ಚುನಾವಣೆಗೆ ಸಜ್ಜಾಗುತ್ತಿರುವ ಸ್ಟಾರ್ ನಟ…! ಪಕ್ಷದ ಪದಾಧಿಕಾರಿಗಳ ಜೊತೆ ಭರ್ಜರಿ ಸಭೆ…!

ತಮಿಳುನಾಡು: ಇತ್ತೀಚಿಗಷ್ಟೇ ಸೂಪರ್ ಸ್ಟಾರ್ ರಜನಿಕಾಂತ್ 2021 ರ ವಿಧಾನಸಭಾ ಚುನಾವಣೆಯಿಂದ ದೂರ ಉಳಿಯುವ ನಿರ್ಣಯ ಪ್ರಕಟಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಆದರೆ ತಮಿಳುನಾಡಿ ಸ್ಟಾರ್ ನಟ ಹಾಗೂ ಬಹುಭಾಷಾ ತಾರೆ ಕಮಲ್ ಹಾಸನ್ ಮಾತ್ರ ಈಗಲೇ 2021 ರ ವಿಧಾನಸಭಾ ಚುನಾವಣಾ ಸಿದ್ಧತೆ ಆರಂಭಿಸಿದ್ದಾರೆ.

ನಟನೆಯಿಂದ ರಾಜಕಾರಣಕ್ಕೆ ಧುಮುಕಿ ರಾಜಕೀಯ ಪಕ್ಷ ಸ್ಥಾಪಿಸಿರುವ ಕಮಲ್ ಹಾಸನ್, 2021 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಸಕಲ ಸಿದ್ಧತೆ ಆರಂಭಿಸಿದ್ದು, ಪಕ್ಷದ ವಿವಿಧ ಜಿಲ್ಲೆಗಳ ಕಾರ್ಯದರ್ಶಿಗಳ ಜೊತೆ ಸಭೆ ನಡೆಸಿದ್ದಾರೆ. ಕಮಲ್ ಹಾಸನ್ ಅವರ, ಮಕ್ಕಳ್ ನೀದಿ ಮಯ್ಯಂ ಪಕ್ಷದ ವಿವಿಧ ಜಿಲ್ಲಾ ಕಾರ್ಯದರ್ಶಿಗಳು ಕಮಲ್ ಹಾಸನ್ ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದು, ಚುನಾವಣೆ ಸಿದ್ಧತೆ, ಪ್ರಚಾರದ ಕುರಿತು ರೂಪುರೇಷೆ ಸಿದ್ಧಗೊಳಿಸಲಾಗಿದೆ.

ರಾಜ್ಯದಾದ್ಯಂತ ಪ್ರವಾಸ ನಡೆಸಿ, ಪಕ್ಷದತ್ತ ಜನರನ್ನು ಸೆಳೆಯುವ ಉದ್ದೇಶದಿಂಧ ಕಮಲ್ ಹಾಸನ್ ಪೂರ್ವಭಾವಿ ಸಿದ್ಧತೆ ಆರಂಭಿಸಿದ್ದು, ಕಾರ್ಯದರ್ಶಿಗಳ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಬೂತ್ ಮಟ್ಟದಿಂದ ಕಾರ್ಯಕರ್ತರು ಹಾಗೂ ಮತದಾರರನ್ನು ಸೆಳೆಯಲು ಕಾರ್ಯಕ್ರಮ ರೂಪಿಸಿ ಚಟುವಟಿಕೆಯಿಂದ ಕೆಲಸ ಮಾಡುವಂತೆ ಕಾರ್ಯದರ್ಶಿಗಳಿಗೆ ಕಮಲ್ ಹಾಸನ್ ಸೂಚಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಕಮಲ್ ಹಾಸನ್ ಪಕ್ಷದ ಬೆಳವಣಿಗೆ ಹಾಗೂ ಸಿದ್ಧಾಂತ ರೂಪಿಸಲು  ಅಧ್ಯಯನ ನಡೆಸಿದ್ದು, ಕೇರಳದ ಸಿಎಂ ಪಿಣರಾಯಿ ವಿಜಯನ್, ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಓಡಿಸ್ಸಾ ಸಿಎಂ ನವೀನ್ ಪಟ್ನಾಯಕ್ ಜೊತೆಗೂ ಕಮಲಹಾಸನ್ ಚರ್ಚೆ ನಡೆಸಿದ್ದಾರೆ.

2018 ರಲ್ಲಿ ತಾವು ರಾಜಕೀಯಕ್ಕೆ ಪ್ರವೇಶಿಸಲು ಇಚ್ಛಿಸುವುದಾಗಿ ಘೋಷಿಸಿ ಪಕ್ಷದ ಸ್ಥಾಪಿಸಿದ ಕಮಲ್ ಹಾಸನ್, 2019 ರ ಜನರಲ್ ಚುನಾವಣೆಯಲ್ಲಿ 39 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 1 ಕ್ಷೇತ್ರದಲ್ಲಿ ಜಯ ಸಾಧಿಸಿದ್ದರು.  ಆಗಾಗ ಎಐಎಡಿಎಂಕೆ ಹಾಗೂ ಮೋದಿ ವಿರುದ್ಧ ಟೀಕೆ ಮಾಡುವ ಮೂಲಕ ರಾಜಕೀಯ ಮನೋಭಾವ ಪ್ರದರ್ಶಿಸುವ ಕಮಲ್ ಹಾಸನ್ ತಮ್ಮ ಪಕ್ಷ ಎಡ ಹಾಗೂ ದ್ರಾವಿಡಿಯನ್ ಚಳುವಳಿ ಸಿದ್ಧಾಂತಕ್ಕೆ ಹತ್ತಿರವಾಗಿದ್ದು ಎಂದು ಹೇಳಿಕೊಂಡಿದ್ದಾರೆ.

Comments are closed.