ಚೈನೈ: ವಿಸಿಕೆ ಅಧ್ಯಕ್ಷ ದೋಳ್ ತಿರುಮಾವಳವನ್ ಅವರು ಮನುಸ್ಮೃತಿ ಉಲ್ಲೇಖಿಸಿ ಮಹಿಳೆಯರ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಗೆ ಆರಂಭದಲ್ಲೇ ಹಿನ್ನಡೆಯಾಗಿದ್ದು, ವ ಪ್ರತಿಭಟನೆ ನೇತೃತ್ವ ವಹಿಸಿದ್ದ ಬಿಜೆಪಿ ನಾಯಕಿ ಖುಷ್ಬೂ ಅವರನ್ನು ದಾರಿ ಮಧ್ಯೆಯೇ ಪೊಲೀಸರು ಬಂಧಿಸಿದ್ದಾರೆ.

ಪ್ರತಿಭಟನೆಗೆ ತೆರಳುತ್ತಿದ್ದ ಖುಷ್ಬೂ ಅವರನ್ನು ತಮಿಳುನಾಡಿನ ಮುಟ್ಟುಕಾಡುದಲ್ಲಿ ಮಂಗಳವಾರ ಬಂಧಿಸಲಾಗಿದ್ದು, ಚಿದಂಬರಂಗೆ ತೆರಳುತ್ತಿದ್ದಾಗ ಖುಷ್ಬೂ ಬಂಧನವಾಗಿರೋದರಿಂದ ಪ್ರತಿಭಟನೆಗೆ ಹಿನ್ನಡೆಯಾಗಿದೆ. ಚಿದಂಬರಂನಲ್ಲಿ ಪ್ರತಿಭಟನೆ ನಡೆಸಲು ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿತ್ತು. ಆದರೂ ಬಿಜೆಪಿ ಪ್ರತಿಭಟನೆಗೆ ಮುಂದಾಗಿತ್ತು.

ಖುಷ್ಬೂ ಮಾತ್ರವಲ್ಲದೇ ಪ್ರತಿಭಟನೆ ಆಯೋಜಿಸಿದ್ದ ತಮಿಳುನಾಡು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಘವನ್ ಅವರನ್ನು ಮೇಲ್ಮರುವಥುರ್ ಸಮೀಪದ ಆಥುರ್ ಟೋಲ್ ಗೇಟ್ ನಲ್ಲಿ ಬಂಧಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಗಿದೆ. ಬಳಿಕ ಬಿಡುಗಡೆಮಾಡಲಾಗುವುದು ಎಂದು ತಮಿಳುನಾಡು ಪೊಲೀಸರು ವಿವರಣೆ ನೀಡಿದ್ದಾರೆ.
ಪೊಲೀಸ್ ವ್ಯಾನ್ ನಲ್ಲಿ ತೆರಳುವ ವೇಳೆಯೇ ವಿಸಿಕೆ ಪಕ್ಷದ ವಿರುದ್ಧ ಚಾಟಿ ಬೀಸಿದ ಖುಷ್ಬೂ, ಖುಷಿ ಪಡಬೇಡಿ. ನಮ್ಮ ಬಂಧನ ನಿಮ್ಮ ಹೇಡಿತನಕ್ಕೆ ಸಾಕ್ಷಿ. ನಾವು ಈ ಮಣ್ಣಿನ ಗೌರವ ಕಾಪಾಡಲು ಕೊನೆಯವರೆಗೂ ಹೋರಾಡುತ್ತೇವೆ. ನಿಮಗೆ ಹೆಣ್ಣಿಗೆ ಗೌರವ ಕೊಡೋದು ಕಷ್ಟವಾಗುತ್ತಿದೆ ಎಂದು ನಮಗೆ ಗೊತ್ತಿದೆ ಎಂದಿದ್ದಾರೆ.

ತಿರುಮಾವಳವನ್ ಮನುಸ್ಮೃತಿ ಉಲ್ಲೇಖಿಸಿ ಮಹಿಳೆಯರ ಬಗ್ಗೆ ವೆಬಿನಾರ್ ಒಂದರಲ್ಲಿ ಲಘುವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲ ಕ್ಷಮೆ ಕೋರಬೇಕೆಂದು ಆಗ್ರಹಿಸಿತ್ತು. ಆದರೆ ತಿರುಮಾವಳವನ್ ಕ್ಷಮೆ ಕೇಳಲು ನಿರಾಕರಿಸಿದ ಬಳಿಕ ಬಿಜೆಪಿ ಹೋರಾಟ ಆಯೋಜಿಸಿದೆ.
ಇತ್ತೀಚಿಗಷ್ಟೇ ಕಾಂಗ್ರೆಸ್ ಧೋರಣೆಗಳ ವಿರುದ್ಧ ಹರಿಹಾಯ್ದ ಖುಷ್ಬೂ ಬಿಜೆಪಿ ಸೇರ್ಪಡೆಗೊಂಡಿದ್ದರು.