ಶಬರಿಮಲೆಯಲ್ಲಿ ಮಂಡಲ ಪೂಜಾ ಮಹೋತ್ಸವ : ಇಂದಿನಿಂದಲೇ ಭಕ್ತರಿಗೆ ಅಯ್ಯಪ್ಪನ ದರ್ಶನ

ಶಬರಿಮಲೆ : ಧರ್ಮಶಾಶ್ತ ಅಯ್ಯಪ್ಪ ಸನ್ನಿಧಾನದಲ್ಲಿ ಮಂಡಲ ಮಹೋತ್ಸವಕ್ಕಾಗಿ ಭಾನುವಾರ ಬಾಗಿಲು ತೆರೆಯಲಾಗಿದೆ. ಸೋಮವಾರದಿಂದ ಕೊರೊನಾ ಮಾನದಂಡಗಳನ್ನು ಪಾಲಿಸಿಕೊಂಡು ಅಯ್ಯಪ್ಪ ಭಕ್ತರಿಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ಕ್ಷೇತ್ರದ ತಂತ್ರಿ ಕಂಠರರ್‌ ರಾಜೀವ್‌ ಉಪಸ್ಥಿತಿಯಲ್ಲಿ ಶಬರಿಮಲೆ ಪ್ರಧಾನ ಅರ್ಚಕ ಎ.ಕೆ.ಸುಧೀರ್‌ ನಂಬೂದಿರಿ ಗರ್ಭಗುಡಿ ಬಾಗಿಲು ತೆರೆದು ದೀಪ ಬೆಳಗಿಸಲಾಗಿದೆ. ವರ್ಚುವಲ್‌ ಕ್ಯೂ ಪ್ರಕಾರ ನೋಂದಾಯಿಸಿದ ಭಕ್ತರಿಗೆ ಇಂದಿನಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೊಸತಾಗಿ ನಿಯುಕ್ತರಾಗಿರುವ ಪ್ರಧಾನ ಅರ್ಚಕ ವಿ.ಕೆ.ಜಯರಾಜ್‌, ಮಾಳಿಗಪುರದ ಮುಖ್ಯಅರ್ಚಕ ಎಂ.ಎನ್‌.ರಾಜಿಕುಮಾರ್‌ ಸನ್ನಿಧಾನದಲ್ಲಿ ಪೂಜೆ ನಿರ್ವಹಿಸಿದರು.

ಶಬರಿಮಲೆಗೆ ಆಗಮಿಸುವ ಭಕ್ತರು ವರ್ಚುವಲ್‌ ಕ್ಯೂ ಪ್ರಕಾರ ದರ್ಶನಕ್ಕಾಗಿ ಆಗಮಿಸುವ 24 ಗಂಟೆಗಳ ಮೊದಲು ಪಡೆದ ಕೊರೊನಾ ನೆಗೆಟಿವ್‌ ಸರ್ಟಿಫಿಕೆಟ್‌ ಕಡ್ಡಾಯ ಇಟ್ಟುಕ್ಳೊಬೇಕು. ಇಲ್ಲದವರಿಗೆ ನಿಲಯಕ್ಕಲ್‌ನಲ್ಲಿ ಆ್ಯಂಟಿಜನ್‌ ಟೆಸ್ಟ್‌ ನಡೆಸಲಾಗುತ್ತದೆ. ಪಾಸಿಟಿವ್‌ ಆಗಿ ಕಂಡು ಬಂದರೆ ಅವರನ್ನು ರಾಣಿಯ ಸಿಎಫ್‌ಎಲ್‌ಟಿಸಿಗೆ ಕೊಂಡೊಯ್ಯಲಾಗುವುದು. ಸಣ್ಣ ವಾಹನಗಳನ್ನು ಪಂಪಾಕ್ಕೆ ಬಿಡುವುದಾದರೂ ತ್ರಿವೇಣಿಯಲ್ಲಿಇಳಿಸಿ ನಿಲಯಕ್ಕಲ್‌ನಲ್ಲಿ ವಾಹನ ಪಾರ್ಕಿಂಗ್‌ ಮಾಡಬೇಕು.

ಈಗಾಗಲೇ ಶಬರಿಮಲೆ ದರ್ಶನಕ್ಕಾಗಿ ಆರೋಗ್ಯ ಇಲಾಖೆ ಒಂಭತ್ತು ಮಾರ್ಗನಿರ್ದೇಶಗಳನ್ನು ಹೊರಡಿಸಿದೆ. ಕೊರೊನಾ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶಾರೀರಿಕ ಅಂತರ ಪಾಲಿಸಬೇಕು, ಮಾಸ್ಕ್‌ ಧರಿಸಬೇಕು, ಕೆಮ್ಮು, ಕೊರೊನಾ ಬಾಧಿಸಿದವರು, ಜ್ವರ ಇದ್ದವರು ಪ್ರವೇಶಿಸಕೂಡದು.

ಭಕ್ತರು, ಕೊರೊನಾ ನೆಗೆಟಿವ್ ಸರ್ಟಿಫಿಕೆಟ್‌ ಹೊಂದಿರಬೇಕು, ಪ್ರತೀ ಅರ್ಧಗಂಟೆಗೊಮ್ಮೆ ಕೈಗೊಳ್ಳನ್ನು ಸ್ವಚ್ಚಗೊಳಿಸಬೇಕು. ಪಂಪಾ, ನಿಲಯಕ್ಕಲ್‌ ಮುಂತಾದ ಸ್ಥಳಗಳಲ್ಲಿ ಭಕ್ತರ ವಾಸ್ತವ್ಯಕ್ಕೆ ಅವಕಾಶವಿಲ್ಲ ಮುಂತಾದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಲಾಗಿದೆ.

Comments are closed.