿಕೆಟ್ ಉರುಳಿಸಿದ್ರೆ, ಶ್ರೇಯಸ್ ಗೋಪಾಲ್ 26 ರನ್ನಿಗೆ 3 ವಿಕೆಟ್ ಪಡೆದರು. ಪ್ರಥಮ ಇನ್ನಿಂಗ್ಸ್’ನಲ್ಲಿ 5 ವಿಕೆಟ್’ಗಳ ಸಾಧನೆ ಮಾಡಿದ್ದ ಎಂ.ವೆಂಕಟೇಶ್ ದ್ವಿತೀಯ ಇನ್ನಿಂಗ್ಸ್’ನಲ್ಲಿ 44 ರನ್ನಿಗೆ 2 ವಿಕೆಟ್ ಕಬಳಿಸಿ ಪದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಉಳಿದೆರಡು ವಿಕೆಟ್ ವಿದ್ವತ್ ಕಾವೇರಪ್ಪ (2/30) ಪಾಲಾಯಿತು. ಅಂತಿಮವಾಗಿ ತನ್ನ ದ್ವಿತೀಯ ಇನ್ನಿಂಗ್ಸ್’ನಲ್ಲಿ 209 ರನ್ನಿಗೆ ಆಲೌಟಾದ ಉತ್ತರಾಖಂಡ್ ಇನ್ನಿಂಗ್ಸ್ ಹಾಗೂ 281 ರನ್’ಗಳಿಂದ ಕರ್ನಾಟಕಕ್ಕೆ ಶರಣಾಯಿತು.

ಇದಕ್ಕೂ ಮೊದಲು ಕರ್ನಾಟಕ ತಂಡ ಉತ್ತರಾಖಂಡ್’ನ ಪ್ರಥಮ ಇನ್ನಿಂಗ್ಸ್ ಮೊತ್ತವಾದ 116 ರನ್’ಗಳಿಗೆ ಪ್ರತಿಯಾಗಿ ತನ್ನ ಮೊದಲ ಇನ್ನಿಂಗ್ಸ್’ನಲ್ಲಿ 606 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಕರ್ನಾಟಕ ಪರ ಶ್ರೇಯಸ್ ಗೋಪಾಲ್ ಅಜೇಯ 161, ನಾಯಕ ಮಯಾಂಕ್ ಅಗರ್ವಾಲ್ 83, ಉಪನಾಯಕ ಆರ್.ಸಮರ್ಥ್ 82, ದೇವದತ್ತ್ ಪಡಿಕ್ಕಲ್ 69 ಮತ್ತು ನಿಕಿನ್ ಜೋಸ್ 62 ರನ್ ಗಳಿಸಿದ್ದರು. ಫೆಬ್ರವರಿ 8ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಆರಂಭವಾಗಲಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ, ಪಂಜಾಬ್ ಅಥವಾ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Exclusive: ಭಾರತ Vs ಆಸ್ಟ್ರೇಲಿಯಾ ಟೆಸ್ಟ್ ಪಂದ್ಯ ವೀಕ್ಷಿಸಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ

ಇದನ್ನೂ ಓದಿ : Exclusive: ಜ್ಯೂನಿಯರ್ ಮಹಿಳಾ ವಿಶ್ವಕಪ್ ವಿಕ್ರಮದ ಹಿಂದೆ ಕನ್ನಡತಿಯ ಕಮಾಲ್, ಭಾರತದ ಯಶಸ್ಸಿನ ಹಿಂದಿದ್ದಾರೆ ಕಲ್ಬುರ್ಗಿ ಕೋಚ್

Karnataka vs Uttarkhand Ranji Trophy 2023 Karnataka Enter Semi finals

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular