ಗಾಂಧಿ ವಿಚಾರ ವೇದಿಕೆಯು ಮಹಾತ್ಮಾ ಗಾಂಧೀಜಿಯವರ (Mahatma Gandhi) ಕುರಿತು ಸಾರ್ವಜನಿಕರಲ್ಲಿ ಇರುವ ಯಾವುದೇ ರೀತಿಯ ಸಂದೇಹಗಳಿಗೆ ಆಹ್ವಾನ ನೀಡಿದೆ. ಗಾಂಧಿ ವಿಚಾರ ವೇದಿಕೆಯು ಗಾಂಧೀಜಿಯವರ ಮೇಲಿನ ಎಲ್ಲ ಸಂದೇಹಗಳಿಗೆ ಉತ್ತರ ರೂಪಿಯಾದ ಪುಸ್ತಕವನ್ನು ಪ್ರಕಟಿಸಲು ಯೋಜನೆ ರೂಪಿಸಿದೆ. ಈ ಕಾರಣಕ್ಕೆ ಸಾರ್ವಜನಿಕರಿಂದ ಮಹಾತ್ಮಾ ಗಾಂಧೀಜಿ ಅವರ ಕುರಿತಾದ ಯಾವುದೇ ರೀತಿಯ ಅನುಮಾನ-ಗೊಂದಲ ಅಥವಾ ಪ್ರಶ್ನೆಗಳನ್ನು ಆಹ್ವಾನಿಸಿದೆ. ಸಾರ್ವಜನಿಕರು ಗಾಂಧೀಜಿಯವರ ಕುರಿತ ತಮ್ಮ ಪ್ರಶ್ನೆಗಳನ್ನು ಹೆಸರು, ಊರು, ಮೊಬೈಲ್ ನಂಬರ್ ಸಹಿತ mghegde04@gmail.com ಗೆ ಕಳಿಸಬಹುದಾಗಿದೆ.
ಈಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಶಿಕ್ಷಕ, ಗಾಂಧಿ ವಿಚಾರ ವೇದಿಕೆಯ ಅರವಿಂದ ಚೊಕ್ಕಾಡಿ ಸಾಮಾಜಿಕ ಜಾಲತಾಣಗಳಲ್ಲಿ ಕೋಟಿಗಳ ಸಂಖ್ಯೆಯಲ್ಲಿ ಗಾಂಧೀಜಿಯ ಬಗ್ಗೆ ಹರಿಯ ಬಿಡುವ ಅಪಪ್ರಚಾರಗಳ ಸಂದೇಶಗಳನ್ನು ನೋಡಿದರೆ, ನಮಗೆ ಈಗಾಗಲೆ ಲಕ್ಷಗಳ ಸಂಖ್ಯೆಗಳಲ್ಲಿ ಪ್ರಶ್ನೆಗಳು ಬರಬೇಕಾಗಿತ್ತು. ಆದರೆ ಕೇವಲ ಮೂರು ಪ್ರಶ್ನೆಗಳು ಬಂದಿವೆ. ಪೂನಾ ಒಪ್ಪಂದದ ಪ್ರಶ್ನೆ ಇಲ್ಲ. ಗಾಂಧಿ ಬೂರ್ಜ್ವಾ ಬಂಡವಾಳಶಾಹಿ ಎಂಬ ಪ್ರಶ್ನೆ ಇಲ್ಲ. ಯಾವನೊ ಆಸ್ಟ್ರೇಲಿಯಾದ ನಟನು ನಟಿಯೊಂದಿಗೆ ಮಾಡುವ ನೃತ್ಯದ ಫೊಟೊ ಹಾಕ್ಕೊಂಡು ಇದೇ ಗಾಂಧಿ ಎನ್ನುವ ಪ್ರಶ್ನೆ ಇಲ್ಲ. ಅಂದರೆ ಸಂದೇಹಗಳನ್ನು ಹರಿಯಬಿಡುವವರಿಗೆ ತಾವು ಸುಳ್ಳು ಹೇಳುತ್ತಿದ್ದೇವೆ ಎಂದು