ಕನ್ನಡ ಶಾಲೆ ಉಳಿವಿಗೆ ಪಣತೊಟ್ಟ ಉದ್ಯಮಿ : ಗಿಳಿಯಾರು ಶಾಂಭವಿ ಶಾಲೆಗೆ 40 ಕೋಟಿ ರೂ. ದಾನ ಮಾಡಿದ ವಿನೋದ್ ಕುಮಾರ್
ಕೋಟ : ಇತ್ತೀಚಿನ ವರ್ಷಗಳಲ್ಲಿ ಕನ್ನಡ ಶಾಲೆಗಳು ಕಣ್ಮರೆಯಾಗುತ್ತಿದೆ. ಆದರೆ ಅಳಿವಿನಂಚಿಗೆ ಸರಿದಿರುವ ಶಾಲೆಗಳ ಅಭಿವೃದ್ದಿಗೆ ಸರಕಾರಗಳೇ ಮನಸ್ಸು ಮಾಡುತ್ತಿಲ್ಲ. ಇಂತಹ ಹೊತ್ತಲ್ಲೇ ಉದ್ಯಮಿಯೋರ್ವರು (STGC VENTURES Pvt Ltd) ಉಡುಪಿ ಜಿಲ್ಲೆಯ ಕೋಟದ ಗಿಳಿಯಾರಿನಲ್ಲಿರುವ ಗಿಳಿಯಾರು ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಮಗ್ರ ಅಭಿವೃದ್ದಿಗಾಗಿ ಬರೋಬ್ಬರಿ 40 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಇದರಿಂದಾಗಿ ಒಂದರಿಂದ ಏಳನೇ ತರಗತಿವರೆಗಿನ ಶಾಲೆ ಇನ್ಮುಂದೆ ಪದವಿ ತರಗತಿವರೆಗೂ ವಿಸ್ತಾರಗೊಳ್ಳಲಿದೆ.
ಉಡುಪಿ ಜಿಲ್ಲೆಯಲ್ಲಿ ಪ್ರಖ್ಯಾತಿಯನ್ನು ಪಡೆದುಕೊಂಡಿರುವ ಗಿಳಿಯಾರಿನ ಶಾಂಭವೀ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿತ್ತು. ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಬೇಕೆಂಬುದು ಶಾಲೆಯಲ್ಲಿ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಆಸೆಯಾಗಿತ್ತು. ಆದರೆ ಸಂಪೂರ್ಣ ಶಾಲೆಯನ್ನು ನವೀಕರಣ ಮಾಡೋದಕ್ಕೆ ಕೋಟ್ಯಾಂತರ ರೂಪಾಯಿ ಹಣದ ಅಗತ್ಯವಿತ್ತು. ಇದೇ ಕಾರಣಕ್ಕೆ ಶಾಲಾ ಕಟ್ಟಡ ನಿರ್ಮಾಣ ಸಮಿತಿಯನ್ನು ರಚಿಸಲಾಗಿತ್ತು. ಶಾಲೆಯ ಹಳೆಯ ವಿದ್ಯಾರ್ಥಿ ಎಸ್ ಟಿಜಿಸಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ನ (STGC VENTURES Private Limited) ರಾಜ್ಯ ಅಧ್ಯಕ್ಷ ಕೆ ನಾಗರಾಜ ಗಾಣಿಗ ಅವರನ್ನು ಸಂಪರ್ಕಿಸಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಸಹಕಾರ ಮಾಡುವಂತೆ ಶಾಲಾ ಮುಖ್ಯೋಪಾಧ್ಯಾಯರು ಮನವಿ ಮಾಡಿದ್ದರು. ಶಿಕ್ಷಕರ ಕೋರಿಕೆಯನ್ನು ಆಲಿಸಿದ ನಾಗರಾಜ ಗಾಣಿಗ ಅವರು ತನ್ನ ಮಾಲೀಕರ ಬಳಿಯಲ್ಲಿ ಮಾತನಾಡುವುದಾಗಿ ಹೇಳಿದ್ದರು.
