ಲೇಖಕರು : ಅರುಣ್ ಕುಮಾರ್ ಕಲ್ಲುಗದ್ದೆ
ಸದಸ್ಯರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ

ಜಗತ್ತು ಕಂಡ ಎರಡು ಭೀಕರ ಮಹಾಯುದ್ಧಗಳು ನಾಂದಿ ಹಾಡಿದ” ಮಾನವ ಹಕ್ಕು”ಗಳ ಪರಿಕಲ್ಪನೆಯು ಇಂದಿಗೆ 72 ವಸಂತಗಳನ್ನು ಪೂರೈಸಿದೆ. ಮಹಾಯುದ್ಧಗಳ ಪೂರ್ವದಲ್ಲಿ ಅನೇಕ ಚಿಂತನೆಗಳೊಂದಿಗೆ ಮಾನವ ಹಕ್ಕುಗಳ ಕಲ್ಪನೆ ಬೆರೆತ್ತಿದ್ದರೂ ಸಹ, ಮಾನವ ಹಕ್ಕುಗಳಿಗೆ ಹೊಸ ಪರಿಭಾಷೆ ಬರೆದ ಗೌರವ”ವಿಶ್ವ ಸಂಸ್ಥೆ”ಯದ್ದಾಗಿದೆ.
ಎಲ್ಲಾ ವರ್ಣ, ಧರ್ಮ, ಲಿಂಗ, ಭಾಷೆ, ಅಂತಸ್ತು,ಸಾಮಾಜಿಕ ಹಿನ್ನೆಲೆ ಹಾಗೂ ದೇಶಗಳ ಗಡಿಯಿಂದಾಚೆ ಜಗತ್ತಿನೆಲ್ಲೆಡೆ ನಡೆಯುವ ತಾರತಮ್ಯಕ್ಕೆ ಕೊನೆ ಹಾಡುವ ನಿಟ್ಟಿನಲ್ಲಿ, ಸಮಸ್ತ ಮಾನವ ಕುಟುಂಬದ ಸಹಜ ಹಕ್ಕುಗಳ ರಕ್ಷಣೆಯ ಹೊಣೆ ಹೊತ್ತ ವಿಶ್ವ ಸಂಸ್ಥೆಯು, 1948 ರಡಿಸೆಂಬರ್ 10 ರಂದು ಮಾನವ ಬಾಧ್ಯತೆಗಳನ್ನು ಪ್ರಕಟಿಸಿತು. ಡಿಸೆಂಬರ್ 10ರ ಈ ದಿನವನ್ನು ವಿಶ್ವದೆಲ್ಲೆಡೆ “ವಿಶ್ವ ಮಾನವ ಹಕ್ಕು” ದಿನವನ್ನಾಗಿ ಆಚರಿಸಲಾಗುತ್ತಿದೆ. ವಿಶ್ವ ಸಂಸ್ಥೆ ಮಾನವ ಹಕ್ಕುಗಳನ್ನು ಘೋಷಣೆ ಮಾಡಿ 72 ವರ್ಷ ಸಂದರೂ ಇಂದಿಗೂ ತನ್ನ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿದೆ.