ಗೊತ್ತಿದ್ದು ಇದನ್ನು ಮಾಡುತ್ತಿದ್ದಾರೆ ಎಂದು ಅರ್ಥ. ಆದ್ದರಿಂದಲೇ ಅಧಿಕೃತವಾಗಿ ತಮ್ಮ ಹೆಸರಿನಲ್ಲಿ ಪ್ರಶ್ನೆ ಪ್ರಕಟವಾಗಿ, ಸಾಕ್ಷಿ ಸಹಿತ ಉತ್ತರ ಕೊಡುತ್ತಾರೆ ಮತ್ತು ಅದನ್ನು ಸಾರ್ವಕಾಲಿಕ ದಾಖಲೆಯಾಗಿ ಮಾಡಲಾಗುತ್ತದೆ ಎಂದು ಗೊತ್ತಾದಾಗ ಪ್ರಶ್ನೆಯೇ ಇಲ್ಲ ಎಂದು ಅರ್ಥವಲ್ಲವೆ? ಪ್ರಶ್ನೆಗಳು ಬಾರದಿದ್ದರೆ ಚಿಂತೆಯಿಲ್ಲ. ಒಂದು ಸಲ ಸಾಮಾಜಿಕ ಜಾಲತಾಣಕ್ಕೆ ಇಣುಕಿದರೆ ಈಗಾಗಲೇ ಹರಿಯಬಿಡಲಾಗಿರುವ ಸಂಗತಿಗಳು ಅಲ್ಲಿವೆ. ತನಗನಿಸಿದ್ದನ್ನು ಸಾರ್ವಜನಿಕವಾಗಿ ಹೇಳಿದ ಮೇಲೆ ಮುಗಿಯಿತು;ಅದು ಸಾರ್ವಜನಿಕ ಸ್ವತ್ತು. ಅಲ್ಲಿಂದಲೇ ನೇರವಾಗಿ ಪ್ರಶ್ನೆಗಳನ್ನು ಸಂಗ್ರಹಿಸುತ್ತೇವೆ? ಆದರೆ, ಪ್ರಶ್ನೆಗಳನ್ನು ಕೊಡದೆ ಇದ್ದರೂ ಈ ಪುಸ್ತಕ ಮಾಡುತ್ತಿರುವ ಬಗ್ಗೆ ಅಸಹನೆಯ ಪ್ರಚಾರಗಳಿವೆ. ಅಂದರೆ ಸುಳ್ಳು ಪ್ರಚಾರಗಳ ಮೂಲಕ ಜನರ ಮನಸ್ಸನ್ನು ಕೆಡಿಸುವುದು ನಡೆಯುವಾಗ ಸಮಾಜದ ವಿವೇಕವಂತ ವರ್ಗ ಅಸಹಾಯಕವಾಗಿ ಮೌನ ವಹಿಸಿ ಕೂರಬೇಕೆಂದು ಅದರ ಅರ್ಥ ಅಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಸಾಕಷ್ಟು ಸಮಯವಿದೆ. ಗಾಂಧೀಜಿಯ ಮೇಲಣ ಯಾವುದೆ ಸಂದೇಹಗಳನ್ನು ಕೇಳಿ ಎಂದು ನಿಮ್ಮ ಸಂದೇಹಗಳನ್ನು ಆಹ್ವಾನಿಸುತ್ತಿದ್ದೇವೆ. ನಿಮ್ಮ ಪ್ರಶ್ನೆಗಳನ್ನು ನಿಮ್ಮ ಹೆಸರು, ಊರು, ಮೊಬೈಲ್ ನಂಬರ್ ಸಹಿತ mghegde04@gmail.com ಗೆ ಕಳಿಸಿ ಎಂದು ಅವರು ತಿಳಿಸಿದ್ದಾರೆ
(Gandhi Vichara Vedike invites questions on Mahatma Gandhi)