ದೇಶಾದ್ಯಂತ 5.8 ಕೋಟಿ ಬಿಪಿಎಲ್ ಕಾರ್ಡ್ಗಳು ರದ್ದು : ಅನರ್ಹರ ಆಟಕ್ಕೆ ಕೇಂದ್ರದ ಅಂಕುಶ
ರಾಜ್ಯ ಸರ್ಕಾರವು ಕರ್ನಾಟಕದಲ್ಲಿ ನಕಲಿ ಬಿಪಿಎಲ್ ಕಾರ್ಡ್ ಫಲಾನುಭವಿಗಳನ್ನು ಪತ್ತೆ ಮಾಡಿ ಅವರ ಕಾರ್ಡ್ಗಳನ್ನು ರದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಕೂಡ ಮಹತ್ವದ ಕ್ರಮ ಕೈಗೊಂಡಿದೆ. ರೇಷನ್ ಕಾರ್ಡ್ ಡಿಜಿಟಲೀಕರಣ ವ್ಯವಸ್ಥೆ ಮೂಲಕ ಬರೋಬ್ಬರಿ 5.8 ಕೋಟಿ ಅಕ್ರಮ ಬಿಪಿಎಲ್ ಕಾರ್ಡ್ಗಳನ್ನು ದೇಶವ್ಯಾಪಿ ರದ್ದು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
ಈ ಸಂಬಂಧ ಮಾಹಿತಿ ನೀಡಿದ ಕೇಂದ್ರ ಆಹಾರ ಸಚಿವಾಲಯವು, ಮಾಸಿಕವಾಗಿ 80.6 ಕೋಟಿ ಜನರಿಗೆ ಪಡಿತರ ವ್ಯವಸ್ಥೆ ಮೂಲಕ ರೇಷನ್ ನೀಡಲಾಗುತ್ತಿದೆ. ಆದರೆ ನಕಲಿ ಕಾರ್ಡ್ದಾರರಿಂದ ಜಾಗತಿಕ ಆಹಾರ ಭದ್ರತಾ ಖಾತರಿ ಯೋಜನೆಯ ಸಮರ್ಪಕ ಅನುಷ್ಠಾನ ಸಾಧ್ಯವಿಲ್ಲವಾದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ.
ಇನ್ನು ರೇಷನ್ ಪಡೆಯಲು ನ್ಯಾಯಬೆಲೆ ಅಂಗಡಿಗಳಿಗೆ ಬಂದ ಸಂದರ್ಭದಲ್ಲಿ ಕಾರ್ಡ್ಗಳನ್ನು ರದ್ದುಗೊಳಿಸಲಾಗುತ್ತಿದೆ. ಆಧಾರ್ ವೆರಿಫಿಕೇಷನ್ ಹಾಗೂ ಇಕೆವೈಸಿ ವಿಧಾನಗಳನ್ನು ಬಳಕೆ ಮಾಡಿ ಅನರ್ಹರನ್ನು ಬಿಪಿಎಲ್ ಗುಂಪಿನಿಂದ ಹೊರತಳ್ಳಲಾಗುತ್ತಿದೆ. ಪಡಿತರ ಅಂಗಡಿಗಳಲ್ಲಿ ಇಪಿಒಎಸ್ ಯಂತ್ರಗಳನ್ನು ಅಳವಡಿಕೆ ಮಾಡಲಾಗಿದ್ದು ಈ ಯಂತ್ರದ ಮೂಲಕವೇ ಅನರ್ಹ ಬಿಪಿಎಲ್ ಫಲಾನುಭವಿಗಳನ್ನು ಪತ್ತೆ ಮಾಡಲಾಗುತ್ತಿದೆ. ಈ ಮೂಲಕ ಪಡಿತರ ಸೋರಿಕೆಗೆ ಬ್ರೇಕ್ ಹಾಕುವ ದಿಟ್ಟ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
ಇದನ್ನೂ ಓದಿ: ನರೇಗಾ ಕ್ರಿಯಾ ಯೋಜನೆಗೆ ಅರ್ಜಿ ಸಲ್ಲಿಸಲು ನಾಳೆ ಕೊನೆ ದಿನ
ಈ ಹಿಂದೆ ರಾಜ್ಯದಲ್ಲಿಯೂ ಬಿಪಿಎಲ್ ಕಾರ್ಡ್ನ ಮಾರ್ಗಸೂಚಿಗಳಲ್ಲಿ ಬದಲಾವಣೆ ತರಲಾಗಿತ್ತು. ಪರಿಣಾಮ ರಾಜ್ಯದಲ್ಲಿಯೂ 5 ಲಕ್ಷಕ್ಕೂ ಅಧಿಕ ಫಲಾನುಭವಿಗಳನ್ನು ಬಿಪಿಎಲ್ ಪಟ್ಟಿಯಿಂದ ಹೊರಗಿಡಲಾಗಿದೆ. ಇದರಲ್ಲಿ ಬಹುತೇಕರು ಬಿಪಿಎಲ್ ಕಾರ್ಡ್ನಿಂದ ಸಿಗುವ ಪಡಿತರಕ್ಕಿಂತ ಹೆಚ್ಚಾಗಿ ಬಿಪಿಎಲ್ ಫಲಾನುಭವಿಗಳಿಗೆ ಇರುವ ವೈದ್ಯಕೀಯ ಸೇವೆ ಸೇರಿದಂತೆ ಇನ್ನಿತರ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಈ ಕಾರ್ಡ್ಗಳನ್ನು ಹೊಂದಿದ್ದರು ಎಂದು ತಿಳಿದುಬಂದಿತ್ತು. ಆದರೆ ಈಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ನಕಲಿ ಬಿಪಿಎಲ್ ಫಲಾನುಭವಿಗಳ ಮೇಲೆ ಕಣ್ಣಿಟ್ಟಿದ್ದು ಶೀಘ್ರದಲ್ಲೇ ಮತ್ತಷ್ಟು ನಕಲಿ ಬಿಪಿಎಲ್ದಾರರ ಕಾರ್ಡ್ಗೆ ಕೊಕ್ಕೆ ಬೀಳಲಿದೆ.