ಮಾನವ ಹಕ್ಕುಗಳ ಉದಯ:-
“ಜನರ ಹಕ್ಕುಗಳನ್ನು ನಿರಾಕರಿಸಿದರೆ ಅದು ಅವರ ಮನುಷ್ಯತ್ವವನ್ನೇ ತಿರಸ್ಕರಿಸಿದಂತೆ”- ನೆಲ್ಸನ್ ಮಂಡೇಲಾ. ಆಫ್ರಿಕಾದಲ್ಲಿನ ಕಪ್ಪು ವರ್ಣೀಯರ ಹಕ್ಕುಗಳಿಗಾಗಿ ಹೋರಾಡಿದ”ಆಫ್ರಿಕಾದಗಾಂಧಿ”ಎಂದೇ ಪ್ರಖ್ಯಾತರಾದ ನೆಲ್ಸನ್ ಮಂಡೇಲಾರವರ ಮಾತುಗಳಿವು. ಮಾನವ ಹಕ್ಕುಗಳ ಬಗೆಗಿನ ಹೋರಾಟಗಳೆಲ್ಲವೂ ಒಂದು ಹಂತದಲ್ಲಿ ಯಶಸ್ವಿಯಾಗಿದ್ದು ಹೆಚ್ಚು ವಿಶ್ವ ಸಮರಗಳಿಂದ ಲಕ್ಷಾಂತರ ಅಮಾಯಕ ಜನರ ಮಾರಣ ಹೋಮವು ಸೇರಿದಂತೆ ಭಯಾನಕ ಪರಿಣಾಮಗಳಿಂದಾಗಿ ವಿಶ್ವ ಸಂಸ್ಥೆಯು ಮಾನವ ಹಕ್ಕುಗಳನ್ನು ಘೋಷಣೆ ಮಾಡಿದ್ದರೂ, ಹೋರಾಟ ಬೆಳೆದು ಬಂದ ಹಾದಿ ತುಂಬಾ ಹಳೆಯದು ಮತ್ತು ಕಠಿಣ.
ಹುಟ್ಟಿದ ಪ್ರತಿಯೊಬ್ಬ ಮಾನವ ಕೆಲವೊಂದು ಜನ್ಮಸಿದ್ಧ ಹಕ್ಕುಗಳನ್ನು ಪಡೆದುಕೊಳ್ಳುತ್ತಾನೆ. ಇವು ಮಾನವ ಜೀವಿಯ ಮೂಲ ಅರ್ಹತೆಗಳಿಸುತ್ತದೆ. “ನಾಗರೀಕತೆ”ಎನ್ನುವ ಸೂರ್ಯೋದಯದ ಮುಂಚೆ Survival of Fittest ಒಂದು ಕ್ರಮವಾಗಿತ್ತು. ಆ ದಿನಗಳಲ್ಲಿ ಮಾನವ ಹಕ್ಕುಗಳ ಯೋಚನೆಯೂ ಶೂನ್ಯ ಎನ್ನಬಹುದು. ನಾಗರೀಕ ಬದುಕು ಬೆಳವಣಿಗೆ ಹೊಂದಿದಂತೆ, ತಮ್ಮಜೀವಿಸುವ ಹಕ್ಕುಗಳನ್ನು ಪ್ರತಿಪಾದಿಸಲು ಪ್ರಯತ್ನಿಸುತ್ತಿದ್ದಂತೆ ನಿಧಾನವಾಗಿ ಮಾನವ ಹಕ್ಕುಗಳ ಪರಿಕಲ್ಪನೆಯ ಜೀವ ಮೊಳಕೆಯೊಡೆಯಲು ಪ್ರಾರಂಭಿಸಿತು.
ಮಧ್ಯಕಾಲೀನ ಯುಗದಲ್ಲಿ “ಉಳ್ಳವರು” ಮತ್ತು “ಇಲ್ಲದವರು” ಹಾಗೂ ನಂತರ ನಿರಂಕುಶರಾಜ ಪ್ರಭುತ್ವದಿಂದ ಮಾನವ ಹಕ್ಕುಗಳು ತುಳಿತಕ್ಕೆ ಒಳಗಾದವು. 1215 ರಲ್ಲಿ ಕಿಂಗ್ಜಾನ್ರವರ”ಮ್ಯಾಗ್ನಾಕಾರ್ಟ್ಸ್”, 1628 ರಲ್ಲಿ ಇಂಗ್ಲೆಂಡಿನ ಚಾರ್ಲ್ಸ್1 ಹಕ್ಕುಗಳ ಮನವಿಯ ಸಹಿ ಹಾಕಿ, ವಿಲಿಯಮ್ಸ್ರ”ಬಿಲ್ ಆಫ್ರೈಟ್ಸ್”ರಿಂದ ಪ್ರಾರಂಭವಾಗಿ 1776 ರಅಮೇರಿಕಾ ಸ್ವಾತಂತ್ರ್ಯ ಘೋಷಣೆ, ವಿಶ್ವ ಸಂಸ್ಥೆಯ ಫ್ರಾನ್ಸಿನ ಜನರಲ್ ಅಸೆಂಬ್ಲಿಯಿಂದ ಮಾನವ ಹಕ್ಕುಗಳ ಘೋಷಣೆಯವರೆಗೆ ವಿವಿಧ ಮಜಲುಗಳನ್ನು ದಾಟಿ ಇತಿಹಾಸದ ಪುಟದಲ್ಲಿ ಮೈಲಿಗಲ್ಲನ್ನು ದಾಖಲು ಮಾಡುತ್ತದೆ.