ಆರಂಭದಲ್ಲಿ ಒಂದರಿಂದ ಹತ್ತನೇ ತರಗತಿ ವರೆಗಿನ ಕಟ್ಟಡ ನಿರ್ಮಾಣಕ್ಕೆ ಫ್ಲ್ಯಾನ್ ರೂಪಿಸಲಾಗಿತ್ತು. ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿ ನಾಗರಾಜ ಗಾಣಿಗ ಅವರ ಮಾಲೀಕರು ಸಣ್ಣ ಪ್ರಮಾಣದ ಹಣಕಾಸಿನ ನೆರವು ದೊರೆಯಬಹುದು ಅನ್ನುವ ನಿರೀಕ್ಷೆಯಲ್ಲಿದ್ದರು. ಆದರೆ ಎಸ್ಟಿಜಿಸಿ ವೆಂಚರ್ಸ್ ಪ್ರೈವೆಟ್ ಲಿಮಿಟೆಡ್ ಮುಖ್ಯಸ್ಥರಾಗಿರುವ ವಿನೋದ್ ಕುಮಾರ್ ಅವರು ಯಾರೂ ಊಹಿಸಲಾರದಷ್ಟು ನೆರವನ್ನು ಶಾಲೆಯ ಅಭಿವೃದ್ದಿಗೆ ನೀಡಿದ್ದಾರೆ. ತಮ್ಮ ಮಾಲೀಕತ್ವದ ಎಸ್ಟಿಜಿಸಿ ವೆಂಚರ್ಸ್ ಕಂಪೆನಿಯ ( STGC VENTURES Private Limited) ಮೂಲಕ ಬರೋಬ್ಬರಿ 40 ಕೋಟಿ ರೂಪಾಯಿ ಅನುದಾನವನ್ನು ಶಾಲಾಭಿವೃದ್ದಿ ಒದಗಿಸಿದ್ದಾರೆ. ಅಷ್ಟೇ ಅಲ್ಲಾ ಶಾಲೆಯ ಕಟ್ಟಡದ ನಿರ್ಮಾಣದ ಫ್ಲ್ಯಾನ್ ರೂಪಿಸುವ ಸಲುವಾಗಿ ತಮ್ಮದೇ ಇಂಜಿನಿಯರ್ ತಂಡವನ್ನು ಶಾಲೆಗೆ ಕಳುಹಿಸಿಕೊಟ್ಟಿದ್ದಾರೆ.
ಎಸ್ಟಿಜಿಸಿ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ನೀಡಿರುವ ಹಣದಲ್ಲಿ ಇದೀಗ ಗಿಳಿಯಾರು ಶಾಂಭವಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪದವಿ ಕಾಲೇಜು ನಿರ್ಮಾಣವಾಗಲಿದೆ. ಆರಂಭಿಕ ಹಂತದಲ್ಲಿ ಒಂದನೇ ತರಗತಿಯಿಂದ ಎಸ್ಎಸ್ಎಲ್ಸಿ ವರೆಗಿನ ಕಟ್ಟಡ ನಿರ್ಮಾಣಗೊಳ್ಳಲಿದೆ. ನಂತರದಲ್ಲಿ ಹಂತ ಹಂತವಾಗಿ ಒಂದೊಂದೇ ಕಾಲೇಜು ನಿರ್ಮಿಸುವ ಯೋಜನೆಯನ್ನು ರೂಪಿಸಲಾಗಿದೆ. ಶಾಲೆಯ ಆವರಣದಲ್ಲಿ ಬೃಹತ್ ಸಭಾಂಗಣವೊಂದು ತಲೆ ಎತ್ತಲಿದೆ. ಉದ್ಯಮಿ ವಿನೋದ್ ಕುಮಾರ್ ಅವರು ಇಷ್ಟೊಂದು ದೊಡ್ಡ ಮೊತ್ತದ ಅನುದಾನ ನೀಡುತ್ತಿರುವುದು ಇದೇ ಮೊದಲೇನಲ್ಲ. ತಮಿಳುನಾಡು ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿನ ಶಾಲೆಗಳನ್ನು ಉಳಿಸುವ ಕಾರ್ಯಕ್ಕೆ ನೂರಾರು ಕೋಟಿ ರೂಪಾಯಿಯನ್ನು ವಿನಿಯೋಗಿಸಿದ್ದಾರೆ. ಅಲ್ಲದೇ ಸಾಕಷ್ಟು ಸಾಮಾಜಿಕ ಕಾರ್ಯಗಳ ಮೂಲಕ ಮೆಚ್ಚುಗೆ ಪಡೆದುಕೊಂಡಿದೆ.
