ಗೃಹಲಕ್ಷ್ಮೀ ಸಹಕಾರಿ ಬ್ಯಾಂಕ್ನಿಂದ ಸದ್ಯಕ್ಕಿಲ್ಲ ಸಾಲ ಸೌಲಭ್ಯ : ಫಲಾನುಭವಿಗಳಿಗೆ ಭಾರೀ ನಿರಾಶೆ
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗೃಹಲಕ್ಷ್ಮೀ ವಿವಿಧೋದ್ದೇಶ ಸಹಕಾರಿ ಸಂಘ ಸ್ಥಾಪಿಸಿತ್ತು.ಸ್ವತಃ ಸಿಎಂ ಸಿದ್ದರಾಮಯ್ಯ ನವೆಂಬರ್ 28ರಂದು ಈ ಸಂಘಕ್ಕೆ ಚಾಲನೆ ನೀಡಿದ್ದರು.
ಆದರೆ ಸಂಘದ ಮಾರ್ಗಸೂಚಿ ರೂಪಿಸುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಸದ್ಯಕ್ಕೆ ಸಾಲ ಸೌಲಭ್ಯ ಸಿಗುವುದು ಡೌಟ್ ಎನ್ನಲಾಗ್ತಿದೆ. ಈ ಸಂಘಕ್ಕೆ ಕಾನೂನಾತ್ಮಕವಾಗಿ ಚುನಾವಣೆ ನಡೆಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಈ ಸಂಘದ ಸದಸ್ಯರಿಗೆ ಸಾಲ ಸಿಗುವ ಪ್ರಕ್ರಿಯೆ ಕೂಡ ತಡವಾಗುತ್ತಿದೆ ಎನ್ನಲಾಗಿದೆ.ಇದು ಗೃಹಲಕ್ಷ್ಮೀ ಸಹಕಾರಿ ಸಂಘದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ.
ಅಲ್ಲದೇ ಸಂಘದ ಕಾರ್ಯನಿರ್ವಹಣೆ ಕುರಿತಂತೆ ಯಾವುದೇ ಮಾರ್ಗಸೂಚಿ ಕೂಡ ರೂಪಿತಗೊಂಡಿಲ್ಲ. ರಾಜ್ಯದಲ್ಲಿ ಇರುವ 1.24 ಕೋಟಿ ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಈ ಸಂಘದಿಂದ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯದ ಭರವಸೆ ನೀಡಲಾಗಿತ್ತು.
ಈ ಸಂಘದ ಸದಸ್ವತ್ವ ಪಡೆದವರೂ ಸಾಲಕ್ಕೆ ಅರ್ಜಿ ಸಲ್ಲಿಸಬಹುದು ಎನ್ನಲಾಗಿತ್ತು. ಸಂಘದ ಸದಸ್ಯತ್ವಕ್ಕೆ 1250 ರೂಪಾಯಿ ಶುಲ್ಕ ನಿಗದಿಯಾಗಿದ್ದು, ಯೋಜನೆಯ ಫಲಾನುಭವಿಗಳೆಲ್ಲ ಸದಸ್ಯತ್ವ ಪಡೆದರೆ 1200 ಕೋಟಿ ರೂಪಾಯಿ ರಾಜ್ಯದ ಬೊಕ್ಕಸಕ್ಕೆ ಸೇರಲಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಒಂದು ರಾಷ್ಟ್ರ ಒಂದು ಕಾರ್ಡ್ ಯೋಜನೆ ಆರಂಭ; ಡಿಎಲ್, ಆರ್ಸಿಯಲ್ಲಿ ಮಹತ್ವದ ಬದಲಾವಣೆ
ನವೆಂಬರ್ 29ರಂದೇ ಗೃಹಲಕ್ಷ್ಮೀ ಬ್ಯಾಂಕ್ನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಬೇಕಿತ್ತು. ಅನೇಕರು ದೂರದ ಊರುಗಳಿಂದ ಮತದಾನ ಮಾಡಲೆಂದೇ ಆಗಮಿಸಿದ್ದರು. ಆದರೆ ಚುನಾವಣೆ ಮುಂದೂಡಿಕೆಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿರ್ದೇಶಕರು ಮತದಾರರಿಗೆ ತಿಳಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಈ ನಡೆ ತೀವ್ರ ವಿರೋಧಕ್ಕೆ ಕಾರಣವಾಗಿತ್ತು.



