Block Congress President : ನಿಷ್ಕ್ರೀಯ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷರಿಗೆ ಕೆಪಿಸಿಸಿ ಬಿಗ್‌ ಶಾಕ್‌ : ಮೂಡಬಿದ್ರೆ, ಬಂಟ್ವಾಳ, ಸುಳ್ಯ ಬ್ಲಾಕ್‌ಗೆ ಹೊಸ ಅಧ್ಯಕ್ಷರು !

ಮಂಗಳೂರು : ವಿಧಾನ ಪರಿಷತ್‌ ಚುನಾವಣೆಯ ಬೆನ್ನಲ್ಲೇ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮರು ಚೈತನ್ಯ ಸಿಕ್ಕಿದಂತಾಗಿದೆ. ವಿಧಾನಸಭೆ, ಲೋಕಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋತು ಕಂಗೆಟ್ಟಿದ್ದ ಕಾಂಗ್ರೆಸ್‌ ಮುಂಬರು ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರುವ ಕನಸು ಕಾಣುತ್ತಿದೆ. ಇದೇ ಕಾರಣಕ್ಕೆ ಇದೀಗ ಬ್ಲಾಕ್‌ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ಮುಂದಾಗಿದೆ. ಹೀಗಾಗಿಯೇ ನಿಷ್ಕ್ರೀಯವಾಗಿರುವ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ (Block Congress President Change) ಬದಲಾವಣೆಗೆ ಕೆಪಿಸಿಸಿ (kpcc) ಮುಂದಾಗಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ, ಬಂಟ್ವಾಳ ಹಾಗೂ ಸುಳ್ಯ ಬ್ಲಾಕ್‌ ಕಾಂಗ್ರೆಸ್‌ ಬದಲಾವಣೆ ಖಚಿತ ಎನ್ನುತ್ತಿದೆ ಕೆಪಿಸಿಸಿ ಮೂಲಗಳು.

ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾದ ಬೆನ್ನಲ್ಲೇ ಹಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಅದ್ರಲ್ಲೂ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ ಹೀನಾಯ ಸೋಲಿನ ಕಾರಣವನ್ನು ಕಾಂಗ್ರೆಸ್‌ ಪಕ್ಷ ಹುಡುಕುವ ಕಾರ್ಯವನ್ನು ಮಾಡುತ್ತಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾಬಲ್ಯ ಮೆರೆದಿದ್ದ ಕಾಂಗ್ರೆಸ್‌ ಪಕ್ಷ ಇತ್ತೀಚಿನ ವರ್ಷಗಳಲ್ಲಿ ಸೊರಗಿದಂತೆ ಕಂಡು ಬರುತ್ತಿದೆ. ಕರಾವಳಿ ನಾಯಕರ ವರ್ತನೆಗೆ ಕಾರ್ಯಕರ್ತರು ಬೇಸತ್ತಿದ್ದಾರೆ. ಅದ್ರಲ್ಲೂ ಬ್ಲಾಕ್‌ ಮಟ್ಟದಲ್ಲಿ ಪಕ್ಷ ಸಂಘಟನೆ ಆದ್ರೆ ಮಾತ್ರವೇ ಚುನಾವಣೆಗೆಯನ್ನು ಗೆಲ್ಲಬಹುದು ಅನ್ನೋದನ್ನು ಅರಿತಿರುವ ಕೆಪಿಸಿಸಿ ರಾಜ್ಯದಾದ್ಯಂತ ಸರ್ಜಿಕಲ್‌ ಸ್ಟ್ರೈಕ್‌ ನಡೆಸಲು ಮುಂದಾಗಿದೆ. ಅದಕ್ಕಾಗಿಯೇ ಈಗಾಗಲೇ ನಿಷ್ಕ್ರೀಯರಾಗಿರುವ ಬ್ಲಾಕ್‌ ಅಧ್ಯಕ್ಷರ ಪಟ್ಟಿಯನ್ನು ಸಿದ್ದಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬ್ಲಾಕ್‌ ಅಧ್ಯಕ್ಷರ ಕಾರ್ಯ ವೈಖರಿಯ ಕುರಿತು ಈಗಾಗಲೇ ಕೆಪಿಸಿಸಿ ಗೌಪ್ಯ ಮಾಹಿತಿಯನ್ನು ತರಿಸಿಕೊಂಡಿದೆ. ಜೊತೆಗೆ ಕಾರ್ಯಕರ್ತರ ವಲಯದಲ್ಲಿ ಯೂ ಹಲವು ಬ್ಲಾಕ್‌ ಅಧ್ಯಕ್ಷರ ಬದಲಾವಣೆ ಮಾತು ಕೇಳಿಬಂದಿದೆ. ಆರಂಭಿಕ ಹಂತದಲ್ಲಿ ಮೂಡಬಿದಿರೆ, ಸುಳ್ಯ ಹಾಗೂ ಬಂಟ್ವಾಳ್‌ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆಗೆ ಕೆಪಸಿಸಿ ಮುಂದಾಗಿದೆ ಎನ್ನಲಾಗುತ್ತಿದೆ. ಈ ಮೂಲಕ ಇತರ ಬ್ಲಾಕ್‌ಗಳ ಅಧ್ಯಕ್ಷರಿಗೂ ಬಿಸಿ ಮುಟ್ಟಿಸುವ ಫ್ಲ್ಯಾನ್‌ ಹಾಕಿಕೊಂಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್‌ ಕೂಡ ನಿಷ್ಕ್ರೀಯರಾಗಿರುವ ಬ್ಲಾಕ್‌ ಅಧ್ಯಕ್ಷರ ಬದಲಾವಣೆ ಯ ಕುರಿತು ಗಂಭೀರವಾದ ಚಿಂತನೆ ನಡೆಸಿದ್ದಾರೆ. ಚುನಾವಣೆಯ ಹೊತ್ತಲ್ಲಿ ಸೊರಗಿರುವ ಪಕ್ಷವನ್ನು ಮರಳಿ ಸಂಘಟಿಸುವುದು ಕೆಪಿಸಿಸಿಯ ಲೆಕ್ಕಾಚಾರ. ವಿಧಾನ ಸಭಾ ಚುನಾವಣೆಗೆ ಈಗಾಗಲೇ ಸಿದ್ದತೆಯನ್ನು ಆರಂಭಿಸಿರುವ ಕಾಂಗ್ರೆಸ್‌ ಪಕ್ಷ, ಬಹುತೇಕ ಅಭ್ಯರ್ಥಿಗಳನ್ನೂ ಕೂಡ ಫೈನಲ್‌ ಮಾಡಿದೆ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರ ಬದಲಾವಣೆಯ ಕುರಿತು ಚಿಂತನೆ ನಡೆಸಿ ವೀಕ್ಷಕರನ್ನೂ ಕಳುಹಿಸಿಕೊಟ್ಟಿತ್ತು. ಆದರೆ ಕೆಲವು ಕಾರಣಗಳ ಹಿನ್ನೆಲೆಯಲ್ಲಿ ಹರೀಶ್‌ ಕುಮಾರ್‌ ಅವರನ್ನು ಉಳಿಸಿಕೊಂಡಿದೆ.

