ಕನಸಿನ ಕೂಸಿಗೆ ತನ್ನೂರಿನ ಹೆಸರಿಟ್ಟ ನಟ ರಿಷಬ್‌ ಶೆಟ್ಟಿ

ಕಳೆದ ವರ್ಷ ತೆರೆ ಕಂಡ ಕಾಂತಾರ ಸಿನಿಮಾ ನಟ ರಿಷಬ್‌ ಶೆಟ್ಟಿ ಊಹೆಗೂ ಮೀರಿದ ಯಶಸ್ಸನ್ನು ತಂದುಕೊಟ್ಟಿದೆ. ತದನಂತರದಲ್ಲಿ ನಟ ರಿಷಬ್‌ ಶೆಟ್ಟಿ ಹೊಸ ಹೊಸ ಪ್ರಯತ್ನಗಳಿಗೆ ಮುಂದಾಗಿದ್ದಾರೆ. ಅದಕ್ಕೆ ಸಾಕ್ಷಿ ಎನ್ನುವಂತೆ ನಿನ್ನೆ ನಟ ತಮ್ಮ ಸಾಮಾಜಿಕ ಜಾಲತಾಣದಲ್ಲಿ “ನಮ್ಮ ಹೊಸದೊಂದು ಯೋಜನೆಯನ್ನು ನಾಳೆ ಬೆಳಿಗ್ಗೆ ನಿಮ್ಮ ಮುಂದೆ ತರಲಿದ್ದೇವೆ..! ಎಂದಿನಂತೆ ನಿಮ್ಮ ಆಶೀರ್ವಾದ ಸದಾ ಇರಲಿ” ಎಂದು ಬರೆದುಕೊಂಡಿದ್ದರು. ಅದರಂತೆ ನಟ ಇಂದು ತಮ್ಮ ಹೊಸ ಪ್ರಯತ್ನವನ್ನು (Kerady Studios) ಎಲ್ಲರ ಮುಂದೆ ಪ್ರಸ್ತುತ ಪಡಿಸಿದ್ದಾರೆ.

ನಟ ರಿಷಬ್‌ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ಹೊಸ ಹೆಜ್ಜೆ, ಹೊಸ ಕನಸು ಎನ್ನುವ ಶೀರ್ಷಿಕೆಯೊಂದಿಗೆ, ಒಂದು ಸಿನಿಮಾದ ಗೆಲುವಿಗೆ ಅದರ ನಿರ್ಮಾಣದಷ್ಟೇ, ಪ್ರಚಾರದ ಅಗತ್ಯವೂ ಇದೆ.. ಕಳೆದ ಕೆಲವು ವರ್ಷಗಳಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಅದನ್ನು ಸೂಕ್ತ ಪ್ರಚಾರದ ಮೂಲಕ ಜನರಿಗೆ ತಲುಪಿಸಿದ ಅನುಭವದೊಂದಿಗೆ ಇಂದು ನಮ್ಮ ತಂಡ ಹೊಸ ಹೆಜ್ಜೆ ಇರಿಸುತ್ತಿದೆ, “ಕೆರಾಡಿ ಸ್ಟುಡಿಯೋಸ್‌” ಎಂಬ ವೇದಿಕೆಯ ಮೂಲಕ ಚಿತ್ರಗಳ ಮಾರ್ಕೆಟಿಂಗ್‌, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸಿದ್ದೇವೆ ಇದು ಉತ್ತಮ ಚಿತ್ರಗಳು ಮತ್ತು ಪ್ರೇಕ್ಷಕರ ನಡುವೆ ಸೇತುವೆ ಆಗಬೇಕೆಂಬುದೇ ನಮ್ಮ ಆಶಯ.

ಅಂದ ಹಾಗೆ ಕೆರಾಡಿ.. ನಾನು ಹುಟ್ಟಿ ಬೆಳೆದ, ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಊರು, ಎಲ್ಲಕ್ಕಿಂತಲೂ ಹೆಚ್ಚಾಗಿ, ನನ್ನೊಳಗೆ ಸಿನಿಮಾದ ಕನಸು ಹುಟ್ಟಿದ್ದು ಇಲ್ಲೇ ! ಈ ಪ್ರಯತ್ನವನ್ನು ನನ್ನ ಕೆರಾಡಿಗೆ ಅರ್ಪಿಸಿ, ಸಿನಿರಂಗಕ್ಕೆ ನಮ್ಮ ಅಳಿಲು ಸೇವೆಯನ್ನು ಮುಂದುವರೆಸಲಿದ್ದೇವೆ ನಿಮ್ಮ ಸಹಕಾರವಿರಲಿ” ಎಂದು ಸುದೀರ್ಘ ಪತ್ರ ಬರೆಯುವ ಮೂಲಕ ತಮ್ಮ ಹೊಸ ಸ್ಟೋಡಿಯೋವನ್ನು ಪರಿಚಯಸಿದ್ದಾರೆ.

ನಟ ರಿಷಬ್‌ ಶೆಟ್ಟಿ ಆರಂಭಿಕ ದಿನಗಳಲ್ಲಿ ಸಣ್ಣ ಪುಟ್ಟ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಂತರ ರಿಕ್ಕಿ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳುವ ಮೂಲಕ ನಿರ್ದೇಶನಕ್ಕೆ ಕಾಲಿಟ್ಟರು. ಆದರೆ ಅವರು ಬೆಲ್ ಬಾಟಮ್ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಪಾದಾರ್ಪಣೆ ಮಾಡಿದರು. ಇದು 2019 ರ ಉತ್ತಮ ಪ್ರತಿಕ್ರಿಯೆಯ ಕನ್ನಡ ಸಿನಿಮಾವಾಗಿತ್ತು. ಬೆಲ್ ಬಾಟಮ್ ನಂತರ ರಿಷಬ್ ಶೆಟ್ಟಿ ಅವರ ಪ್ರಮುಖ ಪಾತ್ರವು 2021 ರಲ್ಲಿ ಬಿಡುಗಡೆಯಾದ ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ ಮಂಗಳೂರು ಮೂಲದ ಗ್ಯಾಂಗ್‌ಸ್ಟರ್ ‘ಹರಿ’ ಆಗಿ ಗುರುತಿಸಿಕೊಂಡರು. ಈ ಸಿನಿಮಾವು ವಾಣಿಜ್ಯ ಮತ್ತು ವಿಮರ್ಶಾತ್ಮಕ ಯಶಸ್ಸನ್ನು ಕಂಡಿತು. ಇದರಲ್ಲಿ ರಿಷಬ್ ಶೆಟ್ಟಿ ಮತ್ತು ರಾಜ್ ಬಿ. ಶೆಟ್ಟಿ ಅವರ ಅಭಿನಯವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ವ್ಯಾಪಕವಾಗಿ ಮೆಚ್ಚುಗೆ ಗಳಿಸಿತು.

ಇದನ್ನೂ ಓದಿ : ವಿವಾದಗಳ ನಡುವೆ ಪಶ್ಚಿಮ ಬಂಗಾಳದಲ್ಲಿ ಬಿಡುಗಡೆ ಆಯ್ತು ‘ದಿ ಕೇರಳ ಸ್ಟೋರಿ’

2022 ರಲ್ಲಿ ರಿಷಬ್ ಶೆಟ್ಟಿ ಹೊಂಬಾಳೆ ಫಿಲ್ಮ್ಸ್ ಜೊತೆಗೆ ಅವರು ನಿರ್ದೇಶಿಸಿದ ಮತ್ತು ನಟಿಸಿದ ಕಾಂತಾರ ಸಿನಿಮಾವನ್ನು ಬಿಡುಗಡೆ ಮಾಡಲು ಸಹಕರಿಸಿದರು. ಕಾಂತಾರ 2022 ರ ಸೂಪರ್ ಹಿಟ್ ಆಗಿತ್ತು. ಇದು ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಸಿನಿಮಾವಾಗಿ ಗುರುತಿಸಿಕೊಂಡಿದೆ. ಆದರೆ ಈ ಸಿನಿಮಾ ಆರಂಭದ ದಿನಗಳಲ್ಲಿ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಯಿತು ಮತ್ತು ಉತ್ತಮ ವಿಮರ್ಶೆಗಳು ಮತ್ತು ಭಾರೀ ಗಲ್ಲಾಪೆಟ್ಟಿಗೆಯ ಸಂಗ್ರಹವನ್ನು ಪಡೆದ ನಂತರ, ಸಿನಿಮಾವು ಇತರ ನಾಲ್ಕು ಭಾರತೀಯ ಭಾಷೆಗಳಲ್ಲಿ ತೆರೆ ಕಂಡು ಯಶಸ್ಸು ಕಂಡಿದೆ.

Kerady Studios : Actor Rishabh Shetty named his dream child after his hometown

Comments are closed.