ಮಂಗಳೂರು : ದೀಪಾವಳಿಯಂದೇ ಭೀಕರ ಹತ್ಯೆ : ಕ್ಷುಲಕ ಕಾರಣಕ್ಕೆ ಚಾಕು ಇರಿದ ತಂದೆ ಮಗ
ಮಂಗಳೂರು : ಕ್ಷುಲಕ ಕಾರಣಕ್ಕೆ ವ್ಯಕ್ತಿಯೋರ್ವನಿಗೆ ತಂದೆ ಮಗ ಸೇರಿಕೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭೀಕರ ಘಟನೆ ಮಂಗಳೂರಿನ ಕಾರ್ಸ್ಟ್ರೀಟ್ ನಲ್ಲಿ ನಡೆದಿದೆ. ದೀಪಾವಳಿಯ ದಿನದಂದೇ ಈ ಘಟನೆ ನಡೆದಿದ್ದು, ಕರಾವಳಿಗರು ಬೆಚ್ಚಿಬಿದ್ದಿದ್ದಾರೆ.
ಮಂಗಳೂರು ನಗರದ ಕಾರ್ ಸ್ಟ್ರೀಟ್ ನ ಮಹಮ್ಮಾಯಿ ರಸ್ತೆಯಲ್ಲಿರುವ ವೀರ ವೆಂಕಟೇಶ ಅಪಾರ್ಟ್ಮೆಂಟ್ ನಿವಾಸಿ ವಿನಾಯಕ ಕಾಮತ್ ಎಂಬವರೇ ಮೃತ ದುರ್ದೈವಿ. ಅಪಾರ್ಟ್ಮೆಂಟ್ ನಿವಾಸಿ ಕೃಷ್ಣಾನಂದ ಕಿಣಿ ಹಾಗೂ ಮಗ ಅವಿನಾಶ್ ಕಿಣಿ ಎಂಬವರೇ ಕೊಲೆ ಆರೋಪಿಗಳಾಗಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ಅಪಾರ್ಟ್ಮೆಂಟ್ ಮುಂಭಾಗದಲ್ಲಿ ಸಿಮೆಂಟ್ ಸ್ಲಾಬ್ ಹಾಕಿತ್ತು. ಈ ವೇಳೆಯಲ್ಲಿ ಕಾರು ಸಂಚರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ವಿನಾಯಕ ಕಾಮತ್ ಹಾಗೂ ಕೃಷ್ಣಾನಂದ ಕಿಣಿ ಅವರ ನಡುವೆ ಜಗಳ ಏರ್ಪಟ್ಟು ನಂತರ ದ್ವೇಷ ಹುಟ್ಟಿಕೊಂಡಿತ್ತು.
ನಿನ್ನೆ 11 ಗಂಟೆ ಸುಮಾರಿಗೆ ಅಪಾರ್ಟ್ಮೆಂಟ್ನವರು ದೀಪಾವಳಿ ಆಚರಿಸುವ ಸಲುವಾಗಿ ವಿನಾಯಕ ಕಾಮತ್ ಕೆಳಗೆ ಹೋಗಿದ್ದಾರೆ. ಈ ವೇಳೆಯಲ್ಲಿ ಪಾರ್ಕಿಂಗ್ ಸ್ಥಳದಲ್ಲಿದ್ದ ಕೃಷ್ಣಾನಂದ ಕಿಣಿ ಮತ್ತು ಅವಿನಾಶ್ ಕಿಣಿ ಹಾಗೂ ವಿನಾಯಕ ಕಾಮತ್ ನಡುವೆ ಜಗಳ ಆರಂಭವಾಗಿತ್ತು. ಕ್ಷುಲಕ ವಿಚಾರಕ್ಕೆ ಆರಂಭಗೊಂಡ ಜಗಳದಿಂದಾಗಿ ಮೂವರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆಯಲ್ಲಿ ಕೃಷ್ಣಾನಂದ ಕಿಣಿ ತನ್ನ ಕೈಯಲ್ಲಿ ಇದ್ದ ಚಾಕುವಿನಿಂದ ವಿನಾಯಕ ಕಾಮತ್ ಎದೆಗೆ ಚುಚ್ಚಿದ್ದಾರೆ.
ಕೂಡಲೇ ವಿನಾಯಕ ಕಾಮತ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಘಟನೆಯ ಬೆನ್ನಲ್ಲೇ ವಿನಾಯಕ ಕಾಮತ್ ಅವರ ಪತ್ನಿ ಬಂದರು ಠಾಣೆಯಲ್ಲಿ ಕೃಷ್ಣಾನಂದ ಕಿಣಿ ಹಾಗೂ ಅವಿನಾಶ್ ಕಿಣಿ ಅವರ ವಿರುದ್ದ ಕೊಲೆ ಪ್ರಕರಣ ದಾಖಲು ಮಾಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಇನ್ನು ಘಟನೆಯ ಸಂಪೂರ್ಣ ಕೃತ್ಯ ಅಪಾರ್ಟ್ಮೆಂಟ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ : ಕೋಟ : ಮನೆ ನಿರ್ಮಾಣದ ವೇಳೆ ಕಾಂಕ್ರೀಟ್ ಸ್ಲಾಬ್ ಕುಸಿತ ; ಕಾರ್ಮಿಕ ಸಾವು, ಮತ್ತೋರ್ವ ಗಂಭೀರ
ಇದನ್ನೂ ಓದಿ : ಮೀನುಗಾರಿಕಾ ಬೋಟ್ ಬಂಡೆಗೆ ಢಿಕ್ಕಿ : 6 ಮಂದಿ ಮೀನುಗಾರರ ರಕ್ಷಣೆ
Comments are closed.