ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಉಸಿರುಗಟ್ಟಿಸಿ ಕೊಂದ ದುಷ್ಕರ್ಮಿಗಳು

ಕೋಲಾರ : ಯಾರೂ ಇಲ್ಲದ ವೇಳೆಯಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳನ್ನು ಕೊಲೆಗೈದಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲಿನ ಹೊಸಪಾಳ್ಯದಲ್ಲಿ ನಡೆದಿದೆ.

ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಾಂಕ (18 ವರ್ಷ) ಎಂಬಾಕೆಯೇ ಕೊಲೆಯಾದ ದುರ್ದೈವಿ. ಶ್ರೀನಿವಾಸಪುರ ಮೂಲದ ಯುವತಿಯ ಕುಟುಂಬದವರು ಹೊಸಪಾಳ್ಯ ದಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ನಿನ್ನೆ ಮನೆಯಲ್ಲಿ ಯಾರೂ ಇರಲಿಲ್ಲ. ಯುವತಿ ಮನೆಯಲ್ಲಿ ಅಡ್ಡಾಡಿಕೊಂಡಿರುವುದನ್ನು ನೆರೆ ಹೊರೆಯವರು ನೋಡಿದ್ದಾರೆ. ಆದರೆ ಪಾಲಕರು ಮನೆಗೆ ಬಂದು ನೋಡಿದಾಗ ಯುವತಿ ಮನೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮನೆಗೆ ನುಗ್ಗಿದ ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.

ಕೋಲಾರ ಎಸ್ ಪಿ ಕಾರ್ತಿಕ್ ರೆಡ್ಡಿ, ಎಎಸ್ ಪಿ ಜಾಹ್ನವಿ, ಡಿವೈಎಸ್ ಪಿ ರವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಮುಳಬಾಗಿಲು ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದು, ಕೊಲೆ ಹಿಂದಿನ ರಹಸ್ಯವನ್ನು ಬೇಧಿಸಲು ಹೊರಟಿದ್ದಾರೆ. ಯುವತಿ ಮರಣೋತ್ತರ ಕಾರ್ಯವನ್ನು ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಯುವತಿಯ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

Comments are closed.