ಆಕೆಯ ಕಣ್ತುಂಬ ಕನಸಿತ್ತು. ಒಂದಿಷ್ಟು ಸಿನಿಮಾ, ಅದ್ದೂರಿಯಾದ ಬದುಕು ಹಾಗೂ ನೆಮ್ಮದಿಯ ನಾಳೆ. ಆದರೆ ಅವಕಾಶಗಳ ಕೊರತೆ, ಕಾಡುತ್ತಿದ್ದ ಅಭದ್ರತೆ ಹಾಗೂ ಕೌಟುಂಬಿಕ ಸಮಸ್ಯೆ ಆಕೆಯ ಕನಸುಗಳನ್ನೇ ಕೊಂದುಬಿಟ್ಟಿದ್ದವು. ನಾಳೆಗಳನ್ನು ಎದುರಿಸಲಾಗದೇ ಸೋತಿದ್ದ ಜಯಶ್ರೀ ಕೊನೆಗೂ ಸಾವಿನ ಎದುರು ಸೋತು ಹೋಗಿದ್ದಾಳೆ.

ಆತ್ಮಹತ್ಯೆಗೆ ಶರಣಾದ ಬಿಗ್ ಬಾಸ್ 3 ರ ಸ್ಪರ್ಧಿ ಹಾಗೂ ನಟಿ ಜಯಶ್ರೀ, ಆರ್ಥಿಕ ಮುಗ್ಗಟ್ಟು, ಕೌಟುಂಬಿಕ ಸಮಸ್ಯೆ ಹಾಗೂ ಖಿನ್ನತೆಯಿಂದ ನರಳುತ್ತಿದ್ದಳು. ಹೀಗಾಗಿ ಪರಿಸ್ಥಿತಿ ಎದುರಿಸಲಾಗದೇ ಆಕೆ ಆತ್ಮಹತ್ಯೆಗೆ ಶರಣಾಗಿರಬಹುದು ಎನ್ನಲಾಗುತ್ತಿದೆ.

ತಂದೆಯಿಲ್ಲದ ಜಯಶ್ರೀ ತಾಯಿ ಹಾಗೂ ಅಜ್ಜ-ಅಜ್ಜಿಯೊಂದಿಗೆ ಅವರ ಮನೆಯಲ್ಲೇ ವಾಸವಾಗಿದ್ದಳು. ಆದರೆ ಆಕೆಯ ಅಜ್ಜ-ಅಜ್ಜಿ ಸಾವಿನ ಬಳಿಕ ಆಕೆಯನ್ನು ಸೋದರ ಮಾವ ಗಿರೀಶ್ ಮನೆಯಿಂದ ಹೊರಹಾಕಿದ್ದ ಎನ್ನಲಾಗಿದೆ. ಹೀಗಾಗಿ ತಾಯಿಯೊಂದಿಗೆ ಅತಂತ್ರ ಸ್ಥಿತಿಯಲ್ಲಿದ್ದ ಜಯಶ್ರೀ ಯಲಹಂಕ ನ್ಯೂ ಟೌನ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು.

ಆದರೆ ಅವಕಾಶಗಳಿಲ್ಲದ ಕಾರಣ ಮನೆ ನಿರ್ವಹಣೆಗೂ ಆಕೆಯ ಬಳಿ ದುಡ್ಡಿರಲಿಲ್ಲ. ಹೀಗಾಗಿ 2020 ರ ಜುಲೈನಲ್ಲಿ ಜಯಶ್ರೀ ಖಿನ್ನತೆಗೊಳಗಾದ ಸ್ಥಿತಿಯಲ್ಲಿ ಮಾಧ್ಯಮದ ಎದುರು ಬಂದಿದ್ದು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಳು. ಆಗ ಎಲ್ಲರೂ ಆಕೆಯ ಸ್ಥಿತಿಗೆ ಸ್ಪಂದಿಸಿ ಸಹಾಯಹಸ್ತ ಚಾಚಿದ್ದರು.

ಆದರೆ ಜಯಶ್ರೀ ಸಮಸ್ಯೆಗಳು ಕೊನೆಯಾಗದ ಕಾರಣ ಕಂಗೆಟ್ಟಿದ್ದ ನಟಿ ಅವಕಾಶಕ್ಕಾಗಿ ಹಲವರನ್ನು ಸಂಪರ್ಕಿಸಿದ್ದಳು ಎನ್ನಲಾಗಿದೆ. ಕೊರೋನಾ ಹಾಗೂ ವಿವಿಧ ಕಾರಣಗಳಿಗಾಗಿ ಚಿತ್ರರಂಗದ ಚಟುವಟಿಕೆಗಳು ನಿಂತಿದ್ದರಿಂದ ಜಯಶ್ರೀಗೆ ಅವಕಾಶವಾಗಲಿ, ಆರ್ಥಿಕ ಸಹಾಯವಾಗಲಿ ಸಿಕ್ಕಿರಲಿಲ್ಲ.

ಹೀಗಾಗಿ ತುತ್ತು ಊಟಕ್ಕೂ ತತ್ವಾರದ ಸ್ಥಿತಿ ತಲುಪಿದ್ದ ಜಯಶ್ರೀ ಕೆಲದಿನಗಳಿಂದ ಮಾಗಡಿ ರಸ್ತೆಯ ಸಂಧ್ಯಾಕಿರಣ ಅನಾಥಾಶ್ರಮದಲ್ಲಿ ವಾಸವಾಗಿದ್ದಳು. ಇದೀಗ ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆಯ ಸೋದರಮಾವ ಹೀನಾಯ ಸ್ಥಿತಿಯಲ್ಲಿ ಆಕೆಯನ್ನು ಮತ್ತು ಆಕೆಯ ತಾಯಿಯನ್ನು ಮನೆಯಿಂದ ಹೊರಹಾಕಿದ್ದು, ಕಿರುಕುಳ ನೀಡುತ್ತಿದ್ದ ಎಂಬ ಸಂಗತಿಯನ್ನು ಜಯಶ್ರೀ ಹಲವು ಭಾರಿ ಹೇಳಿಕೊಂಡಿದ್ದರು.

ಆದರೆ ಸ್ಯಾಂಡಲ್ ವುಡ್ ನ ನಟಿಮಣಿಯೊಬ್ಬಳು ಹೀಗೊಂದು ದುರಂತ ಅಂತ್ಯಕಂಡಿದ್ದು ದಿಗ್ಬ್ರಮೆ ಮೂಡಿಸಿದ್ದು, ನಟ ಕಿಚ್ಚ ಸುದೀಪ್ ಸೇರಿದಂತೆ ಹಲವು ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.