‘ಬಾಸ್’ ಸಿನಿಮಾ ಬಿಡುಗಡೆಗೆ ಕೋರ್ಟ್ ಗ್ರೀನ್ ಸಿಗ್ನಲ್: ಇಂದು ಸಂಜೆಯಿಂದಲೇ ಥಿಯೇಟರ್ಗಳಲ್ಲಿ ಪ್ರದರ್ಶನ ಆರಂಭ!
ಸ್ಯಾಂಡಲ್ವುಡ್ನಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ‘ಬಾಸ್’ (Boss) ಚಿತ್ರದ ಬಿಡುಗಡೆಗೆ ಇದ್ದ ಕೊನೆಯ ಅಡೆತಡೆಯೂ ನಿವಾರಣೆಯಾಗಿದೆ. ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಚಿತ್ರ ಬಿಡುಗಡೆ ತಡೆ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ಸ್ಯಾಂಡಲ್ವುಡ್ನಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ‘ಬಾಸ್’ (Boss) ಚಿತ್ರದ ಬಿಡುಗಡೆಗೆ ಇದ್ದ ಕೊನೆಯ ಅಡೆತಡೆಯೂ ನಿವಾರಣೆಯಾಗಿದೆ. ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಚಿತ್ರ ಬಿಡುಗಡೆ ತಡೆ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಈ ಮಹತ್ವದ ತೀರ್ಪು ಹೊರಬೀಳುತ್ತಿದ್ದಂತೆಯೇ ಚಿತ್ರತಂಡ ತುರ್ತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಇಂದೇ (ಜುಲೈ 17) ರಾಜ್ಯದಾದ್ಯಂತ ಸಿನಿಮಾ ತೆರೆಕಾಣಲಿದೆ ಎಂದು ಅಧಿಕೃತವಾಗಿ ಪ್ರಕಟಿಸಿದೆ.
ಕಳೆದ ಒಂದೂವರೆ ತಿಂಗಳಿನಿಂದ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಡೆಸುತ್ತಿದ್ದ ಕಾನೂನು ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಹೈಕೋರ್ಟ್ ಆದೇಶದ ಬೆನ್ನಲ್ಲೇ ಇಂದು ಸಂಜೆಯಿಂದಲೇ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನಗಳು ಆರಂಭವಾಗಲಿವೆ.
ನಿರ್ಮಾಪಕ ಹಾಗೂ ನಾಯಕ ನಟ ತನುಷ್ ಶಿವಣ್ಣ ಹೇಳಿಕೆ: “ನಮ್ಮ ಚಿತ್ರದ ಮೇಲೆ ನಂಬಿಕೆ ಇಟ್ಟು ಬೆಂಬಲಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ನ್ಯಾಯದ ಗೆಲುವಿನೊಂದಿಗೆ ‘ಬಾಸ್’ ಇಂದು ಪ್ರೇಕ್ಷಕರ ಮುಂದೆ ಬರುತ್ತಿದೆ. ಪ್ರೇಕ್ಷಕರು ಚಿತ್ರವನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ವಿಶ್ವಾಸ ನಮಗಿದೆ.” ನಿರ್ದೇಶಕ ಲವಾ ವಿ ಸಂತೋಷ್ ಕೂಡ ಕೋರ್ಟ್ ಆದೇಶಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ದರ್ಶನ್ ದಂಪತಿ ಕೋರ್ಟ್ ಮೆಟ್ಟಿಲೇರಿದ್ದು ಏಕೆ?
‘ಬಾಸ್’ ಸಿನಿಮಾವು ಸ್ಯಾಂಡಲ್ವುಡ್ನ ನಟ ದರ್ಶನ್ ಮತ್ತು ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಸುತ್ತ ಹೆಣೆಯಲಾದ ಕಥೆಯನ್ನು ಹೊಂದಿದೆ, ಹಾಗಾಗಿ ಈ ಚಿತ್ರಕ್ಕೆ ತಡೆ ನೀಡಬೇಕು ಎಂದು ದರ್ಶನ್ ಹಾಗೂ ವಿಜಯಲಕ್ಷ್ಮಿ ನ್ಯಾಯಾಲಯದ ಮೊರೆ ಹೋಗಿದ್ದರು.
