ಬೆಂಗಳೂರು : ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆ ಸರಣಿ ಮುಂದುವರಿದ್ದು, ಇದೀಗ ಮತ್ತೋರ್ವ ಪೊಲೀಸ್ ಅಧಿಕಾರಿ ಸಂಬಂಧಿಕರ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಿಐಡಿ ಡಿವೈಎಸ್ಪಿ ವಿ. ಲಕ್ಷ್ಮಿ (33 ವರ್ಷ) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ಡಿವೈಎಸ್ಪಿ. ಸಿಐಡಿಯ ಡಿವೈಎಸ್ಪಿ ವಿ ಲಕ್ಷ್ಮೀ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದ ಪರಿಚಿತರ ಮನೆಯಲ್ಲಿ ಅವರು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಲಕ್ಷ್ಮಿ ವಿ 2014ರ ಬ್ಯಾಚ್ನ ಕೆಎಸ್ಪಿಎಸ್ ಅಧಿಕಾರಿ. 2017ರಲ್ಲಿ ಸಿಐಡಿ ಡಿವೈಎಸ್ಪಿಯಾಗಿ ಅವರು ನೇಮಕಗೊಂಡಿದ್ದರು. ನಿನ್ನೆ ಪರಿಚಿತರ ಮನೆಗೆ ಊಟಕ್ಕೆಂದು ತೆರಳಿದ್ದು, ಸ್ನೇಹಿತರ ಜೊತೆ ಸೇರಿ ಪಾರ್ಟಿ ಮಾಡಿದ್ದಾರೆ. ನಂತರ ರೂಮಿಗೆ ತೆರಳಿದ್ದರು. ರಾತ್ರಿ 10.30ರ ಸುಮಾರಿಗೆ ರರೂಪಿನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲಕ್ಷ್ಮೀ ಅವರ ಗಂಡ ಹೈದರಾಬಾದ್ ಗೆ ತೆರಳಿದ್ದರು. ಲಕ್ಷ್ಮೀ ಅವರ ಸ್ನೇಹಿತನ ಅಪಾರ್ಟ್ ಮೆಂಟ್ನಲ್ಲಿ ಕೊವೀಡ್ ಕೇರ್ ಸೆಂಟರ್ ತೆರೆಯಲಾಗಿತ್ತು. ಹಾಗಾಗಿ, ಆಗಾಗ ಅಲ್ಲಿಗೆ ಹೋಗುತ್ತಿದ್ದ ಲಕ್ಷ್ಮೀ ನಿನ್ನೆ ಕೂಡ ಅಲ್ಲಿಗೆ ತೆರಳಿದ್ದರು. ಡಿವೈಎಸ್ ಪಿ ಲಕ್ಷ್ಮೀ ಅವರು ಕಳೆದ ಕೆಲ ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ನಿನ್ನೆ ರಾತ್ರಿ ಊಟಕ್ಕೆ ಹೋದ ವೇಳೆ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದ ಲಕ್ಷ್ಮೀ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.