ಎರಡು ವಿಶ್ವ ಮಹಾ ಸಮರಗಳಿಂದ ಮಾನವ ಹಕ್ಕುಗಳು ಗಂಡಾಂತರ ಹಾಗೂ ವಿನಾಶದ ಹಂತಕ್ಕೆ ತಲುಪಿದ ಸಮಯದಲ್ಲಿ, “ಮಾನವ ಗೌರವ ಪ್ರತಿಷ್ಠೆಗೆ ಧಕ್ಕೆಯಾಗ ಬಾರದೆಂದು”, ಎಲ್ಲಾ ಜನಗಳಿಗೂ ಎಲ್ಲಾ ಕಾರ್ಯಸಿದ್ಧಿಯ ಸಾಮಾನ್ಯ ಪ್ರಮಾಣವೆಂದು, ಕೊನೆಯವರೆಗೂ ಪ್ರತಿ ವ್ಯಕ್ತಿಯೂ, ಸಮಾಜದ ಪ್ರತಿ ಅಂಗವೂ ಈ ಹಕ್ಕುಗಳನ್ನು, ಸ್ವಾತಂತ್ರ್ಯಗಳನ್ನು ಗೌರವಿಸುವುದನ್ನು ಅಭಿವೃದ್ಧಿ ಗೊಳಿಸಲು ಪ್ರಯತ್ನಿಸ ಬೇಕೆಂದು, ಸದಸ್ಯ ರಾಷ್ಟ್ರಗಳ ಪ್ರಜೆಗಳಲ್ಲಿಯೂ, ಅವುಗಳ ಅಧಿಪತ್ಯಕ್ಕೆ ಒಳಪಟ್ಟ ರಾಷ್ಟ್ರಗಳ ಪ್ರಜೆಗಳಲ್ಲಿಯೂ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪ್ರಗತಿಶೀಲವಾದ ಸಾಧನೆಗಳಿಂದ ಈ ಹಕ್ಕು ಸ್ವಾತಂತ್ರ್ಯಗಳ ಸಾರ್ವತ್ರಿಕ ಫಲದಾಯಕವೂ ಆದ ಅಂಗೀಕಾರವನ್ನು, ಅನುಷ್ಠಾನವನ್ನು ಪಡೆಯಬೇಕೆಂದು”ವಿಶ್ವ ಸಂಸ್ಥೆಯು 30 ಅನುಚ್ಛೇದ”ಗಳಲ್ಲಿ ಪ್ರಕಟಿಸಿದ್ದು, ಕಳೆದ 72 ವರ್ಷಗಳಿಂದ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.