ಗಿಳಿಯಾರಿನ ಶಾಂಭವಿ ವಿದ್ಯಾದಾಯಿನೀ ಅನುದಾನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಟಿಜಿಸಿ ವೆಂಚರ್ ಪ್ರೈವೇಟ್ ಲಿಮಿಟೆಡ್ ಮಾಲಿಕ ವಿನೋದ್ ಕುಮಾರ್ ಅವರು ಶಾಲಾ ಕಟ್ಟಡ ಸಮಿತಿಯ ಅಧ್ಯಕ್ಷ ಆನಂದ್ ಸಿ ಕುಂದರ್ ರವರಿಗೆ 40 ಕೋಟಿ ರೂ ಚೆಕ್ ಹಸ್ತಾಂತರ ಮಾಡಿದ್ದಾರೆ. ಈ ವೇಳೆಯಲ್ಲಿ ಮಾತನಾಡಿದ ಎಸ್ಟಿಜಿಸಿ ವೆಂಚರ್ ಪ್ರೈವೇಟ್ ಲಿಮಿಟೆಡ್ (STGC VENTURES Private Limited) ಮುಖ್ಯಸ್ಥರಾದ ವಿನೋದ್ ಕುಮಾರ್ ಅವರು, ನಮ್ಮ ಸಂಸ್ಥೆ ಈಗಾಗಲೇ ತಮಿಳುನಾಡಿನಲ್ಲಿ ಸಾಕಷ್ಟು ಶಾಲೆಗಳನ್ನು ಉಳಿಸುವ ಕಾರ್ಯವನ್ನು ಮಾಡಿದೆ. ತಮ್ಮ ಕಂಪೆನಿಗೆ ಬರುತ್ತಿರುವ ಆದಾಯದ ಒಂದು ಪಾಲನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಕೋಟ ಪರಿಸರಕ್ಕೆ ಉಚಿತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೊಡುಗೆಯಾಗಿ ನೀಡುವುದಾಗಿ ಭರವಸೆ ನೀಡಿದ್ದಾರೆ.
ಯಾವುದೇ ಒಂದು ಊರು ಅಭಿವೃದ್ಧಿಗೊಳ್ಳಬೇಕಾದರೆ ಆ ಪರಿಸರದ ಶೈಕ್ಷಣಿಕ ಕೇಂದ್ರವನ್ನು ಅವಲಂಬಿತವಾಗಿ ಇರುತ್ತದೆ. ಆ ಮೂಲಕ ಶಾಲೆಗಳು ಹೊಸತನದ ಕೇಂದ್ರವಾಗಿ ರೂಪುಗೊಳ್ಳಬೇಕು. ಪ್ರಸ್ತುತ ಕಾಲಘಟ್ಟದಲ್ಲಿ ಆಂಗ್ಲಮಾಧ್ಯಮದ ದಿಸೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ ಇದನ್ನು ಗಮನಿಸಿದ ನಮ್ಮ ಸಂಸ್ಥೆ ಕೆಲವೊಂದು ಸರಕಾರಿ ಕನ್ನಡಮಾಧ್ಯಮ ಶಾಲೆಗಳ ಅಭಿವೃದ್ಧಿಗೆ ಟೊಂಕಕಟ್ಟಿ ಕಾರ್ಯನಿರ್ವಹಿಸುತ್ತಿದೆ. ನಾವು ಎಷ್ಟು ಬೆಳೆದೆವು ಎನ್ನುವುದು ಮುಖ್ಯವಲ್ಲ ನಾನು ನನ್ನ ಹುಟ್ಟೂರಿನ ಬಗ್ಗೆ ಎಷ್ಟು ಅಭಿಮಾನ ಹಾಗೂ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿ ಕೆಲಸ ನಿರ್ವಹಿಸುತ್ತೇನೆ ಎಂಬುವುದನ್ನು ಮನಗಾಣಬೇಕಿದೆ ಎಂದು ಶಾಂಭವಿ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಎಸ್.ಟಿ.ಜಿ.ಸಿ ವೆಂಚರ್ ಪ್ರೈವೇಟ್ ಲಿಮಿಟೆಡ್ ರಾಜ್ಯ ಅಧ್ಯಕ್ಷ ಕೆ ನಾಗರಾಜ ಗಾಣಿಗ ಹೇಳಿದ್ದಾರೆ.
