ಉತ್ತರ ಪ್ರದೇಶ : ಕೇವಲ 200 ರೂ. ಸಾಲ ನೀಡಲು ನಿರಾಕರಿಸಿದ್ದಕ್ಕೆ ಸಾರ್ವಜನಿಕರ ಎದುರಲ್ಲಿಯೇ ವ್ಯಕ್ತಿಯೋರ್ವನನ್ನು ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರ ಪ್ರದೇಶದ ಅಲಿಗರ್ನ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ನಡೆದಿದೆ.
ಅನ್ಸಾರ್ ಅಹ್ಮದ್ (30 ವರ್ಷ) ಮೃತ ದುರ್ದೈವಿ. ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಶಂಶಾದ್ ಮಾರುಕಟ್ಟೆಯಲ್ಲಿ ಟೈರ್ ರಿಪೇರಿ ಅಂಗಡಿಯೊಂದನ್ನು ಹೊಂದಿದ್ದು, ಮೂವರು ಮಕ್ಕಳನ್ನು ಹೊಂದಿದ್ದ ಎನ್ನಲಾಗಿದೆ. ಶನಿವಾರ ಘಟನೆ ನಡೆದಿದ್ದು, ಆಸಿಫ್ ಎಂಬಾತ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮಾದಕ ವ್ಯಸನಿಯಾಗಿದ್ದು, ಅಪರಾಧ ಎಸಗಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಅಭಿಷೇಕ್ ಕುಮಾರ್ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಆಸಿಫ್ ತನ್ನ ಬೈಕ್ ಇಟ್ಟುಕೊಂಡು ಸಾಲ ನೀಡುವಂತೆ ಅಹ್ಮದ್ ಬಳಿ ಕೇಳಿದ್ದಾನೆ. ಆದರೆ, ಅಹ್ಮದ್ ಸಾಲ ನೀಡಲು ನಿರಾಕರಿಸಿದ್ದಾನೆ.
ಅದಾದ ಬಳಿಕ ಆರೋಪಿ ಮತ್ತೆ ಅಹ್ಮದ್ನ ಅಂಗಡಿಗೆ ಬಂದು ಅವನಿಂದ 200 ರೂ. ಬೇಡಿಕೆ ಇಟ್ಟಿದ್ದಾನೆ. ಆದರೆ, ಅಹ್ಮದ್ ದುಡ್ಡು ನೀಡಲು ನಿರಾಕರಿಸಿದಾಗ ಆಸಿಫ್ ತನ್ನ ಜೇಬಿನಿಂದ ನಾಡ ಪಿಸ್ತೂಲು ತೆಗೆದು ಜನರ ಮುಂದೆಯೇ ತಲೆಗೆ ಗುಂಡು ಹಾರಿಸಿದ್ದಾನೆ. ಬಳಿಕ ತನ್ನ ಬೈಕ್ನಲ್ಲಿ ಆಸಿಫ್ ಪರಾರಿಯಾಗಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.