ಭಾರತದಲ್ಲಿ ಮಾನವ ಹಕ್ಕುಗಳು:-
ಭಾರತಕ್ಕೆ ಮಾನವ ಹಕ್ಕುಗಳುಎಂಬುದು ಬಹಳ ಹಳೆಯ ವಿಷಯವೇನಲ್ಲ ಹಾಗೂ ಪಾಶ್ಚಾಮಾತ್ಯರ ಕೊಡುಗೆ ಎನ್ನುವುದು ತಪ್ಪು. ಅತ್ಯಂತ ಪ್ರಾಚೀನವಾದ ಋಗ್ವೇದದಲ್ಲಿ ತಾನ(ದೇಹ), ಸ್ಕೃಥಿ(ವಾಸಸ್ಥಾನ) ಮತ್ತು ಜುಭಾಸಿ(ಜೀವ) ಎಂಬ ಮೂರು ಹಕ್ಕುಗಳನ್ನು ತಿಳಿಸಲಾಗಿದೆ. ಸಾವಿರಾರು ವರ್ಷಗಳ ವೇದ-ಪುರಾಣಗಳ ಪರಂಪರೆಯೇ ಭಾರತದಲ್ಲಿ”ವಸುದೈವಕುಟುಂಬಕಂ” ಎಂಬ ಪರಿಕಲ್ಪನೆಯೊಂದಿಗೆ ಪ್ರಾಚೀನ ಕಾಲದಿಂದಲೂ ಸಮಾಜದಲ್ಲಿ ಒಬ್ಬರಿಗೊಬ್ಬರು ಗೌರವದಿಂದ ಬಾಳ್ವೆ ನಡೆಸುತ್ತಾ ಮಾನವೀಯತೆ ಹಾಗೂ ಭಾವನಾತ್ಮಕ ಸಂಬಂಧಗಳ ಮೂಲಕ ಮಾನವ ಹಕ್ಕುಗಳನ್ನು ಉಳಿಸಿಕೊಂಡು ಬರಲಾಗುತ್ತಿದೆ.
ಭಾರತದಲ್ಲಿ ಧರ್ಮ ಸುಧಾರಣೆಯ ಚಳುವಳಿಯಿಂದ ಸತಿ ಪದ್ಧತಿಯನ್ನುತೊಡೆದು ಹಾಕಲು ರಾಜಾರಾಮ್ ಮೋಹನ್ರಾಯ್ರವರು ಪ್ರಯತ್ನಿಸಿದ್ದು ಇಲ್ಲಿ ಉಲ್ಲೇಖಿಸ ಬಹುದಾಗಿದೆ. ನಂತದರದ ದಿನಗಳಲ್ಲಿ ಡಾ|| ಬಿ.ಆರ್.ಅಂಬೇಡ್ಕರ್ರವರು ದಲಿತರು, ಅಸ್ಪ್ರಶ್ಯರು, ಹಿಂದುಳಿದವರ ಹಕ್ಕುಗಳ ಕುರಿತು ಹೋರಾಟ ಮಾಡಿದರು.ಆದಾಗ್ಯೂ ವಿಶಾಲವಾದ ಭೌಗೋಳಿಕ ಪರಿಸರ, ಅತ್ಯದ್ಭುತ ವೈವಿಧ್ಯತೆಯ ಅಭಿವೃದ್ಧಿಶೀಲ ಆಧುನಿಕ ಭಾರತದಲ್ಲಿ ಮಾನವ ಹಕ್ಕುಗಳ ವಸ್ತು ಸ್ಥಿತಿ ಒಂದು ಸಂಕೀರ್ಣ ವಿಷಯವಾಗಿದೆ.
ಭಾರತದ ಸಂವಿಧಾನವು ಮೂಲಭೂತ ಹಕ್ಕುಗಳನ್ನು ನೀಡುವುದರ ಜೊತೆಗೆ ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳನ್ನು ಒದಗಿಸಿದೆ.ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ದಿನಗಳಲ್ಲಿ ದಲಿತರು, ಅಸ್ಪಶ್ಯರು ಹಾಗೂ ಹಿಂದುಳಿದವರು ಬಹಳ ಕಷ್ಟ ಅನುಭವಿಸಿದ್ದರೂ, ಪ್ರಸಕ್ತ ಕಾಲಘಟ್ಟದಲ್ಲಿ ಗಣನೀಯ ಬದಲಾವಣೆ ಕಾಣಬಹುದಾಗಿದೆ. ಜನರಿಗೆ ಮಾನವ ಹಕ್ಕುಗಳ ಕುರಿತು ಅರಿವು ಮೂಡತೊಡಗಿದೆ. ವಿಶ್ವ ಸ್ವಾತಂತ್ರ್ಯ ವರದಿಯಲ್ಲಿ, ಭಾರತದಲ್ಲಿರಾಜಕೀಯ ಹಕ್ಕು ಹಾಗೂ ನಾಗರೀಕ ಸ್ವಾತಂತ್ರ್ಯಕ್ಕೆ ಉನ್ನತದರ್ಜೆಯ ಸ್ಥಾನಮಾನವಿದೆ.