ಕಾಂಗ್ರೆಸ್‌ ಭದ್ರಕೋಟೆಯಾಗಿರುವ ಮೂಡಬಿದಿರೆ, ಬಂಟ್ವಾಳದಲ್ಲಿ ಕಾಂಗ್ರೆಸ್‌ ಪಕ್ಷದ ಸೊರಗಲು ಪ್ರಮುಖ ಕಾರಣವೇ ಬ್ಲಾಕ್‌ ಕಾಂಗ್ರೆಸ್‌ ಅನ್ನೋ ಆರೋಪವೂ ಇದೆ. ಅಧ್ಯಕ್ಷರು ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆ ನಡೆದಿರುವುದೇ ಪ್ರಮುಖ ಕಾರಣ ಅನ್ನೋ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಇನ್ನೊಂದೆಡೆಯಲ್ಲಿ ಕೆಲವು ಬ್ಲಾಕ್‌ ಅಧ್ಯಕ್ಷರ ಕಾರ್ಯ ವೈಖರಿಯ ಬಗ್ಗೆ ಖುದ್ದು ಕಾರ್ಯಕರ್ತರೇ ಆರೋಪ ಮಾಡಿದ್ದಾರೆ. ಒಟ್ಟಿನಲ್ಲಿ ಕೆಪಿಸಿಸಿಯ ಈ ನಿರ್ಧಾರ ಕರಾವಳಿ ರಾಜಕೀಯ ವಲಯದಲ್ಲಿ ಸಂಚಲನವನ್ನುಂಟು ಮಾಡಿದೆ.

ಇದನ್ನೂ ಓದಿ : ಮತಾಂತರ ನಿಷೇಧ ಕಾಯಿದೆ ಜಾರಿ : ಬಿಜೆಪಿ ನಿಲುವಿಗೆ ಎಚ್.ಡಿ.ಕೆ ಅಚ್ಚರಿಯ ಹೇಳಿಕೆ

ಇದನ್ನೂ ಓದಿ : ಕುಟುಂಬ ರಾಜಕಾರಣದ ವಿರುದ್ಧ ಮಸೂದೆ ತನ್ನಿ: ಕೈ, ಕಮಲ‌ ಪಾಳಯಕ್ಕೆ ಎಚ್.ಡಿ.ರೇವಣ್ಣ ಸವಾಲು

(Moodabidri Sullia Bantwal Block Congress President Change kpcc decision)

Comments are closed.