ಧರ್ಮಸ್ಥಳ : ರಾಜ್ಯದಲ್ಲಿ ಕೊರೊನಾ (ಕೋವಿಡ್ -19) ವೈರಸ್ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆಯಲ್ಲಿ ಸರಕಾರ ರಾಜ್ಯದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಎಲ್ಲಾ ಕಚೇರಿಗಳನ್ನು ಮಾರ್ಚ್ 31ರ ವರೆಗೆ ಬಂದ್ ಮಾಡಲಾಗಿದ್ದು, ಸಾಲ ಮರುಪಾವತಿಗೆ ಎರಡು ವಾರಗಳ ಕಾಲ ರಜೆ ನೀಡಲಾಗಿದೆ.

ಈ ಅವಧಿಯಲ್ಲಿ ಯಾವುದೇ ವಿಭಾಗವೂ ಕಾರ್ಯನಿರ್ವಹಿಸುವುದಿಲ್ಲ. ಯೋಜನೆ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕುಗಳ ಹಣ ಸಂಗ್ರಹಣಾ ಕೇಂದ್ರಗಳನ್ನು ಮಾರ್ಚ್ 23ರ ಸಂಜೆ 6 ಗಂಟೆಯಿಂದ ಎಪ್ರಿಲ್ 5ರ ವರೆಗೆ ಸ್ಥಗಿತಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಹಣದ ವ್ಯವಹಾರವನ್ನು ನಡೆಸಲಾಗುವುದಿಲ್ಲ. ಇನ್ನು ಹೊಸ ಸಂಪೂರ್ಣ ಸುರಕ್ಷಾ ನೋಂದಾವಣೆಯನ್ನು ರದ್ದುಗೊಳಿಸಲಾಗಿದ್ದು, ಸಂಪೂರ್ಣ ಸುರಕ್ಷಾ ಯೋಜನೆಯ ರಿನಿವಲ್ ಪೆಂಡಿಂಗ್ ಕುರಿತಂತೆ ಮಾರ್ಚ್ 31ರಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಇನ್ನು ಎಪ್ರೀಲ್ 3ರ ವರೆಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಪ್ರಾಯೋಜಿತವಾಗಿರುವ ಸ್ವಸಹಾಯ ಸಂಘಗಳ ಸಭೆ, ನಿರ್ಣಯ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ. ಸೇವಾ ಪ್ರತಿನಿಧಿಗಳು ಕೂಡ ಎಪ್ರಿಲ್ 3ರವರೆಗೆ ಸಂಘಗಳಿಗೆ ಭೇಟಿ ನೀಡುವುದಕ್ಕೆ ವಿನಾಯಿತಿ ನೀಡಲಾಗಿದ್ದು, ಮುಂದಿನ ಎರಡು ವಾರಗಳ ಕಾಲ ಸಂಘದ ಸದಸ್ಯರುಗಳಿಗೆ ಸಾಲ ಮರುಪಾವತಿಗೆ ರಜೆ ಘೋಷಿಸಲಾಗಿದೆ ಎಂದು ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್ ತಿಳಿಸಿದ್ದಾರೆ.
