‘100 ರೂಪಾಯಿ’ ಅಂದ್ರೆ ಸುಮ್ನೆನಾ ರವಿಮಾಮಾ? ದಯವಿಟ್ಟು ನಿಮ್ಮ ಭ್ರಮೆಯಿಂದ ಹೊರಬನ್ನಿ

Crazystar Ravichandran | Kannada Films | 100 RS film ticket viral news: ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇತ್ತೀಚೆಗೆ “ನೂರು ರೂಪಾಯಿ ಕೊಟ್ಟು ಸಿನಿಮಾ ನೋಡೋಕಾಗಲ್ವಾ?” ಅಂತ ಒಂದು ಪ್ರಶ್ನೆ ಎಸೆದಿದ್ದಾರೆ. ಕೇಳೋಕೆ ಇದು ಸಿಂಪಲ್ ಆಗಿ ಕಾಣಬಹುದು. ಆದರೆ ರವಿಮಾಮಾ, ನೀವು ಮರೆತಿರೋದು ಒಂದೇ ವಿಷಯ – ಆ ನೂರು ರೂಪಾಯಿಗೂ ಒಂದು ಬೆಲೆ ಇದೆ, ಅದಕ್ಕಿಂತ ಹೆಚ್ಚಾಗಿ ಆ ಎರಡೂವರೆ ಗಂಟೆ ಸಮಯಕ್ಕೆ ಒಂದು ಗೌರವ ಇದೆ!

ನೂರು ರೂಪಾಯಿ ಅಂದ್ರೆ ಒಂದು ಕೆಜಿ ತೊಗರಿಬೇಳೆ ಮಾಮಾ!

ನೀವು “ನೂರು ರೂಪಾಯಿ ತಾನೇ” ಅಂತೀರಾ. ಆದರೆ ಇಂದಿನ ಕಾಲದಲ್ಲಿ ಸಾಮಾನ್ಯ ಮನುಷ್ಯನಿಗೆ ನೂರು ರೂಪಾಯಿ ಅಂದ್ರೆ ಒಂದು ಕೆಜಿ ತೊಗರಿಬೇಳೆ ಅಥವಾ ಅರ್ಧ ಲೀಟರ್ ಪೆಟ್ರೋಲ್! ಅಷ್ಟೂ ಕಷ್ಟಪಟ್ಟು ಸಂಪಾದಿಸಿದ ದುಡ್ಡನ್ನ ತಗೊಂಡು ಬಂದು ಎಸಿ ರೂಮಿನಲ್ಲಿ ಕೂತು, ನಿಮ್ಮ “ಕಲಾತ್ಮಕ” ತಲೆನೋವು ನೋಡಿ ಹೊರಬರಬೇಕಾ?

ಸಿನಿಮಾ ಚೆನ್ನಾಗಿದ್ದರೆ ಜನ ಸಾವಿರ ರೂಪಾಯಿ ಕೊಟ್ಟೂ ನೋಡ್ತಾರೆ, ಕೆಜಿಎಫ್, ಕಾಂತಾರ ಸಾಕ್ಷಿ! ಆದರೆ ಕಂಟೆಂಟ್ ಇಲ್ಲದ ಸಿನಿಮಾಗೆ ನೂರು ರೂಪಾಯಿ ಕೊಡೋದು ಅಂದ್ರೆ, ಅದು ಕೇವಲ ಚಿತ್ರಮಂದಿರದ ಮಾಲೀಕನಿಗೆ ನಾವು ನೀಡೋ ‘ದೇಣಿಗೆ’ ಅಷ್ಟೇ ಅಲ್ವಾ?

“ಪ್ರೇಮಲೋಕ” ಎಲ್ಲಿದೆ? “ಪಂಗನಾಮ” ಯಾಕಿದೆ?

ರವಿಮಾಮಾ, ನೀವು ‘ಪ್ರೇಮಲೋಕ’ ಸೃಷ್ಟಿಸಿದಾಗ ಜನ ಮುಗಿಬಿದ್ದು ನೋಡಿದರು. ಯಾಕಂದ್ರೆ ಅಲ್ಲಿ ಕ್ವಾಲಿಟಿ ಇತ್ತು, ಮ್ಯಾಜಿಕ್ ಇತ್ತು. ಆದರೆ ಈಗಿನ ಸಿನಿಮಾಗಳಲ್ಲಿ?

  • ಹೀರೋಗೆ ಎಂಟ್ರಿ ಕೊಡೋಕೆ ಹತ್ತು ನಿಮಿಷ ಬಿಲ್ಡಪ್.
  • ಲಾಜಿಕ್ ಇಲ್ಲದ ಫೈಟುಗಳು.
  • ಯೂಟ್ಯೂಬ್‌ನಲ್ಲಿ ಸಿಗೋ ಕಾಮಿಡಿಗಿಂತ ಕಮ್ಮಿ ದರ್ಜೆಯ ಜೋಕುಗಳು.

ಇವನ್ನೆಲ್ಲಾ ನೋಡೋಕೆ ನೂರು ರೂಪಾಯಿ ಕೊಟ್ಟು, ಪಾರ್ಕಿಂಗ್‌ಗೆ ಐವತ್ತು ಕೊಟ್ಟು, ಇಂಟರ್ವೆಲ್‌ನಲ್ಲಿ ನೂರು ರೂಪಾಯಿ ಪಾಪ್‌ಕಾರ್ನ್ ತಿನ್ನೋಕೆ ನಾವೇನು “ಮಲ್ಲ” ಚಿತ್ರದ ಸಾಹುಕಾರರೇ?

ಬೆಂಗಳೂರಿನ S-VYASA ವಿಶ್ವವಿದ್ಯಾಲಯದಲ್ಲಿ HR ಅಸಿಸ್ಟೆಂಟ್, CA ಇಂಟರ್ನ್‌ಶಿಪ್, ಯೋಗ, ಲೈಫ್ ಸೈನ್ಸಸ್, ಪ್ರಾಧ್ಯಾಪಕ ಹುದ್ದೆಗಳಿಗೆ ಅಪ್ಲೈ ಮಾಡಿ; ಇಲ್ಲಿದೆ ವಿವರ

ಓಟಿಟಿ ಅನ್ನೋ ‘ಮನೆ ಮದ್ದು’

“ಥಿಯೇಟರ್‌ಗೆ ಬನ್ನಿ” ಅಂತ ನೀವು ಕರೆಯೋದು ಸರಿ. ಆದರೆ ಒಮ್ಮೆ ಯೋಚನೆ ಮಾಡಿ, ಅದೇ ನೂರು ರೂಪಾಯಿಗೆ ಇಡೀ ತಿಂಗಳು ಸಾವಿರಾರು ಸಿನಿಮಾ ಸಿಗೋ ಓಟಿಟಿ ಇರುವಾಗ, ನಿಮ್ಮ ‘ಡಬ್ಬಾ’ ಸಿನಿಮಾಗಳನ್ನ ನೋಡೋಕೆ ಟ್ರಾಫಿಕ್ ಸೀಳಿಕೊಂಡು ಬರಬೇಕಾ? ಸಿನಿಮಾ ಚೆನ್ನಾಗಿದ್ದರೆ ಪ್ರೇಕ್ಷಕನೇ ಪ್ರಚಾರಕನಾಗ್ತಾನೆ. ಸಿನಿಮಾ ಕೆಟ್ಟದಾಗಿದ್ದರೆ, ನೂರು ರೂಪಾಯಿ ಇರಲಿ, ಫ್ರೀಯಾಗಿ ಕೊಟ್ಟರೂ ಜನ ಬರಲ್ಲ ಅನ್ನೋದು ಕಹಿ ಸತ್ಯ.

ಕೊನೆಯ ಮಾತು:

ರವಿಮಾಮಾ, ಸಿನಿಮಾ ಅಂದ್ರೆ ಬಣ್ಣದ ಲೋಕ ನಿಜ. ಆದರೆ ಆ ಬಣ್ಣ ಪ್ರೇಕ್ಷಕರ ಕಣ್ಣಿಗೆ ಸುಣ್ಣ ಹಚ್ಚುವಂತಿರಬಾರದು. ನೂರು ರೂಪಾಯಿ ಅನ್ನೋದು ಕೇವಲ ಕಾಗದದ ತುಂಡಲ್ಲ, ಅದು ಒಬ್ಬ ಸಾಮಾನ್ಯ ಮನುಷ್ಯನ ಬೆವರಿನ ಹನಿ. ಅದಕ್ಕೆ ತಕ್ಕ ಪ್ರತಿಫಲ ಅಂದ್ರೆ ‘ಒಳ್ಳೆಯ ಕಥೆ’ ಕೊಟ್ಟರೆ ಮಾತ್ರ ನಿಮ್ಮ ಮಾತಿಗೆ ಬೆಲೆ. ಇಲ್ಲದಿದ್ದರೆ, ಆ ನೂರು ರೂಪಾಯಿಯಲ್ಲಿ ಮಸಾಲೆ ದೋಸೆ ತಿಂದು ನೆಮ್ಮದಿಯಾಗಿ ಮಲಗೋದು ಲೇಸು!

ಏನಂತೀರಾ ಕ್ರೇಜಿಸ್ಟಾರ್?

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.