ಬೆಂಗಳೂರು: ಕೊರೋನಾ ಎರಡನೇ ಅಲೆಯಿಂದ ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಆದರೆ ವಿದ್ಯಾರ್ಥಿಗಳು ಪ್ರಥಮ ಪಿಯುಸಿಯಲ್ಲಿ ಗಳಿಸಿದ ಅಂಕ ಆಧರಿಸಿ ಫಲಿತಾಂಶ ಪ್ರಕಟಿಸುವುದಾಗಿ ಘೋಷಿಸಿದ್ದ ಶಿಕ್ಷಣ ಇಲಾಖೆ ಈಗ ಫಲಿತಾಂಶದ ಮಾನದಂಡದಲ್ಲಿ ಪರಿಷ್ಕರಣೆಗೊಳಿಸಿದ್ದು, ವಿದ್ಯಾರ್ಥಿಯ ಎಸ್.ಎಸ್.ಎಲ್.ಸಿ ಹಾಗೂ ಪ್ರಥಮ ಪಿಯುಸಿ ಅಂಕದ ಆಧಾರದ ಮೇಲೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ.
ಈ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಹಿತಿ ನೀಡಿದ್ದು, ಎಸ್.ಎಸ್.ಎಲ್.ಸಿ ಅಂಕಗಳನ್ನು ಪರಿಗಣಿಸಿ ಬಳಿಕ ದ್ವಿತೀಯ ಪಿಯುಸಿ ಗ್ರೇಡ್ ಪ್ರಕಟಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಪತ್ರ ಬರೆದಿದ್ದಾರೆ.
ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪಿಯುಸಿ ಬೋರ್ಡ್ ನಿರ್ದೇಶಕರು ಹಾಗೂ ಎಸ್.ಎಸ್.ಎಲ್.ಸಿ ಬೋರ್ಡ್ ನಿರ್ದೇಶಕರಿಗೆ ಪತ್ರ ಬರೆದು ಫಲಿತಾಂಶ ಸಿದ್ಧಪಡಿಸುವ ವೇಳೆ ಎಸ್.ಎಸ್.ಎಲ್.ಸಿ ಅಂಕವನ್ನು ಪರಿಗಣಿಸಲು ಸೂಚಿಸಲಾಗಿದೆ.
ವಿದ್ಯಾರ್ಥಿಗಳ ಪ್ರಥಮ ಪಿಯುಸಿಯ ಅಂಕ ಮತ್ತು ಎಸ್.ಎಸ್.ಎಲ್.ಸಿ ಅಂಕವನ್ನು ಯಾವ ಪ್ರಮಾಣದಲ್ಲಿ ಪರಿಗಣಿಸಬೇಕು ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಹೀಗಾಗಿ ಮುಂದಿನ ದಿನದಲ್ಲಿ ಇಲಾಖೆ ಸರಿಯಾದ ನಿರ್ಧಾರ ಹಾಗೂ ಮಾರ್ಗಸೂಚಿ ಪ್ರಕಟಿಸುವ ನೀರಿಕ್ಷೆ ಇದೆ.
ಕಳೆದ ವರ್ಷ ಸರ್ಕಾರ ಕೊರೋನಾದ ನಡುವಲ್ಲೂ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಿತ್ತು. ಆದರೆ ಈ ವರ್ಷ ಕೊರೋನಾ ಹಾಗೂ ಮಕ್ಕಳ ಆರೋಗ್ಯದ ದೃಷ್ಟಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸಿದೆ. ಆದರೆ ಎಸ್.ಎಸ್.ಎಲ್.ಸಿಗೆ ವಿಶೇಷ ಸರಳಿಕೃತ ವ್ಯವಸ್ಥೆಯಲ್ಲಿ ಪರೀಕ್ಷೆ ನಡೆಸಲಿದೆ.
ಇನ್ನೂ ಶಿಕ್ಷಣ ಇಲಾಖೆಯ ಈ ನಿರ್ಧಾರ ಸಾಕಷ್ಟು ಟೀಕೆಗೆ ಗುರಿಯಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಕೈಬಿಟ್ಟಿದ್ದು, ಮಕ್ಕಳ ವೃತ್ತಿಪರ ಪರೀಕ್ಷೆ ಸೇರಿದಂತೆ ಹಲವು ವಿಚಾರಗಳಿಗೆ ಸಮಸ್ಯೆಯಾಗಲಿದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ.
Comments are closed.