ಜೈಪುರ: ಆ ರೈತನ ಮಕ್ಕಳ್ಯಾರು ಐದನೇ ತರಗತಿಯ ಬಳಿಕ ಶಾಲೆಯ ಮುಖವನ್ನೇ ನೋಡಿರಲಿಲ್ಲ. ಆದರೆ ಈಗ ಆ ರೈತನ ಮಕ್ಕಳ ಸಾಧನೆಗೆ ಗ್ರಾಮಕ್ಕೆ ಗ್ರಾಮವೇ ಸಲಾಂ ಹೊಡೆಯುತ್ತಿದೆ.

ಜೈಪುರದ ಹನುಮಾನಘರದ ರೈತರ ಮೂರು ಹೆಣ್ಣು ಮಕ್ಕಳಾದ ಅಂಶು,ರಿತು ಹಾಗೂ ಸುಮನ್ ರಾಜಸ್ಥಾನದ ಆಡಳಿತಾತ್ಮಕ ಸೇವೆ ಪರೀಕ್ಷೆ ಪಾಸಾಗಿದ್ದು, ಸಾಧನೆಗೈಯ್ದಿದ್ದಾರೆ.

ಇದಕ್ಕೂ ಮೊದಲೇ ಈ ಪರೀಕ್ಷೆಯನ್ನು ಇದೇ ರೈತನ ಮಕ್ಕಳಾದ ರೋಮ ಮತ್ತು ಮಂಜು ತೇರ್ಗಡೆಯಾಗಿ ಈಗಾಗಲೇ ಸರ್ಕಾರಿ ಹುದ್ದೆ ಅಲಂಕರಿಸಿದ್ದಾರೆ.

2018 ರಲ್ಲಿ ನಡೆದ ಆರ್ಎಎಸ್ ಪರೀಕ್ಷೆಯ ಜುಲೈ 13 ರಂದು ಪ್ರಕಟವಾಗಿದ್ದು, ಇದರಲ್ಲಿ ರೈತನ ಮಕ್ಕಳ ಸಾಧನೆ ನೋಡಿ ರಾಜಸ್ಥಾನವೇ ಮೂಗನ ಮೇಲೆ ಬೆರಳಿಟ್ಟಿದೆ.

ಈ ಹೆಣ್ಣುಮಕ್ಕಳ ಸಾಧನೆಯ ಇನ್ನೊಂದು ವಿಶೇಷತೆ ಏನೆಂದರೇ ಇವರ್ಯಾರು ಐದನೇ ತರಗತಿಯ ಬಳಿಕ ಶಾಲೆಗೆ ಹೋಗಿಲ್ಲ. ಮನೆಯಲ್ಲೇ ಒಬ್ಬರಿಗೊಬ್ಬರು ಸಹಾಯ ಮಾಡಿ ಖಾಸಗಿಯಾಗಿ ಓದಿಕೊಂಡು ರಾಜಸ್ಥಾನದ ಆಡಳಿತಾತ್ಮಕ ಪರೀಕ್ಷೆಯಲ್ಲಿ ಗೆದ್ದು ಬೀಗಿದ್ದಾರೆ.

ಅಷ್ಟೇ ಅಲ್ಲ ಬಡ ರೈತ ಕುಟುಂಬದಲ್ಲಿ ಐವರು ಹೆಣ್ಣುಮಕ್ಕಳು ಎಂಬ ಕಾರಣಕ್ಕೆ ಮೂಗು ಮುರಿದ ಎಲ್ಲರಿಗೂ ತಮ್ಮ ಸಾಧನೆ ಮೂಲಕ ಖಡಕ್ ಆನ್ಸರ್ ನೀಡಿದ್ದಾರೆ.