ಮಂಗಳವಾರ, ಏಪ್ರಿಲ್ 29, 2025
HomeBreaking"ನನ್ನ ಮಕ್ಕಳನ್ನ ಶಾಲೆಗೆ ಕಳಿಸಲ್ಲ, ಶಿಕ್ಷಣಕ್ಕಿಂತ ಆರೋಗ್ಯ ಮುಖ್ಯ" ಸರಕಾರದ ವಿರುದ್ದ ಸಿಡಿದೆದ್ದ ಪೋಷಕರು

“ನನ್ನ ಮಕ್ಕಳನ್ನ ಶಾಲೆಗೆ ಕಳಿಸಲ್ಲ, ಶಿಕ್ಷಣಕ್ಕಿಂತ ಆರೋಗ್ಯ ಮುಖ್ಯ” ಸರಕಾರದ ವಿರುದ್ದ ಸಿಡಿದೆದ್ದ ಪೋಷಕರು

- Advertisement -

ಬೆಂಗಳೂರು : ರಾಜ್ಯ ಸರಕಾರ ಕೊರೊನಾ ಸೋಂಕು ಹರಡುತ್ತಿರುವ ಬೆನ್ನಲ್ಲೇ ಶಾಲೆಗಳನ್ನು ಆರಂಭಿಸಲು ಆದೇಶ ಹೊರಡಿಸಿದೆ. ರಾಜ್ಯ ಸರಕಾರದ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪೋಷಕರು ಸಹಿ ಸಂಗ್ರಹ ಅಭಿಯಾನ ಜೊತೆಗೆ ಆಲ್ ಲೈನ್ ಅಭಿಯಾನವನ್ನು ಕೈಗೊಂಡಿದ್ದಾರೆ. ಪೋಷಕರ ಅಭಿಯಾನಕ್ಕೀಗ ಬಾರೀ ಬೆಂಬಲ ವ್ಯಕ್ತವಾಗಿದೆ.

ಜೂನ್ 5ರಿಂದಲೇ ಶಾಲೆಗಳನ್ನು ಪುನರಾರಂಭ ಮಾಡುವ ಕುರಿತು ಶಿಕ್ಷಣ ಇಲಾಖೆ ಈಗಾಗಲೇ ಆದೇಶ ಹೊರಡಿಸಿದ್ದು, ಜೂನ್ 8ರಿಂದ ದಾಖಲಾತಿ ಮಾಡಿಕೊಳ್ಳುವಂತೆ ಸೂಚನೆಯನ್ನು ನೀಡಿದೆ. ಅಲ್ಲದೇ ಜೂನ್ 1ರಿಂದಲೇ ಶಾಲೆಗಳನ್ನು ಹಂತ ಹಂತವಾಗಿ ಆರಂಭಿಸಲು ಮುಂದಾಗಿದೆ. ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದರಿಂದ ಕೊರೊನಾ ಸೋಂಕು ಮಕ್ಕಳಿಗೆ ವ್ಯಾಪಿಸುತ್ತೆ ಅನ್ನೋ ಆತಂಕ ಪೋಷಕರದ್ದು. ಕೊರೊನಾ ಸೋಂಕು ಹರಡುವ ಆತಂಕದಿಂದ ಸರಕಾರಗಳು 10 ವರ್ಷದೊಳಗಿನ ಮಕ್ಕಳನ್ನು ಮನೆಯಿಂದ ಹೊರಗೆ ಬರಬಾರದು ಅಂತಾ ಆದೇಶ ಹೊರಡಿಸಿವೆ. ಆದ್ರೀಗ ಮಕ್ಕಳನ್ನು ಶಾಲೆಗೆ ಕರೆತರಲು ಮುಂದಾಗಿದೆ. ಇದೇ ಕಾರಣಕ್ಕೆ ರಾಜ್ಯ ಸರಕಾರದ ಕ್ರಮಕ್ಕೆ ರಾಜ್ಯದಾದ್ಯಂತ ಬಾರೀ ಆಕ್ರೋಶಕ್ಕೆ ಕಾರಣವಾಗಿದೆ. ಶಿಕ್ಷಣ ಇಲಾಖೆ ಶಾಲೆಗಳ ಆರಂಭಕ್ಕೆ ಚಾಲನೆ ನೀಡುತ್ತಿದ್ದಂತೆಯೇ ಪೋಷಕರು ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಶಾಲೆಗೆ ಕಳುಹಿಸುವುದಿಲ್ಲಾ ಅನ್ನೋ ಅಭಿಯಾನವನ್ನು ಕೈಗೊಂಡಿದ್ದಾರೆ.

ಬೆಂಗಳೂರಿನಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ವಿರೋಧಿಸುತ್ತಿದ್ದಾರೆ. ದಿನಂಪ್ರತಿ 300ಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವ ಸರಕಾರದ ನಿರ್ಧಾರ ಸರಿಯಲ್ಲ. ಜುಲೈನಲ್ಲಿ ಶಾಲೆಗಳನ್ನು ತೆರೆಯುವ ಮೂಲಕ ಬೆಂಕಿಯೊಂದಿಗೆ ಸರಸವಾಡೋದಕ್ಕೆ ಹೊರಟಿದೆ. ಹೀಗಾಗಿ ಪೋಷಕರು ಈಗಾಗಲೇ ಸಹಿ ಸಂಗ್ರಹ ಅಭಿಯಾನವನ್ನು ಕೈಗೊಂಡಿದ್ದಾರೆ. ಕೇವಲ 2 ದಿನಗಳ ಅವಧಿಯಲ್ಲಿ ಬರೋಬ್ಬರಿ 5ಲಕ್ಷಕ್ಕೂ ಅಧಿಕ ಪೋಷಕರು ರಾಜ್ಯ ಸರಕಾರ ಕ್ರಮದ ವಿರುದ್ದ ಸಹಿಸಂಗ್ರಹಿಸಲಾಗಿದೆ. ಶಾಲೆಗಳಲ್ಲಿ ಪಾಠ ಮಾಡುವ ಬದಲು ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡುವಂತೆ ಆಗ್ರಹಿಸಿದ್ದಾರೆ.

ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿಯೂ ಅಭಿಮಾನ ಶುರುವಾಗಿದೆ. ನನ್ನ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ. ನನಗೆ ನನ್ನ ಮಕ್ಕಳ ಶಿಕ್ಷಣಕ್ಕಿಂತ ಆರೋಗ್ಯ ಮುಖ್ಯ ಅನ್ನುವ ಪೋಸ್ಟರ್ ಬಳಸಿ ಅಭಿಯಾನವನ್ನು ಕೈಗೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಮಂದಿ ಪೋಸ್ಟ್ ಮಾಡಿ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಶಾಲೆಗಳನ್ನು ಆರಂಭಿಸುವುದಾದರೂ ಅಕ್ಟೋಬರ್ ನಂತರದಲ್ಲಿ ಕರೊನಾ ಸ್ಥಿತಿಯನ್ನ ನೋಡಿಕೊಂಡು ಆರಂಭಿಸುವಂತೆ ಸಲಹೆ ನೀಡಿದ್ದಾರೆ. ರಾಜ್ಯ ಸರಕಾರ ಸಾಕಷ್ಟು ಸಲಹೆಗಳನ್ನು ನೀಡಿರುವ ಪೋಷಕರು ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಬೇಡಿ ಎಂಬ ಖಡಕ್ ಸಂದೇಶವನ್ನೂ ರವಾನಿಸಿದ್ದಾರೆ.

ಕೆಲವು ಪೋಷಕರು ಕೊರೊನಾ ಸೋಂಕು ಶೂನ್ಯವಾಗುವವರೆಗೆ ಶಾಲೆಗಳನ್ನು ಆರಂಭಿಸುವುದು ಬೇಡಾ ಎನ್ನುತ್ತಿದ್ರೆ, ಇನ್ನೂ ಹಲವರು ಕೊರೊನಾ ಸೋಂಕಿಗೆ ಲಸಿಕೆ ಸಿದ್ದವಾಗುವವರೆಗೂ ಶಾಲಾ ಕಾಲೇಜುಗಳನ್ನು ಆರಂಭಿಸುವುದು ಬೇಡಾ ಎಂದಿದ್ದಾರೆ. ಒಟ್ಟಿನಲ್ಲಿ ರಾಜ್ಯ ಸರಕಾರದ ಆತುರದ ನಿರ್ಧಾರ ಇದೀಗ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದಾದ್ರೂ ಮಗುವಿಗೆ ಸೋಂಕು ಕಾಣಿಸಿಕೊಂಡ್ರೆ ಇಡೀ ಶಾಲೆಯನ್ನೇ ಸೀಲ್ ಡೌನ್ ಮಾಡಬೇಕಾಗುತ್ತೆ. ಅಲ್ಲದೇ ಶಾಲೆ ಸೀಲ್ ಡೌನ್ ಆದ್ರೆ ಕನಿಷ್ಠ 1000 ಮಂದಿಯನ್ನಾದ್ರೂ ಕ್ವಾರಂಟೈನ್ ನಲ್ಲಿ ಇರಿಸಬೇಕಾಗುತ್ತದೆ. ಇಷ್ಟು ಕನಿಷ್ಠ ಜ್ಞಾನವೂ ಸಚಿವರಿಗೆ ಇಲ್ಲವೇ ಅನ್ನೋದು ಪೋಷಕರ ಪ್ರಶ್ನೆ. ರಾಜ್ಯ ಸರಕಾರ ಪೋಷಕರ ವಿರೋಧಕ್ಕೂ ಜಗ್ಗದೇ ಶಾಲೆಗಳನ್ನು ಆರಂಭಿಸಿದ್ರೆ ಯಾವುದೇ ಕಾರಣಕ್ಕೂ ಮಕ್ಕಳನ್ನೂ ನಾವು ಶಾಲೆಗ ಕಳುಹಿಸುವುದೇ ಇಲ್ಲಾ ಎಂದಿದ್ದಾರೆ. ಇನ್ನಾದ್ರೂ ರಾಜ್ಯ ಸರಕಾರ ಹಾಗೂ ಶಿಕ್ಷಣ ಸಚಿವರು ಮಕ್ಕಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುವುದನ್ನು ಬಿಟ್ಟು. ಮಕ್ಕಳನ್ನು ಕೊರೊನಾ ಮಹಾಮಾರಿಯಿಂದ ಕಾಪಾಡುವ ಕಾರ್ಯವನ್ನು ಮಾಡಬೇಕಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular