ಬೆಂಗಳೂರು: ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಒಂದಿಷ್ಟು ತಣ್ಣಗಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮತ್ತೆ ಜೀವ ಪಡೆದುಕೊಂಡಿದೆ. ಪ್ರಕರಣವನ್ನು ಹಿಂಪಡೆಯುವಂತೆ ನನ್ನ ವಕೀಲರಿಗೆ ಆಮಿಷ ಒಡ್ಡಲಾಗುತ್ತಿದೆ ಎಂದು ಸಂತ್ರಸ್ಥ ಯುವತಿ ಆರೋಪಿಸಿದ್ದು, ಕಮೀಷನರ್ ಗೆ ದೂರು ಸಲ್ಲಿಸಿದ್ದಾರೆ.
ನಾನು ಈಗಾಗಲೇ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯುವಂತೆ ನನ್ನ ವಕೀಲರಾದ ಸೂರ್ಯ ಮುಕುಂದ್ ರಾಜ್ ಹಾಗೂ ಜಗದೀಶ್ ಅವರಿಗೆ ಆಮಿಷ್ ಒಡ್ಡಲಾಗುತ್ತಿದೆ ಎಂದು ಸಂತ್ರಸ್ಥ ಯುವತಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಕುರಿತು ಲಿಖಿತ ದೂರನ್ನು ತನಿಖಾಧಿಕಾರಿ ಎಸಿಪಿ ಕವಿತಾ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ್ದಾರೆ.
ಸೋಮವಾರ ಸಂಜೆ 4.37 ಕ್ಕೆ ಪ್ರದೀಪ್ ಎಂಬಾತ ವಾಟ್ಸಪ್ ಕಾಲ್ ಮಾಡಿದ್ದಾನೆ. ಆಯ್ ಹ್ಯಾವ್ ಗುಡ್ ಆಫರ್ ಫಾರ್ ಟೂ ಯೂ ಎಂದು ಆಮಿಷ ಒಡ್ಡಿದ್ದಾನೆ. ಕೇಸ್ ಹಿಂಪಡೆಯಿರಿ. ಹಿಂಪಡೆದರೇ ಕೋಟ್ಯಾಂತರ ರೂಪಾಯಿ ಸೆಟಲ್ ಮೆಂಟ್ ಮಾಡುವುದಾಗಿ ಆಮಿಷ ಒಡ್ಡಿದ್ದಾರೆ ಎಂದು ಸಂತ್ರಸ್ಥ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಈಗಾಗಲೇ ಹಲವಾರು ಭಾರಿ ನೊಟೀಸ್ ನೀಡಿದ್ದರೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಸ್ಐಟಿ ವಿಚಾರಣೆಗೆ ಹಾಜರಲಾಗಿಲ್ಲ. ಮೊದಲು ಕೊರೋನಾ ಕಾರಣ ನೀಡಿ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದ ರಮೇಶ್ ಜಾರಕಿಹೊಳಿ ಈಗ ಕೊರೋನಾ ನೆಗೆಟಿವ್ ಬಂದಿದ್ದರೂ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.
ಹೀಗಾಗಿ ಸಹಜವಾಗಿ ಸಿಡಿ ಪ್ರಕರಣದ ತನಿಖೆ ಹಲವು ಅನುಮಾನ ಮೂಡಿಸಿದೆ. ಈ ಮಧ್ಯೆ ತನಿಖಾಧಿಕಾರಿಗಳಿಗೆ ಸಂತ್ರಸ್ಥೆ ಪತ್ರ ಬರೆದಿದ್ದು ಹೊಸ ಚರ್ಚೆ ಹುಟ್ಟುಹಾಕಿದೆ. ಆರಂಭದಿಂದಲೂ ರಮೇಶ್ ಜಾರಕಿಹೊಳಿ ತಮ್ಮ ಮೇಲೆ ಪ್ರಭಾವ ಬೀರಿ ಪ್ರಕರಣ ಹಿಂಪಡೆಯಲು ಒತ್ತಾಯಿಸುತ್ತಿದ್ದಾರೆ ಎಂದು ಸಂತ್ರಸ್ಥೆ ಆರೋಪಿಸುತ್ತಲೇ ಬಂದಿದ್ದರು.
Comments are closed.