ಶಾಲೆಯ ವತಿಯಿಂದ ಎಸ್ಟಿಜಿಸಿ ವೆಂಚರ್ ಪ್ರೈವೇಟ್ ಲಿಮಿಟೆಡ್ ಮುಖ್ಯಸ್ಥರಾದ ವಿನೋದ್ ಕುಮಾರ್, ಹಳೆ ವಿದ್ಯಾರ್ಥಿ ಹಾಗೂ ಎಸ್.ಟಿಜಿಸಿ ಸಂಸ್ಥೆಯ ರಾಜ್ಯಾಧ್ಯಕ್ಷ ಕೆ.ನಾಗರಾಜ್ ಗಾಣಿಗ ಹಾಗೂ ತಮಿಳುನಾಡು ಅಧ್ಯಕ್ಷ ಕಾತೀಕೆನ್ ಎಸ್ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಶಾಲಾ ಕಟ್ಟಡ ಸಮಿತಿಯ ಅಧ್ಯಕ್ಷ ಆನಂದ ಸಿ.ಕುಂದರ್, ಶಾಲಾ ಆಡಳಿತ ಮಂಡಳಿಯ ಸಂಚಾಲಕ ಸಚಿನ್ ಕಾರಂತ್, ಆಡಳಿತ ಮಂಡಳಿ ಅಧ್ಯಕ್ಷ ಕೆ.ರಾಜಾರಾಮ್ ಐತಾಳ್, ಶಾಲಾ ಆಡಳಿತ ಮಂಡಳಿಯ ನಿಕಟಪೂರ್ವ ಸಂಚಾಲಕ ಸತೀಶ್ ಕಾರಂತ್, ಶಾಲಾ ಮುಖ್ಯ ಶಿಕ್ಷಕ ದಿವಾಕರ್ ರಾವ್, ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಎಂ.ಎನ್ ಮಧ್ಯಸ್ಥ, ಕಟ್ಟಡ ಸಮಿತಿಯ ಪ್ರಮುಖರಾದ ರಾಘವ ನಾಯಕ್, ಇಬ್ರಾಹಿಂ ಸಾಹೇಬ್ ಕೋಟ, ಜಿ.ಸತೀಶ್ ಹೆಗ್ಡೆ, ಚಂದ್ರಯ್ಯ ಆಚಾರ್ಯ, ರಾಘವೇಂದ್ರ ಪೂಜಾರಿ,ಜಿ.ವಿ ಅಶೋಕ್ ಹೇರ್ಳೆ, ಸದಾನಂದ ಪೂಜಾರಿ, ರವೀಂದ್ರ ಜೋಗಿ, ಚಂದ್ರ ಪೂಜಾರಿ, ಸಂತೋಷ್ ಪ್ರಭು, ಜಿ.ತಿಮ್ಮ ಪೂಜಾರಿ, ರಘು ತಿಂಗಳಾಯ, ಶಿವರಾಮ ಗಾಣಿಗ, ಸಾಲಿಗ್ರಾಮ ಶ್ರೀಗುರುನರಸಿಂಹ ದೇವಳದ ಸದಸ್ಯ ಕೆ.ಅನಂತಪದ್ಮನಾಭ ಐತಾಳ್ ಮುಂತಾದವರು ಉಪಸ್ಥಿತರಿದ್ದರು. ಕೋಟ್ಯಾಂತರ ರೂಪಾಯಿ ಹಣವನ್ನು ಶಾಲೆ, ಸಾಮಾಜಿಕ ಕಾರ್ಯಕ್ಕೆ ವಿನಿಯೋಗಿಸುತ್ತಿರುವ ಉದ್ಯಮಿ ವಿನೋದ್ ಕುಮಾರ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಒಟ್ಟಿನಲ್ಲಿ ಗುಣಮಟ್ಟ ಶಿಕ್ಷಣವನ್ನು ನೀಡುವ ಮೂಲಕ ಖ್ಯಾತಿ ಪಡೆದಿರುವ ಶಾಂಭವಿ ಶಾಲೆ ಇನ್ಮುಂದೆ ಹೊಸ ರೂಪವನ್ನು ಪಡೆದುಕೊಳ್ಳಲಿದೆ. ಮಾತ್ರವಲ್ಲ ಗ್ರಾಮೀಣ ಭಾಗದ ಮಕ್ಕಳಿಗೆ ಇನ್ನಷ್ಟು ಉತ್ತಮ ಶಿಕ್ಷಣ ನೀಡುವಲ್ಲಿ ಸಹಕಾರಿಯಾಗಲಿದೆ.
ಇದನ್ನೂ ಓದಿ : NPS Cancel : ಎನ್ಪಿಎಸ್ ರದ್ದು, ಕೇಂದ್ರ ಸಮಾನ ವೇತನ : ಸಿಎಂ ಬೊಮ್ಮಾಯಿಗೆ ಹೊರಟ್ಟಿ ಪತ್ರ
ಇದನ್ನೂ ಓದಿ : Summer vacation : ಪ್ರೌಢ, ಪ್ರಾಥಮಿಕ ಶಾಲೆಗಳಿಗೆ ಎಪ್ರಿಲ್ 10 ರಿಂದ ಬೇಸಿಗೆ ರಜೆ : ಮೇ 16 ಶಾಲಾರಂಭ
(save Kannada school, STGC VENTURES Private Limited MD Vinod Kumar Donated Rs 40 crore to Giliyaru Shambhavi School )
Comments are closed.