ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಗೆ ಸೆಮಿಲಾಕ್ ಡೌನ್ ಜಾರಿಯಾಗಿದ್ದು, ಜನರು ಮನೆಯಿಂದ ಹೊರಬರುವಂತಿಲ್ಲ ಎಂದು ಸರ್ಕಾರ ಆದೇಶಿಸಿದೆ. ಈ ಮಧ್ಯೆ ಲಾಕ್ ಡೌನ್ ನಿಂದ ಚಿತ್ರೋದ್ಯಮ ಸಂಕಷ್ಟಕ್ಕೆ ಸಿಲುಕಿದ್ದು, ಚಿತ್ರೋದ್ಯಮದ ದಿನಗೂಲಿ ನೌಕರರು ಕಂಗಾಲಾಗಿದ್ದಾರೆ. ಈಗ ಈ ಕಾರ್ಮಿಕರ ನೆರವಿಗೆ ರಿಯಲ್ ಸ್ಟಾರ್ ಉಪೇಂದ್ರ ಧಾವಿಸಿದ್ದಾರೆ.

ಎಲ್ಲ ರಂಗಗಳಂತೆ ಸ್ಯಾಂಡಲ್ ವುಡ್ ನಲ್ಲೂ ಇಂದು ದುಡಿದರೇ ನಾಳೆ ಊಟ ಎನ್ನುವ ಕೂಲಿ ಕಾರ್ಮಿಕರಿದ್ದಾರೆ. ಆದರೆ ಲಾಕ್ ಡೌನ್ ನಿಂದ ಸೀರಿಯಲ್ ,ರಿಯಾಲಿಟಿ ಶೋ ಶೂಟಿಂಗ್ ಸ್ಥಗಿತಗೊಂಡಿದೆ. ಹೀಗಾಗಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಈ ಸಂಕಷ್ಟಕ್ಕಿಡಾದ ಕಾರ್ಮಿಕರ ಸಹಾಯಕ್ಕೆ ಧಾವಿಸಿರುವ ರಿಯಲ್ ಸ್ಟಾರ್ ಉಪೇಂದ್ರ 3 ಸಾವಿರ ಕಾರ್ಮಿಕರ ಕುಟುಂಬಗಳಿಗೆ ದಿನಸಿ ಕಿಟ್ ನೀಡಲು ಮುಂದಾಗಿದ್ದಾರೆ. ಈ ವಿಚಾರವನ್ನು ಸ್ವತಃ ರಿಯಲ್ ಸ್ಟಾರ್ ಉಪೇಂದ್ರ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಕನ್ನಡ ಚಲನಚಿತ್ರ ರಂಗದ ಸಾವಿರಾರು ಕಾರ್ಮಿಕರು ಕಲಾವಿದರು ಕೆಲಸವಿಲ್ಲದೇ, ಕೊವೀಡ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಈ ಕಾರಣ ಒಕ್ಕೂಟದ ಎಲ್ಲಾ ಸಂಘಗಳ ಸುಮಾರು 3 ಸಾವಿರ ಕುಟುಂಬಕ್ಕೆ ಅಭಿಮಾನಿಗಳ ಆಶೀರ್ವಾದದಿಂದ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದೇನೆ. ವಿತರಣೆ ಬಗ್ಗೆ ಹೆಚ್ಚಿನ ಮಾಹಿತಿಗೆ ತಮ್ಮ ಸಂಘದ ಮುಖ್ಯಸ್ಥರನ್ನು ಸಂಪರ್ಕಿಸಿ ಎಂದು ಉಪೇಂದ್ರ ಹೇಳಿದ್ದಾರೆ.
ಇದಲ್ಲದೇ ಉಪೇಂದ್ರ ಅವರ ಈ ಒಳ್ಳೆ ಕಾರ್ಯ ಬೆಂಬಲಿಸಿ ಎಸ್.ಕೆ.ಸ್ಟಿಲ್ಸ್ ಕಂಪನಿ ಉಪೇಂದ್ರ ಅವರಿಗೆ 5 ಲಕ್ಷ ರೂಪಾಯಿ ದೇಣಿಗೆ ನೀಡಿದ್ದು, ಆ ಹಣವನ್ನು ಸಂಕಷ್ಟದಲ್ಲಿರುವ ಕಾರ್ಮಿಕರ ಕುಟುಂಬದ ಸಹಾಯಕ್ಕೆ ಬಳಸಲಾಗುವುದು ಎಂದು ಉಪೇಂದ್ರ ಹೇಳಿದ್ದಾರೆ. ಇದಲ್ಲದೇ ಹಲವು ಸಂಘ ಸಂಸ್ಥೆಗಳು,ನಟ,ನಿರ್ಮಾಪಕರ,ನಿರ್ದೇಶಕರು ಉಪೇಂದ್ರ ಜೊತೆ ಕೈಜೋಡಿಸಿದ್ದಾರೆ.

ಈಗಾಗಲೇ ಸ್ಯಾಂಡಲ್ ವುಡ್ ನಟ ಸುದೀಪ್ ಚಾಮರಾಜನಗರದ ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ನೆರವಾಗಿದ್ದು,ನಗರದಲ್ಲಿ ರೋಗಿಗಳಿಗೆ ಅಗತ್ಯ ಆಕ್ಸಿಜನ್ ಒದಗಿಸಿದ್ದಾರೆ. ಇನ್ನು ರೋರಿಂಗ್ ಸ್ಟಾರ್ ಮುರುಳಿ ಐದು ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಊಟ ನೀಡುತ್ತಿದ್ದಾರೆ.