ಸರ್ವೋಚ್ಛ ನ್ಯಾಯಾಲಯವು ಹಲವಾರು ಪ್ರಕರಣಗಳ ತೀರ್ಪಿನಲ್ಲಿ ಮಾನವ ಹಕ್ಕುಗಳ ಮೂಲ ತತ್ವವನ್ನು ಎತ್ತಿ ಹಿಡಿದಿದೆ. ಎಂ.ಸಿ. ಮೆಹತಾ ಯೂನಿಯನ್ ಆಫ್ಇಂಡಿಯಾ, 1986 ಈ ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವುದ ಕ್ಕೋಸ್ಕರ ಸರ್ವೋಚ್ಛ ನ್ಯಾಯಾಲಯವು ಸಂವಿಧಾನ ವಿಧಿ 21 ಮತ್ತು 32 ರ ವ್ಯಾಪ್ತಿಯನ್ನು ವಿಸ್ತರಿಸಿ, ಮಾನವನ ಮೂಲಭೂತ ಹಕ್ಕಾಗಿರುವ ಜೀವಸುವ ಹಕ್ಕಿನ ಮಹತ್ವವನ್ನು ಪ್ರತಿಪಾದಿಸಿ. ತನ್ನ ಸಂವಿಧಾನದ ಮೂಲಕ ಮಾನವ ಹಕ್ಕುಗಳನ್ನು ರಕ್ಷಿಸುವ ರಾಷ್ಟ್ರಗಳಲ್ಲಿ ಭಾರತವು ಕೂಡ ಒಂದು. ಸಂವಿಧಾನದ ರಾಜ್ಯ ನೀತಿತತ್ವ ನಿರ್ದೇಶನಗಳಲ್ಲಿ ನೀಡಿರುವ ಆರ್ಥಿಕ, ಸಾಮಾಜಿಕ, ಮತ್ತು ಸಾಂಸ್ಕೃತಿಕ ಹಕ್ಕುಗಳು ಒಂದು ಸಮಾಜದ ಒಳಿತಿಗಾಗಿ ಮತ್ತು ನಾಗರೀಕ ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ತನ್ನದೇ ಆದ ಅಧಿಕಾರ, ಪ್ರಕಾರ್ಯ ಹೊಂದಿದ್ದು, ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ವಿಚಾರಣೆ, ಕಾರ್ಯಗೃಹದಲ್ಲಿರುವ ವ್ಯಕ್ತಿಗಳಿಗೆ ಸಿಗಬೇಕಾದ ಮಾನವ ಹಕ್ಕುಗಳ ಬಗೆಗಿನ ವಿಚಾರ ಮತ್ತು ಮಾನವ ಹಕ್ಕುಗಳ ಕ್ಷೇತ್ರದಲ್ಲಿ ನಡೆಯಬೇಕಾಗಿರುವ ಸಂಶೋಧನೆಯ ಬಗ್ಗೆ ಕಾಳಜಿ ವಹಿಸುತ್ತದೆ. ಹಾಗೆಯೇ ಮಾನವ ಹಕ್ಕುಗಳ ಕ್ಷೇತ್ರದಲ್ಲಿದುಡಿಯುತ್ತಿರುವ ಸರಕಾರೇತರ ಸಂಘ-ಸಂಸ್ಥೆಗಳನ್ನು ಉತ್ತೇಜಿಸುವಂತಹ ಕಾರ್ಯಗಳು ನಡೆಯಬೇಕಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗಗಳನ್ನು ರಚಿಸುವುದರ ಮುಖಾಂತರ ಪ್ರಾದೇಶಿಕ ಮಟ್ಟದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆಎಚ್ಚರ ವಹಿಸುವುದು ಹಾಗೆಯೇ ಮಾನವ ಹಕ್ಕುಗಳ ನ್ಯಾಯಾಲಯಗಳ ಸ್ಥಾಪನೆ, ಉಲ್ಲಂಘನೆಯಿಂದ ಉಂಟಾಗುವ ಅಪರಾಧಗಳ ಶೀಘ್ರ ವಿಚಾರಣೆಗೆ ಅನುಕೂಲವಾಗಿರುತ್ತದೆ.
