ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ನಂಟು ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರ ಜೊತೆ ಸಂರ್ಪಕ ಹೊಂದಿದ್ದ ಆರೋಪದ ಮೇರೆಗೆ ಕನ್ನಡದ ಟಾಪ್ ನಟಿ ಸ್ನೇಹಿತನೊಬ್ಬನನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಲಾಕ್ ಡೌನ್ ವೇಳೆಯಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ನಟಿಮಣಿ ಕಾರ್ ಅಪಘಾತ ವೇಳೆ ಕಾರಿನಲ್ಲಿ ನಟಿಯೊಂದಿಗೆ ಇದ್ದ ಲೋಕೇಶ್ ಎಂಬಾತನಿಗೆ ಸಿಸಿಬಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು.

ಈ ಲೊಕೇಶ್ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ಆದಿತ್ಯ ಆಳ್ವರೊಂದಿಗೆ ಸ್ನೇಹ ಹೊಂದಿದ್ದು, ಹಲವು ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದ ಎನ್ನಲಾಗಿದೆ. ಈ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಲೊಕೇಶ್ ಗೆ ನೊಟೀಸ್ ಜಾರಿ ಮಾಡಿದ್ದರು.

ಸಿಸಿಬಿ ನೊಟೀಸ್ ಹಿನ್ನೆಲೆಯಲ್ಲಿ ಶುಕ್ರವಾರ 10.30 ಕ್ಕೆ ಸಿಸಿಬಿ ಕಚೇರಿಗೆ ಹಾಜರಾದ ಲೊಕೇಶ್ ಪೊಲೀಸರ ಪ್ರಶ್ನೆಗಳಿಗೆ ಲಿಖಿತ ಹೇಳಿಕೆ ನೀಡಿದ್ದು,ಮಧ್ಯಾಹ್ನದವರೆಗೆ ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎನ್ನಲಾಗಿದೆ.

ಲಾಕ್ ಡೌನ್ ವೇಳೆಯಲ್ಲಿ ನಟಿಯೊಬ್ಬಳ ಕಾರು ಅಪಘಾತಕ್ಕಿಡಾಗಿತ್ತು. ಈ ಅಪಘಾತಕ್ಕೂ ಡ್ರಗ್ಸ್ ಕಾರಣ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಆರೋಪಿಸಿದ್ದರು. ಇದೀಗ ಘಟನೆ ವೇಳೆ ಕಾರಿನಲ್ಲಿ ಕನ್ನಡದ ನಟಿಮಣಿ ಜೊತೆಗಿದ್ದ ಲೊಕೇಶ್ ವಿಚಾರಣೆಗೆ ಕರೆದಿರೋದು ಸಂಬರಗಿ ಆರೋಪ ಪುಷ್ಠಿಕರಿಸುತ್ತಿದ್ದು, ಡ್ರಗ್ಸ್ ಉರುಳು ಕನ್ನಡದ ಕೃಷ್ಣಸುಂದರಿ ಕೊರಳಿಗೂ ಸುತ್ತಿಕೊಳ್ಳುತ್ತಾ ಅನ್ನೋ ಅನುಮಾನ ಮೂಡಿಸಿದೆ.