ಕ್ಯಾನ್ಸರ್ ಪೀಡಿತರತ್ತ ಸ್ಯಾಂಡಲ್ ವುಡ್ ಚಿತ್ತ…! ಕೂದಲು ದಾನ‌ಮಾಡಿದ ವಜ್ರಕಾಯ ಬೆಡಗಿ …!!

ತಲೆಕೂದಲು ಅನ್ನೋದು ಮನುಷ್ಯನ ಸೌಂದರ್ಯಕ್ಕೆ ಅತಿ ಅವಶ್ಯಕ. ಆದರೆ ಕ್ಯಾನ್ಸರ್ ಪೀಡಿತರಿಗೆ ಇದೇ ಶಾಪ. ಹೀಗಾಗಿ ಇತ್ತೀಚಿಗಷ್ಟೇ ದುಬಾರಿ ನಾಯಕ ಧ್ರುವ್ ಸರ್ಜಾ ತಮ್ಮ ಕೂದಲು ದಾನ ಮಾಡಿ ಗಮನಸೆಳೆದಿದ್ದರು.ಇದೀಗ ಈ ಸಾಲಿಗೆ ನಟಮಣಿಯೊಬ್ಬರು ಸೇರ್ಪಡೆಗೊಂಡಿದ್ದಾರೆ.

ಕಿರುತೆರೆ ಹಾಗೂ ಬೆಳ್ಳಿತೆರೆ ನಟಿ ಕಾರುಣ್ಯರಾಮ್ ಕೂಡ ತಮ್ಮ ಉದ್ದನೆಯ ಕೂದಲನ್ನು ಕ್ಯಾನ್ಸರ್ ಪೀಡಿತರಿಗೆ ದಾನ ಮಾಡಿ ಸುದ್ದಿಯಾಗಿದ್ದಾರೆ.

ಕೆಲದಿನಗಳ ಹಿಂದೆಯಷ್ಟೇ ಪೆಟ್ರೋಮ್ಯಾಕ್ಸ್ ಶೂಟಿಂಗ್ ಮುಗಿಸಿರುವ ಕಾರುಣ್ಯರಾಮ್ ತಮ್ಮ ಹೇರ್ ಸ್ಟೈಲ್ ಬದಲಾಯಿಸಿಕೊಂಡಿದ್ದು ಉದ್ದನೆಯ ಕೂದಲನ್ನು ಶಾರ್ಟ್ ಕಟ್ ಮಾಡಿಸಿಕೊಂಡು ಉಳಿದ ಕೂದಲನ್ನು ಕ್ಯಾನ್ಸರ್ ಪೀಡಿತರ ಹೇರ್ ಡೊನೇಶನ್ ಗೆ ದಾನ ಮಾಡಿದ್ದಾರೆ.

೧೪ ಇಂಚು ಉದ್ದದ ಕೂದಲನ್ನು ದಾನ ಮಾಡಿರೋದಾಗಿ ಕಾರುಣ್ಯರಾಮ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ದಾನ‌ ಮಾಡಿರೋ ಕೂದಲಿನ ಜೊತೆ ಪೋಸ್ಟ್ ಹಾಕಿರೋ ಕಾರುಣ್ಯ ರಾಮ್, ಹೆಣ್ಣುಮಕ್ಕಳು ತಲೆಕೂದಲು ಬೆಳೆಸಲು ಎಷ್ಟು ಕಷ್ಟ ಪಡುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ನಾನು ಇದಕ್ಕೆ ಹೊರತಲ್ಲ. ಇಷ್ಟು ಉದ್ದದ ಕೂದಲು ಬೆಳೆಯಲು ಕನಿಷ್ಠ ಮೂರು ವರ್ಷ ಬೇಕು. ಅದರೆ ಕ್ಯಾನ್ಸರ್ ಪೀಡಿತರಿಗೆ ಈ ಕೂದಲಿನಿಂದ ಸಹಾಯವಾಗಲಿದೆ ಎಂದು ತಿಳಿದು ದಾನ ಮಾಡಿದ್ದು ಇದಕ್ಕೆ ಖುಷಿ ಹಾಗೂ ಸಮಾಧಾನ ಇದೆ ಎಂದಿದ್ದಾರೆ.

ಕನ್ನಡ ಬಿಗ್ ಬಾಸ್ ನಲ್ಲೂ ಸದ್ದು ಮಾಡಿದ್ದ ಕಾರುಣ್ಯರಾಮ್, ವಜ್ರಕಾಯ,ಗುಬ್ಬಿಮೇಲೆ ಬ್ರಹ್ಮಾಸ್ತ್ತ,ನರಸಿಂಹ,ಮತ್ತೊಂದು ಮದುವೆ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿದ್ದು, ಪ್ರಸ್ತುತ ನೀನಾಸಂ ಸತೀಶ್ ರ ಪೆಟ್ರೋಮ್ಯಾಕ್ಸ್ ನಲ್ಲೂ ಕಾಣಿಸಿಕೊಂಡಿದ್ದಾರೆ.

ಇತ್ತೀಚಿಗಷ್ಟೇ ಪೊಗರು ಶೂಟಿಂಗ್ ಮುಗಿಸಿದ ಬಳಿಕ ನಟ ಧ್ರುವ್ ಸರ್ಜಾ ಕೂಡ ತಮ್ಮ ಕೂದಲನ್ನು ಕ್ಯಾನ್ಸರ್ ಪೀಡಿತರಿಗಾಗಿ ದಾನ ಮಾಡಿದ್ದರು.

Comments are closed.