ಆದರೆ ಈ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದ ಚಿತ್ರತಂಡ, “ಇದು ಯಾರದ್ದೋ ಜೀವನದ ಕಥೆಯಲ್ಲ, ಇದೊಂದು ಸಂಪೂರ್ಣ ಕಾಲ್ಪನಿಕ ಕಥೆ” ಎಂದು ಕೋರ್ಟ್ನಲ್ಲಿ ವಾದ ಮಂಡಿಸಿತ್ತು. ಕೊನೆಗೆ ನ್ಯಾಯಾಲಯವು ಚಿತ್ರತಂಡದ ವಾದವನ್ನು ಪುರಸ್ಕರಿಸಿದೆ.
ಟ್ರೈಲರ್ನಲ್ಲಿ ಏನಿತ್ತು? ವಿವಾದಕ್ಕೆ ಕಾರಣವಾದ ಅಂಶಗಳು:
ಕೆಲ ತಿಂಗಳ ಹಿಂದೆ ಬಿಡುಗಡೆಯಾಗಿದ್ದ ‘ಬಾಸ್’ ಚಿತ್ರದ ಟ್ರೈಲರ್ ಭಾರೀ ಸಂಚಲನ ಸೃಷ್ಟಿಸಿತ್ತು. ಅದನ್ನು ನೋಡಿದ ಪ್ರತಿಯೊಬ್ಬರೂ ಇದು ರೇಣುಕಾ ಸ್ವಾಮಿ ಮರ್ಡರ್ ಕೇಸ್ ಆಧಾರಿತ ಸಿನಿಮಾ ಎಂದೇ ಅಭಿಪ್ರಾಯಪಟ್ಟಿದ್ದರು. ಟ್ರೈಲರ್ನಲ್ಲಿ ಅದಕ್ಕೆ ಪೂರಕವಾದ ಹಲವು ಅಂಶಗಳಿದ್ದವು:
- ಒಬ್ಬ ಸ್ಟಾರ್ ನಟ, ಆತನ ಪತ್ನಿ ಮತ್ತು ಅಕ್ರಮ ಸಂಬಂಧದ ಎಳೆ.
- ಗಾಡಿಗಳ ಶೆಡ್, ಲಾರಿಯ ಮುಂದೆ ಕೈಮುಗಿದು ಜೀವಭಿಕ್ಷೆ ಬೇಡುವ ವ್ಯಕ್ತಿ ಹಾಗೂ ಬರ್ಬರ ಕೊಲೆ.
- ಮೃತದೇಹವನ್ನು ಮೋರಿಗೆ ಎಸೆಯುವ ದೃಶ್ಯ.
- ಕೊಲೆಯನ್ನು ಮುಚ್ಚಿಡಲು ಹಣ ಪಡೆದು ಶರಣಾಗುವ ಯುವಕರ ಗ್ಯಾಂಗ್.
- ಪ್ರಕರಣದ ಬೆನ್ನುಬೀಳುವ ಖಡಕ್ ಪೊಲೀಸ್ ಅಧಿಕಾರಿ.
ಈ ಎಲ್ಲ ಹೋಲಿಕೆಗಳ ಕಾರಣಕ್ಕಾಗಿಯೇ ದರ್ಶನ್ ಕಾನೂನು ಹೋರಾಟಕ್ಕೆ ಇಳಿದಿದ್ದರು. ಆದರೆ ಈಗ ಕಾನೂನಿನ ಸಕಲ ಅಡೆತಡೆಗಳು ದೂರಾಗಿದ್ದು, ಇಂದು ಸಂಜೆಯಿಂದ ಥಿಯೇಟರ್ಗಳಲ್ಲಿ ‘ಬಾಸ್’ ಅಬ್ಬರ ಶುರುವಾಗಲಿದೆ.

