ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಹೊಸ ತಿರುವ ಸಿಕ್ಕಿದೆ. ಪ್ರಕರಣದ ಆರೋಪಿಗಳಾದ ನರೇಶ್ ಗೌಡ ಹಾಗೂ ಶ್ರವಣ್ ಇಂದು ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ನರೇಶ್ ಗೌಡ ಹಾಗೂ ಶ್ರವಣ್ ವಿರುದ್ದ ಹನಿಟ್ರ್ಯಾಪಿಂಗ್ ಹಾಗೂ ಬ್ಲ್ಯಾಕ್ ಮೇಲ್ ಪ್ರಕರಣ ದಾಖಲು ಮಾಡಿದ್ದರು. ಇದರ ಬೆನ್ನಲ್ಲೇ ಇಬ್ಬರೂ ಕೂಡ ನಾಪತ್ತೆಯಾಗಿದ್ದು, ಕಳೆದ ವಾರ ಇಬ್ಬರೂ ಆರೋಪಿಗಳಿಗೂ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಆರೋಪಿಗಳು ಇದೀಗ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಲ್ ಗೆ ತಮ್ಮ ವಕೀಲರ ಜೊತೆಗೆ ನರೇಶ್ ಹಾಗೂ ಶ್ರವಣ್ ಹಾಜರಾಗಿದ್ದಾರೆ. ಈಗಾಗಲೇ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರೂ ಕೂಡ ಎಸ್ಐಟಿ ಅಧಿಕಾರಿಗಳು ಅವಶ್ಯಕತೆ ಬಿದ್ದರೆ ಇಬ್ಬರನ್ನೂ ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಇನ್ನು ಎಸ್ಐಟಿ ಅಧಿಕಾರಿಗಳು ಈಗಾಗಲೇ ಇಬ್ಬರೂ ಆರೋಪಿಗಳಿಂದಲೂ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಈ ನಡುವಲ್ಲೇ ಯುವತಿ ಈಗಾಗಲೇ ರಮೇಶ್ ಜಾರಕಿಹೊಳಿ ವಿರುದ್ದವೂ ಗಂಭೀರ ಆರೋಪ ಮಾಡಿದ್ದಾಳೆ. ಇನ್ನೊಂದೆಡೆ ನರೇಶ್ ಹಾಗೂ ಶ್ರವಣ್ ಎಸ್ಐಟಿ ಅಧಿಕಾರಿಗಳ ಮುಂದೆ ನೀಡುವ ಹೇಳಿಕೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಅದ್ರಲ್ಲೂ ಎಸ್ಐಟಿ ಅಧಿಕಾರಿಗಳು ಇಬ್ಬರನ್ನೂ ತನಿಖೆ ನಡೆಸಿ ಸುಮ್ಮನಾಗುತ್ತಾರಾ. ಇಲ್ಲಾ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರಾ ಅನ್ನೋದು ಸದ್ಯ ಕುತೂಹಲಕ್ಕೆ ಕಾರಣವಾಗಿದೆ.