ಜೂನ್‌ನಿಂದ ಮನೆ ಖರ್ಚು ಡಬಲ್ ಆಗುತ್ತಾ? ಪೆಟ್ರೋಲ್ ಬೆಲೆ ಏರಿಕೆಯಿಂದ ಹೊಸ ಟೆನ್ಷನ್

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ದೇಶದಲ್ಲಿ ಮತ್ತೆ ಬೆಲೆ ಏರಿಕೆ ಆತಂಕ ಶುರುವಾಗಿದೆ. ಸಾರಿಗೆ ವೆಚ್ಚ ಹೆಚ್ಚಾದರೆ ತರಕಾರಿ LPG ಸಿಲಿಂಡರ್‌ವರೆಗೆ ಎಲ್ಲದರ ಮೇಲೂ ಪರಿಣಾಮ ಬೀಳುವ ಸಾಧ್ಯತೆ ಇದೆ.

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏಕಾಏಕಿ ಏರಿಕೆಯಾಗಿರುವುದು ಸಾಮಾನ್ಯ ಜನರಲ್ಲಿ ಆತಂಕ ಮೂಡಿಸಿದೆ. ಲೀಟರ್‌ಗೆ ಪೆಟ್ರೋಲ್ ದರ ₹2ಕ್ಕಿಂತ ಹೆಚ್ಚು ಹಾಗೂ ಡೀಸೆಲ್ ದರ ಕೂಡ ಹೆಚ್ಚಾಗಿರುವ ಹಿನ್ನೆಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆ ಆಗಬಹುದೇ ಎಂಬ ಚರ್ಚೆ ಜೋರಾಗಿದೆ.

ತಜ್ಞರ ಪ್ರಕಾರ, ಇಂಧನ ದರ ಏರಿಕೆ ಕೇವಲ ವಾಹನ ಸವಾರರ ಸಮಸ್ಯೆಯಲ್ಲ. ಇದರ ಪರಿಣಾಮ ನೇರವಾಗಿ ಮನೆಯ ತಿಂಗಳ ಬಜೆಟ್ ಮೇಲೂ ಬೀಳುವ ಸಾಧ್ಯತೆ ಇದೆ.

ಜಾಗತಿಕ ಉದ್ವಿಗ್ನತೆಯ ಪರಿಣಾಮ

ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ, ಹಾರ್ಮುಜ್ ಜಲಸಂಧಿ ಸಮಸ್ಯೆ ಹಾಗೂ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯ ಅನಿಶ್ಚಿತತೆ ಇಂಧನ ದರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

ಭಾರತ ತನ್ನ ಅಗತ್ಯದ ಬಹುಪಾಲು ಕಚ್ಚಾ ತೈಲವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯ ಬದಲಾವಣೆಗಳು ದೇಶೀಯ ದರಗಳ ಮೇಲೆ ತಕ್ಷಣ ಪರಿಣಾಮ ಬೀರುತ್ತವೆ.

ಏರಿಕೆಯಾಗುವ ಸಾಧ್ಯತೆ ಇರುವವು ಯಾವುವು?

ಡೀಸೆಲ್ ದರ ಏರಿದರೆ ಮೊದಲು ಸಾರಿಗೆ ಕ್ಷೇತ್ರದ ಮೇಲೆ ಪರಿಣಾಮ ಬೀಳುತ್ತದೆ. ಬಸ್, ಆಟೋ, ಟ್ಯಾಕ್ಸಿ ಹಾಗೂ ಕ್ಯಾಬ್ ದರಗಳು ಹೆಚ್ಚಾಗುವ ಸಾಧ್ಯತೆ ಇದೆ.

ಇದರ ಜೊತೆಗೆ ಸರಕು ಸಾಗಣೆ ವೆಚ್ಚ ಹೆಚ್ಚಾದರೆ ತರಕಾರಿ, ಹಣ್ಣು, ಧಾನ್ಯ, ಹಾಲು ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

LPG ಮತ್ತು ಡೆಲಿವರಿ ಚಾರ್ಜ್ ಮೇಲೂ ಪರಿಣಾಮ?

ಈಗಾಗಲೇ ವಾಣಿಜ್ಯ LPG ದರಗಳಲ್ಲಿ ಏರಿಕೆ ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಗೃಹ ಬಳಕೆಯ LPG ಸಿಲಿಂಡರ್ ದರವೂ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.

ಇನ್ನು ಫುಡ್ ಡೆಲಿವರಿ ಮತ್ತು ಇ-ಕಾಮರ್ಸ್ ಕಂಪನಿಗಳು ಕೂಡ ಹೆಚ್ಚಿದ ಲಾಜಿಸ್ಟಿಕ್ಸ್ ವೆಚ್ಚದ ಕಾರಣ ಡೆಲಿವರಿ ಶುಲ್ಕ ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.

ರೈತರ ಮೇಲೂ ಹೆಚ್ಚುವರಿ ಹೊರೆ

ಗ್ರಾಮೀಣ ಪ್ರದೇಶಗಳಲ್ಲಿ ಡೀಸೆಲ್ ದರ ಏರಿಕೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಟ್ರ್ಯಾಕ್ಟರ್, ನೀರಿನ ಪಂಪ್ ಹಾಗೂ ಕೃಷಿ ಯಂತ್ರೋಪಕರಣಗಳಿಗೆ ರೈತರು ಹೆಚ್ಚಾಗಿ ಡೀಸೆಲ್ ಮೇಲೆಯೇ ಅವಲಂಬಿತರಾಗಿದ್ದಾರೆ.

ಹೀಗಾಗಿ ಕೃಷಿ ವೆಚ್ಚ ಹೆಚ್ಚಾದರೆ ಅದರ ಹೊರೆ ಕೊನೆಗೆ ಆಹಾರ ಪದಾರ್ಥಗಳ ಬೆಲೆ ರೂಪದಲ್ಲಿ ಜನರ ಮೇಲೆಯೇ ಬೀಳಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಮುಂದೇನು?

ಕೇಂದ್ರ ಸರ್ಕಾರ ಇದುವರೆಗೆ ಇಂಧನ ದರ ನಿಯಂತ್ರಣಕ್ಕಾಗಿ ತೆರಿಗೆ ಕಡಿತದಂತಹ ಕ್ರಮಗಳನ್ನು ಕೈಗೊಂಡಿತ್ತು. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ಮುಂದುವರಿದು ಏರಿದರೆ ಮತ್ತೆ ಬೆಲೆ ಏರಿಕೆ ತಪ್ಪದು ಎನ್ನುವ ಮಾತುಗಳು ಕೇಳಿಬರುತ್ತಿವೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories