ಬ್ರಹ್ಮಾವರ : ಮಹೀಂದ್ರ ವ್ಯಾನ್  ಪಲ್ಟಿ : 25 ಮಂದಿಗೆ ಗಾಯ

ಉಡುಪಿ : ಮಹೀಂದ್ರ ವ್ಯಾನ್‌ಬಪಲ್ಟಿಯಾಗಿ 25ಕ್ಕೂ ಅಧಿಕ ವಲಸೆ ಕಾರ್ಮಿಕರು ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಹೇರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.

ವಾಹನದಲ್ಲಿ ವಲಸೆ ಕಾರ್ಮಿಕರ ಮಕ್ಕಳು ಸಹಿತ, ಮಹಿಳೆಯರು, ಪುರುಷರನ್ನೊಳಗೊಂಡ 25 ಮಂದಿ ತಂಡ ತೆರಳುತ್ತಿದ್ದರು ಎನ್ನಲಾಗುತ್ತಿದೆ. ಇನ್ನು ವಾಹನದಲ್ಲಿ ಜನರೇಟರ್ ವಾಹನ, ಕಾಂಕ್ರಿಟ್ ಮಿಕ್ಸಿಂಗ್ ಮೆಷಿನ್ ಕೂಡ ಇತ್ತು. ಏಕಾಏಕಿ ವಾಹನ ಪಲ್ಟಿಯಾದ್ದರಿಂದ ಹಲವರು ವಾಹನದಡಿಗೆ ಸಿಲುಕಿಕೊಂಡಿದ್ದರು. ಇಕ್ಕಾಟಾದ ಜಾಗದಲ್ಲಿದ್ದರಿಂದ ಅವರನ್ನು ರಕ್ಷಿಸಲು ಹರಸಾಹಸ‌ ಪಡುವಂತಾಗಿತ್ತು.

ಸ್ಥಳೀಯರು ಹಾಗೂ ಇತರ ವಾಹನ ಸವಾರರು‌ ಅವರನ್ನು ರಕ್ಷಿಸಿ ಅಂಬುಲೆನ್ಸ್ ಹಾಗೂ ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ಸಾಗಿಸಲು ನೆರವಾಗಿ ಮಾನವೀಯತೆ ಮೆರೆದಿದ್ದಾರೆ. ಇದೇ ವೇಳೆ ಸ್ಪಂದಿಸಿದ ಪೊಲೀಸ್ ತುರ್ತು ಸ್ಪಂದನಾ ವಾಹನದ ವಿರುದ್ಧ ಸಾರ್ವಜನಿಕರು ಆಕ್ರೋಷ ವ್ಯಕ್ತಪಡಿಸಿದರು‌‌. ಅಲ್ಲದೆ ಬೇಜವಬ್ದಾರಿಯುತವಾಗಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಸಂಬಂದಪಟ್ಟವರು ಹಾಗೂ ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಬ್ರಹ್ಮಾವರದ ಠಾಣೆಯ ಪೋಲಿಸರು ಪ್ರಕರಣ‌ ದಾಖಲಿಸಿಕೊಂಡು ತನಿಖೆ ‌ನಡೆಸುತ್ತಿದ್ದಾರೆ.

Comments are closed.