Mandira bedi: ಪತಿ ಅಂತ್ಯಸಂಸ್ಕಾರ ನೆರವೇರಿಸಿದ ಪತ್ನಿ….! ಸಂಪ್ರದಾಯಗಳ ಬೇಲಿ ದಾಟಿದ ಮಂದಿರಾ ಬೇಡಿ…!

ಬದುಕಿನುದ್ದಕ್ಕೂ ಸಂಪ್ರದಾಯಗಳ ಬೇಡಿ ತೊರೆದು ಬದುಕಿದ ನಟಿ ಮಂದಿರಾ ಬೇಡಿ ಪತಿಯ ಸಾವಿನ ವೇಳೆಯಲ್ಲೂ ಸಂಪ್ರದಾಯಗಳಾಚೆಗೆ ದಿಟ್ಟ ಹೆಜ್ಜೆ ಇಟ್ಟು ಚರ್ಚೆಗೆ ಗ್ರಾಸವಾಗಿದ್ದಾರೆ.

ಮಂದಿರ ಬೇಡಿ ಪತಿ ಹಾಗೂ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ರಾಜ್ ಕೌಶಲ್ 49 ವರ್ಷ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರಾಜ್ ಕೌಶಲ್ ದಿಢೀರ್ ಅಗಲಿಕೆ ಚಿತ್ರರಂಗ ಹಾಗೂ ಮಂದಿರಾ ಬೇಡಿ ಕುಟುಂಬಕ್ಕೆ ಆಘಾತ ಉಂಟುಮಾಡಿದೆ.

ಬದುಕಿನಲ್ಲಿ ತಮ್ಮ ಬೋಲ್ಡ್ ನಡೆಗಳಿಂದ ಸದಾ ಚರ್ಚೆಗೆ ಗ್ರಾಸವಾಗುತ್ತಿದ್ದ ನಟಿ ಮಂದಿರಾ ಬೇಡಿ ಎಲ್ಲ ಸಂಪ್ರದಾಯ ಮೀರಿ ಪತಿಯ ಅಂತ್ಯಸಂಸ್ಕಾರವನ್ನು ತಾವೇ ನಡೆಸಿದ್ದಾರೆ.

ಹಿಂದೂ ಸಂಪ್ರದಾಯದಲ್ಲಿ ಸಾಮಾನ್ಯವಾಗಿ ಶವಸಂಸ್ಕಾರದ ವೇಳೆ ಬೆಂಕಿ ಇರುವ ಗಡಿಗೆಯನ್ನು ಪುರುಷರು ಕೊಂಡೊಯ್ಯುವುದು ಹಾಗೂ ಪುರುಷರೇ ಅಂತ್ಯಸಂಸ್ಕಾರ ನಡೆಸುವುದು ನಿಯಮ.

ಆದರೆ ಪತಿಯ ಅಗಲಿಕೆಯಿಂದ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಮಂದಿರಾ ಬೇಡಿ ಎಲ್ಲ ಸಂಪ್ರದಾಯ ಬದಿಗೊತ್ತಿ ತಾವೇ ಬೆಂಕಿ ಇದ್ದ ಮಡಿಕೆ ಹೊತ್ತು ಶವದ ಮುಂದೇ ಸಾಗಿದ್ದು, ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಇದು ಚರ್ಚೆಗೆ ಗ್ರಾಸವಾಗಿದೆ.

ರಾಜ್ ಕೌಶಲ್ ನಿಧನಕ್ಕೆ ಬಾಲಿವುಡ್ ಗಣ್ಯರು ಕಂಬನಿ ಮಿಡಿದಿದ್ದು, ಟ್ವೀಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

1999 ರಲ್ಲಿ ರಾಜ್ ಕೌಶಲ್ ಜೊತೆ ಸಪ್ತಪದಿ ತುಳಿದ ಮಂದಿರಾ ಬೇಡಿ 2011 ರಲ್ಲಿ ಒಂದು ಮಗುವಿನ ತಾಯಿಯಾಗಿದ್ದು, ಬಳಿಕ ಇನ್ನೊಂದು  ಮಗುವನ್ನು ದತ್ತು ಪಡೆದಿದ್ದಾರೆ.

Comments are closed.