ಮಂಗಳೂರು : ಕಾಂಗ್ರೆಸ್ ಶಾಸಕ ತನ್ವೀರ್ ಶೇಠ್ ಹತ್ಯೆಗೆ ಯತ್ನ ನಡೆದ ಬೆನ್ನಲ್ಲೇ ಇದೀಗ ಕರಾವಳಿಯಲ್ಲಿ ಮತ್ತೋರ್ವ ಶಾಸಕರೊಬ್ಬರನ್ನು ಹತ್ಯೆಗೆ ಸ್ಕೆಚ್ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಅವರನ್ನ ಹತ್ಯೆ ಸ್ಕೆಚ್ ಹಾಕಲಾಗಿದೆಯಾ ಅನ್ನೋ ಅನುಮಾನ ವ್ಯಕ್ತವಾಗುತ್ತಿದೆ. ಶಾಸಕ ಯು.ಟಿ.ಖಾದರ್ ಸಂಚರಿಸುತ್ತಿದ್ದ ಕಾರನ್ನು ಸುಮಾರು 10 ಕಿ.ಮೀ ವರೆಗೂ ಅಪರಿಚಿತರು ಬೈಕಿನಲ್ಲಿ ಫಾಲೋ ಮಾಡಿದ್ದಾರೆ.
ಮಂಗಳೂರಿನ ದೇರಳಕಟ್ಟೆಯಿಂದ ಹೊರಟ್ಟಿದ್ದ ಯು.ಟಿ.ಖಾದರ್ ಅವರ ಕಾರು ನಗರದ ನಂತೂರು ಸರ್ಕಲ್ ಬಳಿಗೆ ಬರುವರೆಗೂ ಬೈಕ್ನಲ್ಲಿ ಅಪರಿಚಿತರು ಹಿಂಬಾಲಿಸಿದ್ದಾರೆ. ಇದರಿಂದ ಅನುಮಾನಗೊಂಡ ಖಾದರ್, ಕೂಡಲೇ ಎಸ್ಕಾರ್ಟ್ ವಾಹನದ ಪೊಲೀಸರಿಗೆ ತಿಳಿಸಿದ್ದಾರೆ.
ನಂತೂರು ಸರ್ಕಲ್ ಬಳಿಗೆ ಬರುತ್ತಿದ್ದಂತೆಯೇ ಪೊಲೀಸರು ವಾಹನ ನಿಲ್ಲಿಸಿ ಬೈಕ್ ಹಿಡಿಯಲು ಓಡಿ ಹೋಗಿದ್ದಾರೆ. ಆದ್ರೆ, ತಕ್ಷಣ ಎಚ್ಚೆತ್ತ ಅಪರಿಚಿತರು ಬೈಕ್ ನೊಂದಿಗೆ ಪರಾರಿಯಾಗಿದ್ದಾರೆ. ಶಾಸಕ ಯು.ಟಿ.ಖಾದರ್ ಎಸ್ಕಾರ್ಟ್ ವಾಹನದ ಎಎಸ್ಸೈ ಸುಧೀರ್ ಮಾಹಿತಿಯಂತೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಪೊಲೀಸರಿಂದ ತನಿಖೆ ಚುರುಕುಗೊಳಿಸಿದ್ದಾರೆ.