ವಿಶ್ವ ಮಾನವ ಹಕ್ಕು ಆಯೋಗವು ವಿಶ್ವದಾದ್ಯಂತ ಜನರಿಗೆ ಪುರ್ನವಸತಿ, ಗುಲಾಮಗಿರಿಯಿಂದ ಮುಕ್ತಿ, ಬಂಧನ ಸ್ಥಳಗಳಿಗೆ ಭೇಟಿ, ಮಾನವ ಹಕ್ಕುಗಳ ವಸ್ತುಸ್ಥಿತಿ ಅಧ್ಯಯನ, ದಾಖಲೆ, ತನಿಖೆಗಳ ಕಾರ್ಯ ವ್ಯಾಪ್ತಿಯನ್ನು ಹೊಂದಿದೆ. ರಾಷ್ಟ್ರೀಯ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗವು ನರಮೇಧ, ಮರ್ಯಾದೆ ಹತ್ಯೆ, ನಕಲಿ ಎನ್ಕೌಂಟರ್, ಲಾಕಪ್ ಡೆತ್, ಗಲಭೆ ಸಂದರ್ಭಗಳು ಸೇರಿದಂತೆ ಭಾರತ ಸಂವಿಧಾನ ನೀಡಿರುವ ಅವಕಾಶಗಳು, ಮೂಲಭೂತ ಹಕ್ಕು, ಉಲ್ಲಂಘನೆಯಾಗದಂತೆ ಮಾನವ ಹಕ್ಕುಗಳ ರಕ್ಷಣೆಯ ಜವಾಬ್ದಾರಿ ಹೊಂದಿದೆ.
ವಿಶ್ವ ಮಾನವ ಹಕ್ಕುಗಳ ಆಯೋಗಕ್ಕೆ ನಾರ್ವೆ, ಸ್ವೀಡನ್, ಯುರೋಪ್, ಅಮೇರಿಕಾ, ನೆದರ್ ಲ್ಯಾಂಡ್ ಹಾಗೂ ಭಾರತಧನ ಸಹಾಯ ನೀಡುವ ಅಗ್ರ ರಾಷ್ಟ್ರಗಳಾಗಿವೆ. ಯಾವಾಗಲೂ ಯುದ್ದೋನ್ಮಾದ ಸ್ಥಿತಿಯಲ್ಲಿರುವ ದುರ್ಬಲ ರಾಷ್ಟ್ರಗಳ ಮೇಲೆ ಯುದ್ಧ ಸಾರಿ ದೊಡ್ಡಣ್ಣನಂತೆ ವರ್ತಿಸುವ ಅಮೇರಿಕಾ ಅತೀ ಹೆಚ್ಚಿನಧನ ಸಹಾಯ ನೀಡುವುದು ವಿಶ್ವ ಮಾನವ ಹಕ್ಕುಗಳ ಆಯೋಗಕ್ಕೆ ಬಿಸಿ ತುಪ್ಪವಾಗಿರುವುದು ಸುಳ್ಳಲ್ಲ. ಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಮಾನವ ಜೀವಿಯು ಜನ್ಮಸಿದ್ಧ ಹಕ್ಕುಗಳಾದ ಮಾನವ ಹಕ್ಕುಗಳನ್ನು ರಕ್ಷಿಸುವ ಮತ್ತು ಗೌರವಿಸುವುದು ಪ್ರತಿಯೊಬ್ಬ ವ್ಯಕ್ತಿ ಹಾಗೂ ಸಮಾಜದ ಜವಾಬ್ದಾರಿಯಾಗಿದೆ.